ಚಿನ್ನದ ಸ್ಮಗಲಿಂಗ್ ಜೊತೆ ಸ್ವಪ್ನ ಸುರೇಶ್ ಮೇಲೆ ಮತ್ತೊಂದು ಕೇಸ್
ತಿರುವನಂತಪುರಂ, ಜುಲೈ 15: ಕೇರಳದ ಚಿನ್ನ ಸ್ಮಗಲಿಂಗ್ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನ ಸುರೇಶ್ ಮೇಲೆ ಕೇರಳ ಪೊಲೀಸರು ಮತ್ತೊಂದು ಪ್ರಕರಣ ದಾಖಲಿಸಿದ್ದಾರೆ.
Recommended Video
ಸ್ವಪ್ನ ಹಾಗೂ ಸಂದೀಪ್ ಅವರನ್ನು 14 ದಿನಗಳ ಕಾಲ ರಾಷ್ಟ್ರೀಯ ತನಿಖಾ ತಂಡ ( ಎನ್ಐಎ) ಕಸ್ಟಡಿಗೆ ನೀಡಲಾಗಿದೆ. ಈ ನಡುವೆ ಮತ್ತೊಬ್ಬ ಆರೋಪಿ ಫಜೀಲ್ ಫರೀದ್ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಲಾಗಿದೆ.
ಚಿನ್ನದ ಸ್ಮಗಲಿಂಗ್ ಕೇಸ್: ಫಜೀಲ್ ವಿರುದ್ಧ ಜಾಮೀನು ರಹಿತ ವಾರೆಂಟ್
ಕೇರಳ ಐಟಿ ಮೂಲಸೌಕರ್ಯ ಲಿಮಿಟೆಡ್ ನಲ್ಲಿ ಗುತ್ತಿಗೆ ಆಧಾರಿತ ಉದ್ಯೋಗದಲ್ಲಿದ್ದ ಸ್ವಪ್ನ ಅವರು ಈ ಪ್ರತಿಷ್ಠಿತ ಹುದ್ದೆ ಪಡೆಯಲು ನಕಲಿ ಪ್ರಮಾಣ ಪತ್ರ ನೀಡಿದ್ದಾರೆ ಎಂದು ದೂರು ದಾಖಲಾಗಿದೆ. ಕಂಟೋನ್ಮೇಂಟ್ ಪೊಲೀಸರು ದೂರು ದಾಖಲಿಸಿಕೊಂಡಿದ್ದು,ಸ್ಪೇಸ್ ಪಾರ್ಕ್ ನಲ್ಲಿ ಐಟಿ ಕನ್ಸಲ್ಟೆಂಟ್ ಆಗಿ ಕಾರ್ಯ ನಿರ್ವಹಿಸಲು ಸ್ವಪ್ನ ನೀಡಿದ್ದ ಪದವಿ ಪ್ರಮಾಣ ಪತ್ರ ನಕಲಿ ಎಂದು ತಿಳಿದು ಬಂದಿದ್ದು, ಫೋರ್ಜರಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಸ್ವಪ್ನ ಅಲ್ಲದೆ ಪ್ರೈಸ್ ವಾಟರ್ ಹೌಸ್ ಕೂಪರ್ಸ್, ವಿಷನ್ ಟೆಕ್ನಾಲಜೀಸ್ ಸಂಸ್ಥೆ ಕೂಡಾ ಆರೋಪಿಗಳಾಗಿದ್ದಾರೆ.
ಇದಕ್ಕೂ ಮುನ್ನ ಮಹಾರಾಷ್ಟ್ರದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಟೆಕ್ನಾಲಜೀಸ್ ವಿವಿ ಕೂಡಾ ಸ್ವಪ್ನ ನೀಡಿದ್ದ ಬಿ.ಕಾಂ ಪ್ರಮಾಣ ಪತ್ರ ನಕಲಿ ಎಂದು ದೃಢಪಡಿಸಿತ್ತು.
ನಕಲಿ ಪ್ರಮಾಣ ಪತ್ರ ನೀಡಿದ್ದರೂ ಸಿಎಂ ಪಿಣರಾಯಿ ವಿಜಯನ್ ಹೊಂದಿರುವ ಐಟಿ ಇಲಾಖೆಯಡಿಯಲ್ಲಿ ಸ್ವಪ್ನ ಕಾರ್ಯ ನಿರ್ವಹಿಸಲು ಗುತ್ತಿಗೆ ಪಡೆದುಕೊಂಡಿದ್ದು ಹೇಗೆ ಎಂದು ತನಿಖೆ ಆರಂಭವಾಗಿದೆ. ಈ ನಡುವೆ ಐಟಿ ಕಾರ್ಯದರ್ಶಿ ಎಂ ಶಿವಶಂಕರ್ ಅವರು ಕಸ್ಟಮ್ ಅಧಿಕಾರಿಗಳ ಮುಂದೆ 9 ಗಂಟೆಗಳ ಕಾಲ ವಿಚಾರಣೆಗೊಳಪಟ್ಟಿದ್ದಾರೆ. ವಿಚಾರಣೆ ನಡೆದು ತಪಿತಸ್ಥರು ಎಂದು ಸಾಬೀತಾಗುವ ತನಕ ಶಿವಶಂಕರ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲ್ಲ ಎಂದು ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.