ಕೇರಳದಲ್ಲಿ ಕೈಗೆಟುಕುವ ದರದಲ್ಲಿ ಟ್ಯಾಕ್ಸಿ: ಇ-ಟ್ಯಾಕ್ಸಿ ಸೇವೆಗೆ ಪಿಣರಾಯಿ ವಿಜಯನ್ ಚಾಲನೆ
ತಿರುವನಂತಪುರಂ, ಆಗಸ್ಟ್ 17: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬುಧವಾರ ಎಲ್ಡಿಎಫ್ ಸರ್ಕಾರದ ಇ-ಟ್ಯಾಕ್ಸಿ ಸೇವಾ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದರು.
'ಕೇರಳ ಸವಾರಿ' ಹೆಸರಿನಲ್ಲಿ ಆರಂಭವಾಗಿರುವ ಆಪ್ ದೇಶದ ಮೊದಲ ಯೋಜನೆ ಎಂದು ಪರಿಗಣಿಸಲಾಗಿದೆ. ಪಿಣರಾಯಿ ಅವರು ಆ್ಯಪ್ ಬಿಡುಗಡೆ ಸಮಾರಂಭದಲ್ಲಿ ಕೇರಳ ರಾಜ್ಯ ಕಾರ್ಮಿಕ ಇಲಾಖೆಯು ಹೊರತಂದಿರುವ ಹೊಸ ಆನ್ಲೈನ್ ಟ್ಯಾಕ್ಸಿ ಬಾಡಿಗೆ ಸೇವೆಯಡಿಯಲ್ಲಿ ಕಾರ್ಯನಿರ್ವಹಿಸುವ ಆಟೋ-ರಿಕ್ಷಾಗಳಿಗೆ ಅವರು ಹಸಿರು ನಿಶಾನೆ ತೋರಿದರು.
ಕೇರಳ ಸರ್ಕಾರದಿಂದ ಮೊದಲ ಬಾರಿಗೆ ಕ್ಯಾಬ್ ಸೇವೆ ಆರಂಭ
ಕೈಗೆಟುಕುವ ದರದಲ್ಲಿ ಸಾರ್ವಜನಿಕರಿಗೆ ಸುರಕ್ಷಿತ ಮತ್ತು ವಿವಾದ ಮುಕ್ತ ಪ್ರಯಾಣದ ಸೇವೆ ಒದಗಿಸಲು ಕೇರಳದಲ್ಲಿ ಚಾಲ್ತಿಯಲ್ಲಿರುವ ಆಟೋ ರಿಕ್ಷಾಗಳನ್ನು ಆಪ್ನಡಿ ಸೇವೆಗೆ ಲಭ್ಯವಾಗಿಸುವುದು ಇದರ ಉದ್ದೇಶವಾಗಿದೆ. ಹಲವಾರು ಸವಾಲುಗಳನ್ನು ಎದುರಿಸುತ್ತಿರುವ ಆಟೋರಿಕ್ಷಾ-ಟ್ಯಾಕ್ಸಿ ಕಾರ್ಮಿಕ ವಲಯಕ್ಕೆ ಸಹಾಯ ಹಸ್ತವಾಗಿಯೂ ಇದನ್ನು ಕಲ್ಪಿಸಲಾಗಿದೆ ಎಂದು ಸರ್ಕಾರ ಕಳೆದ ತಿಂಗಳು ಸೇವೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದಾಗ ಹೇಳಿತ್ತು.
ಈಗಿರುವ ಎಲ್ಲ ಆನ್ಲೈನ್ ಕ್ಯಾಬ್ ಸೇವೆಗಳಲ್ಲಿ ಮೋಟಾರು ಸಾರಿಗೆ ಕಾರ್ಮಿಕರು ಪಡೆಯುವ ದರಕ್ಕೂ ಪ್ರಯಾಣಿಕರಿಂದ ವಿಧಿಸುವ ದರಕ್ಕೂ ಶೇ.20-30ರಷ್ಟು ವ್ಯತ್ಯಾಸವಿದೆ ಎಂದು ತಿಳಿದು ಬಂದಿದೆ ಎಂದು ಸರ್ಕಾರ ಹೇಳಿತ್ತು. ಜನರು ಆನ್ಲೈನ್ ಟ್ಯಾಕ್ಸಿ ಸೇವೆಗಳನ್ನು ಬಳಸಲು ಬಯಸುತ್ತಿರುವುದರಿಂದ, ಅನೇಕ ಸಾಂಪ್ರದಾಯಿಕ ಟ್ಯಾಕ್ಸಿ ಸ್ಟ್ಯಾಂಡ್ಗಳು ಕಣ್ಮರೆಯಾಗಿವೆ ಮತ್ತು ಹೆಚ್ಚಿನ ಸಂಖ್ಯೆಯ ಮೋಟಾರು ಸಾರಿಗೆ ನೌಕರರು ನಿರುದ್ಯೋಗಿಗಳಾಗಿದ್ದಾರೆ ಎಂದು ಸರ್ಕಾರ ಹೇಳಿದೆ.
ಕೇರಳ ಮೋಟಾರು ಸಾರಿಗೆ ಕಾರ್ಮಿಕರ ಕಲ್ಯಾಣ ನಿಧಿ ಮಂಡಳಿಯು ಈ ಸೇವೆಯ ಅನುಷ್ಠಾನ ಸಂಸ್ಥೆಯಾಗಿದ್ದು, ಇದು ಕಾನೂನು ಮಾಪನಶಾಸ್ತ್ರ, ಸಾರಿಗೆ, ಐಟಿ, ಪೊಲೀಸ್ ಮತ್ತು ಮುಂತಾದ ಇಲಾಖೆಗಳ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಇತರ ಆನ್ಲೈನ್ ಟ್ಯಾಕ್ಸಿಗಳಲ್ಲಿ ಹೆಚ್ಚುವರಿಯಾಗಿದ್ದ ಶೇಕಡಾ 20 ರಿಂದ 30 ರಷ್ಟಿದ್ದ ದರಕ್ಕೆ ಸರ್ಕಾರ ನಿಗದಿಪಡಿಸಿದ ಕೇರಳ ಸವಾರಿ ಕೇವಲ ಎಂಟು ಶೇಕಡಾ ಸೇವಾ ಶುಲ್ಕವನ್ನು ವಿಧಿಸುತ್ತದೆ ಎಂದು ಸರ್ಕಾರ ಹೇಳಿತ್ತು.
ಸೇವಾ ಶುಲ್ಕವಾಗಿ ಸಂಗ್ರಹಿಸಿದ ಮೊತ್ತವನ್ನು ಯೋಜನೆಯ ಅನುಷ್ಠಾನ ಮತ್ತು ಪ್ರಯಾಣಿಕರಿಗೆ ಮತ್ತು ಚಾಲಕರಿಗೆ ಪ್ರಚಾರದ ಪ್ರೋತ್ಸಾಹಕ್ಕಾಗಿ ಬಳಸಲಾಗುವುದು ಎಂದು ಅದು ಹೇಳಿದೆ. ಈ ಯೋಜನೆಗೆ ಸೇರ್ಪಡೆಗೊಳ್ಳುವ ಚಾಲಕರಿಗೆ ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಲಾಗಿದೆ. ಅಲ್ಲದೆ ಯಾವುದೇ ಅಪಘಾತ ಅಥವಾ ಅಪಾಯದ ಸಂದರ್ಭದಲ್ಲಿ ಬಳಸಬಹುದಾದ 'ಪ್ಯಾನಿಕ್ ಬಟನ್' ವೈಶಿಷ್ಟ್ಯವನ್ನು ಕೂಡ ಅಪ್ಲಿಕೇಶನ್ ಹೊಂದಿದೆ.
ರಾಜ್ಯಾದ್ಯಂತ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ. ಪ್ರಸ್ತುತ, ತಿರುವನಂತಪುರಂ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ಸುಮಾರು 500 ಆಟೋ- ಟ್ಯಾಕ್ಸಿ ಚಾಲಕರು ಯೋಜನೆಯ ಸದಸ್ಯರಾಗಿದ್ದಾರೆ. ವಿವಿಧ ಇಲಾಖೆಗಳ ಅಧಿಕಾರಿಗಳು ಅವರಿಗೆ ವಿವಿಧ ವಿಷಯಗಳಲ್ಲಿ ತರಬೇತಿ ನೀಡಿದ್ದಾರೆ ಎಂದು ಸರ್ಕಾರ ಹೇಳಿದೆ.