ಕಾಸರಗೋಡು-ದಕ್ಷಿಣ ಕನ್ನಡ ಗಡಿ ತೆರವಿಗೆ ಹೈಕೋರ್ಟ್ ಆದೇಶ
ತಿರುವನಂತಪುರಂ, ಆಗಸ್ಟ್ 27: ಕೇರಳ-ಕರ್ನಾಟಕ ಸಂಪರ್ಕಿಸುವ ಪ್ರಮುಖ ನಾಲ್ಕು ರಸ್ತೆಗಳ ಗಡಿಗಳನ್ನು ತೆರವುಗೊಳಿಸಬೇಕು ಎಂದು ಕೇರಳ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ.
ಕೇಂದ್ರ ಸರ್ಕಾರ ಅಂತರರಾಜ್ಯ ರಸ್ತೆಗಳ ಬಂದ್ ತೆರವುಗೊಳಿಸುವಂತೆ ಆದೇಶ ನೀಡಿತ್ತು. ಆದರೆ ಕೇರಳ ಸರ್ಕಾರ ಕೇರಳ-ಕರ್ನಾಟಕ ಗಡಿ ಬಂದ್ ಅನ್ನು ತೆರವು ಮಾಡಿರಲಿಲ್ಲ.
ಕಾಸರಗೋಡು ಬಿಜೆಪಿ ಅಧ್ಯಕ್ಷ, ವಕೀಲ ಕೆ. ಶ್ರೀಕಾಂತ್ ಈ ಕುರಿತು ಕೇರಳ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಗಡಿಗಳನ್ನು ತೆರವುಗೊಳಿಸಬೇಕು ಎಂದು ಹೇಳಿದೆ.

ಕಾಸರಗೋಡು-ದಕ್ಷಿಣ ಕನ್ನಡ ಸಂಪರ್ಕಿಸುವ ಜಾಲ್ಸೂರು, ಪಾಣತ್ತೂರು, ಪೆರ್ಲ ಗಡಿಗಳಲ್ಲಿ ಹಾಕಿರುವ ಬಂದ್ ತೆರವುಗೊಳಿಸಬೇಕು ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ. ಇದರಿಂದಾಗಿ ಅಂತರರಾಜ್ಯ ಸಂಚಾರಕ್ಕೆ ಇದ್ದ ತೊಡಕು ನಿವಾರಣೆಯಾಗಿದೆ.
ಕೋವಿಡ್ ಸೋಂಕಿನ ಭೀತಿಯ ಕಾರಣಕ್ಕೆ ದಕ್ಷಿಣ ಕನ್ನಡ-ಕಾಸರಗೋಡು ಸಂಪರ್ಕಿಸುವ 14ಕ್ಕೂ ಅಧಿಕ ರಸ್ತೆಗಳನ್ನು ಮಣ್ಣು ಹಾಕಿ ಕೇರಳ ಬಂದ್ ಮಾಡಿತ್ತು. ಇದರಿಂದಾಗಿ ಉಭಯ ಜಿಲ್ಲೆಗಳ ನಡುವೆ ಸಂಚಾರ ನಡೆಸುವ ಗ್ರಾಮೀಣ ಪ್ರದೇಶದ ಜನರಿಗೆ ತೊಂದರೆ ಉಂಟಾಗಿತ್ತು.
ಕೇರಳ ರಾಜ್ಯದಲ್ಲಿ ಪ್ರಸ್ತುತ ಕೋವಿಡ್ ಸೋಂಕಿತರ ಸಂಖ್ಯೆ 64,355. ದಕ್ಷಿಣ ಕನ್ನಡದಲ್ಲಿ ಬುಧವಾರ 314 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 11092.












Click it and Unblock the Notifications