ರಾಜ್ಯಕ್ಕೆ ಬರುವವರಿಗೆ ಹೊಸ ಮಾರ್ಗಸೂಚಿ ಪ್ರಕಟಿಸಿದ ಕೇರಳ
ತಿರುವನಂತಪುರಂ, ಜೂನ್ 15 : ಕಡಿಮೆ ದಿನಗಳ ಅವಧಿಗಾಗಿ ರಾಜ್ಯಕ್ಕೆ ಭೇಟಿ ನೀಡುವವರಿಗೆ ಕೇರಳ ಸರ್ಕಾರ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಈ ಮಾರ್ಗಸೂಚಿ 7 ದಿನಗಳ ಕಾಲ ರಾಜ್ಯದಲ್ಲಿ ವಾಸ್ತವ್ಯ ಹೂಡುವವರಿಗೆ ಅನ್ವಯವಾಗಲಿದೆ ಎಂದು ಸರ್ಕಾರ ಪ್ರಕಟಿಸಿದೆ.
ಕೇರಳ ಸರ್ಕಾರ ಸೋಮವಾರ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ರಾಜ್ಯಕ್ಕೆ ಆಗಮಿಸಿ 7 ದಿನ ವಾಸ್ತವ್ಯ ಹೂಡಬಹುದಾಗಿದ್ದು, 8ನೇ ದಿನ ಹೊರಡಬೇಕಿದೆ. ವ್ಯಾಪಾರ, ಚಿಕಿತ್ಸೆಯ ಉದ್ದೇಶಕ್ಕೆ ಆಗಮಿಸುವ ಜನರಿಗಾಗಿ ಈ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.
ರಾಜ್ಯಕ್ಕೆ ಆಗಮಿಸುವ ಜನರು ಕೋವಿಡ್ - 19 ಜಾಗೃತ ವೆಬ್ ಪೋರ್ಟಲ್ನಲ್ಲಿ ಹೆಸರು ನೋಂದಣಿ ಮಾಡಬೇಕು ಮತ್ತು ಪ್ರವೇಶಕ್ಕೆ ಪಾಸುಗಳನ್ನು ಪಡೆಯಬೇಕು. ಹೆಸರು ನೋಂದಣಿಯಾದ ತಕ್ಷಣ ಅಧಿಕಾರಿಗಳು ಅದನ್ನು ಪರಿಶೀಲಿಸಿ ಅನುಮತಿ ನೀಡಲಿದ್ದಾರೆ. ಯಾವುದೇ ವಿಳಂಬ ಆಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ನೂತನ ಮಾರ್ಗಸೂಚಿಯ ಅನ್ವಯ ರಾಜ್ಯಕ್ಕೆ ಆಗಮಿಸುವ ವ್ಯಕ್ತಿಗಳು 60 ವರ್ಷ ಮೇಲ್ಪಟ್ಟ ಅಥವ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಭೇಟಿ ಮಾಡುವಂತಿಲ್ಲ ಎಂದು ಸರ್ಕಾರ ಹೇಳಿದೆ.

ವಿವರ ನೀಡುವುದು ಕಡ್ಡಾಯ
ರಾಜ್ಯಕ್ಕೆ ಆಗಮಿಸುವ ಜನರು ಯಾರನ್ನು ಭೇಟಿಯಾಗಬೇಕು?, ಭೇಟಿಯ ಉದ್ದೇಶ, ಭೇಟಿ ನೀಡುವ ಸ್ಥಳ, ವಸತಿ ವ್ಯವಸ್ಥೆ ಮುಂತಾದ ವಿವರಗಳನ್ನು ಕಡ್ಡಾಯವಾಗಿ ನೀಡಬೇಕಿದೆ.

ಹೋಟೆಲ್ಗೆ ಹೋಗಬೇಕು
ರಾಜ್ಯಕ್ಕೆ ಆಗಮಿಸುವ ಜನರು ಯಾರನ್ನು ಭೇಟಿಯಾಗಬೇಕೋ, ಎಲ್ಲಿಗೆ ಹೋಗಬೇಕೋ ಅಲ್ಲಿಗೆ ಮಾತ್ರ ಭೇಟಿ ನೀಡಬಹುದು. ರಾಜ್ಯದ ಬೇರೆ ಪ್ರದೇಶಗಳಿಗೆ ಭೇಟಿ ನೀಡಲು ಅವಕಾಶವಿಲ್ಲ. ಜನರ ಭೇಟಿ ಬಗ್ಗೆ ಸ್ಥಳೀಯ ಸಂಸ್ಥೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿರುತ್ತದೆ.

ವಿದ್ಯಾರ್ಥಿಗಳು
ಪರೀಕ್ಷೆ ಸೇರಿದಂತೆ ಶೈಕ್ಷಣಿಕ ಚಟುವಟಿಕೆಗಳಿಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಕೆಲವೊಂದು ರಿಯಾಯಿತಿ ನೀಡಲಾಗಿದೆ. ರಾಜ್ಯಕ್ಕೆ ಆಗಮಿಸಿದವರು ಸಾಮಾಜಿಕ ಅಂತರ ಕಾಪಾಡಬೇಕು. ಸ್ಯಾನಿಟೈಸರ್ ಮತ್ತು ಒಂದು ಹೆಚ್ಚುವರಿ ಮಾಸ್ಕ್ ಹೊಂದಿರುವುದು ಕಡ್ಡಾಯವಾಗಿದೆ.

ಕ್ವಾರಂಟೈನ್ಗೆ ಹಾಕಲಾಗುತ್ತದೆ
ರಾಜ್ಯಕ್ಕೆ ಭೇಟಿ ನೀಡಿದವರು ವಾಪಸ್ ಆದ 14 ದಿನಗಳ ಬಳಿಕ ಕೊರೊನಾ ವೈರಸ್ ಸೋಂಕು ತಗುಲಿದರೆ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಕೊಡಬೇಕು. ಒಂದು ವೇಳೆ ಸರ್ಕಾರದ ನಿಯಮ ಪಾಲನೆ ಮಾಡದಿದ್ದರೆ ರಾಜ್ಯದಲ್ಲಿ 14 ದಿನದ ಕ್ವಾರಂಟೈನ್ಗೆ ಹಾಕಲಾಗುತ್ತದೆ.












Click it and Unblock the Notifications