ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ LDFಗೆ ಗೆಲುವು: ಬಿಜೆಪಿ, ಕಾಂಗ್ರೆಸ್ಗೆ ತಿರುಗೇಟು
ತಿರುವನಂತಪುರಂ, ಡಿಸೆಂಬರ್ 16: ಕೇರಳ ವಿಧಾನಸಭೆಯ ಸೆಮಿಫೈನಲ್ ಎಂದೇ ಪ್ರಚಾರವಾಗಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶಗಳು ಹೊರಬಿದ್ದಿದ್ದು, ಎಡ ಪಕ್ಷಗಳ ನೇತೃತ್ವದ ಎಲ್ಡಿಎಫ್ ಭರ್ಜರಿ ಗೆಲುವು ಸಾಧಿಸಿದ್ದು, ಹಲವಾರು ಸ್ಥಾನಗಳನ್ನು ಗೆದ್ದಿದೆ. ಇದರೊಂದಿಗೆ ತಿರುವನಂತಪುರಂ ಮಹಾನಗರ ಪಾಲಿಕೆಯ ಮೇಲೆ ತಮ್ಮ ಹಿಡಿತವನ್ನು ಉಳಿಸಿಕೊಂಡಿದೆ.
ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪರಿಸ್ಥಿತಿ ಕೆಟ್ಟದಾಗಿದೆ. ಈ ಗೆಲುವು ಕೇರಳವನ್ನು ನಾಶಮಾಡಲು ಪ್ರಯತ್ನಿಸುತ್ತಿರುವವರಿಗೆ ಉತ್ತರವಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತೋಷ ವ್ಯಕ್ತಪಡಿಸಿದರು.
ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ ಗೆದ್ದ ಅತಿ ಕಿರಿಯ ಅಭ್ಯರ್ಥಿ ರೇಷ್ಮಾ
ಈ ಫಲಿತಾಂಶಗಳು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಅದರ ಅವಕಾಶವಾದಿ ರಾಜಕಾರಣಕ್ಕೆ ಕೇರಳದಲ್ಲಿ ಸ್ಥಾನವಿಲ್ಲ ಎಂದು ತೋರಿಸುತ್ತದೆ. ಬಿಜೆಪಿಯೊಂದಿಗೆ ಸುಳ್ಳು ಪ್ರಚಾರ ನಡೆಸುತ್ತಿದ್ದ ಅವರು ಯಶಸ್ವಿಯಾಗಲಿಲ್ಲ ಎಂದಿದ್ದಾರೆ.
ಕೇರಳದಲ್ಲಿ 941 ಗ್ರಾಮ ಪಂಚಾಯಿತಿಯ 15,962ವಾರ್ಡ್, 152 ಬ್ಲಾಕ್ ಪಂಚಾಯಿತಿಯ 2080 ವಾರ್ಡು, 14 ಜಿಲ್ಲಾ ಪಂಚಾಯಿತಿಯ 331 ಡಿವಿಷನ್, 86 ಮುನ್ಸಿಪಾಲಿಟಿಯ 3078 ವಾರ್ಡು, 6 ಮುನ್ಸಿಪಲ್ ಕಾರ್ಪೊರೇಷನ್ ನ 414 ವಾರ್ಡುಗಳಿಗೆ ಡಿಸೆಂಬರ್ 8, 10 ಹಾಗೂ 14ರಂದು ಮತದಾನ ನಡೆಸಲಾಗಿದ್ದು, ಒಟ್ಟಾರೆ, 76% ಮತದಾನ ದಾಖಲಾಗಿದೆ. ಡಿಸೆಂಬರ್ 16ರಂದು ಫಲಿತಾಂಶ ಹೊರಬಂದಿದೆ.
ಇದರಲ್ಲಿ ಪ್ರಮುಖವಾದುದು ತಿರುವನಂತಪುರಂ ಮಹಾನಗರ ಪಾಲಿಕೆ. ಇದರಲ್ಲಿ ಎಲ್ಡಿಎಫ್ ಹಿಂದಿನ ಚುನಾವಣೆಗಿಂತ 8 ಸ್ಥಾನಗಳನ್ನು ಪಡೆದುಕೊಂಡಿದೆ, ಅಂದರೆ 50 ಸ್ಥಾನಗಳು. ಇದಲ್ಲದೆ ಬಿಜೆಪಿಯೂ 34 ಸ್ಥಾನಗಳನ್ನು ವಶಪಡಿಸಿಕೊಂಡಿದೆ. ಇನ್ನು ಕಾಂಗ್ರೆಸ್ ಕೇವಲ 10 ಸ್ಥಾನಗಳನ್ನು ಗೆದ್ದಿದೆ.
ಕೇರಳದಲ್ಲಿ ಎಲ್ಡಿಎಫ್ ಹಿಡಿತ ಬಲವಾಗಿದೆ, ಆದರೆ ಇತ್ತೀಚೆಗೆ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಆಪ್ತರು ಸಿಕ್ಕಿಬಿದ್ದರು. ಇದಾದ ನಂತರ, ಅದರ ತನಿಖೆ ಎನ್ಐಎ ಮತ್ತು ಇಡಿಯನ್ನು ತಲುಪಿತು. ಅಂದಿನಿಂದ ಕೇರಳದಲ್ಲಿ ಎಲ್ಡಿಎಫ್ ಸರ್ಕಾರವನ್ನು ಅಸ್ಥಿರಗೊಳಿಸಲು ಕೇಂದ್ರ ಸರ್ಕಾರ ಸಂಚು ರೂಪಿಸುತ್ತಿದೆ ಎಂದು ಎಲ್ಡಿಎಫ್ ಆರೋಪಿಸುತ್ತಿದೆ.