ಕೇರಳ: ಬಿಜೆಪಿ ಸೇರಿದ ಹಾದಿಯಾ ತಂದೆ ಅಶೋಕನ್
ತಿರುವನಂತಪುರಂ, ಡಿಸೆಂಬರ್ 18: ಲವ್ ಜಿಹಾದ್ ಪ್ರಕರಣದ ಮೂಲಕ ದೇಶದಾದ್ಯಂತ ಸಂಚಲನ ಮೂಡಿಸಿ ವಿವಾದಿತ ಮದುವೆಗೊಳಗಾಗಿದ ಹಾದಿಯಾ (ಮೂಲತಃ ಹಿಂದೂ) ಅವರ ತಂದೆ ಈಗ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದ್ದಾರೆ.
ಕೇರಳ ಬಿಜೆಪಿ ಮುಖಂಡರ ಸಮ್ಮುಖದಲ್ಲಿ 26 ವರ್ಷ ವಯಸ್ಸಿನ ಹಾದಿಯಾ ಅವರ ತಂದೆ ಕೆಎಂ ಅಶೋಕನ್ ಅವರು ಪಕ್ಷ ಸೇರಿದ್ದಾರೆ. ನನ್ನ ಮಗಳು ಲವ್ ಜಿಹಾದ್ ಗೆ ಒಳಗಾಗಿದ್ದಾಳೆ ಎಂದು ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದರು.
ಬಿಜೆಪಿ ಸೇರಿದ ಬಳಿಕ, ಶಬರಿಮಲೆ ಕುರಿತಂತೆ ಬಿಜೆಪಿ ನಡೆಸಿರುವ ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಹಿಂದೂಗಳ ಭಾವನೆ ಹಾಗೂ ಧರ್ಮವನ್ನು ಉಳಿಸುವ ಕೆಲಸ ಬಿಜೆಪಿಯಿಂದ ಮಾತ್ರ ಆಗುತ್ತಿದೆ ಎಂದಿದ್ದಾರೆ.

ಕಮ್ಯೂನಿಸ್ಟ್ ಪಕ್ಷವು ವೋಟ್ ಬ್ಯಾಂಕ್ ರಾಜಕೀಯಕ್ಕೆ ಒಳಗಾಗಿ ಜನತೆಯ ದಿಕ್ಕು ತಪ್ಪಿಸುತ್ತಿದೆ ಎಂದಿದ್ದಾರೆ. ಮೂರು ವರ್ಷಗಳ ಮುಂಚೆಯೇ ನಾನು ಬಿಜೆಪಿ ಸೇರಿದ್ದೆ. ಆದರೆ, ಅಧಿಕೃತವಾಗಿ ಪಕ್ಷದ ಪ್ರಾಥಮಿಕ ಸದಸ್ಯನಾಗಿ ಭಾನುವಾರದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದಿದಾರೆ.
ಅಶೋಕನ್ ಅವರ ಪುತ್ರಿ ಹಾದಿಯಾ(ಅಖಿಲ ಅಶೋಕನ್) ಅವರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಶಫೀನ್ ಜಹಾನ್ ಅವರನ್ನು ಮದುವೆಯಾಗಿದ್ದರು. ನನ್ನ ಮಗಳನ್ನು ಬಲವಂತವಾಗಿ ಮತಾಂತರ ಮಾಡಲಾಗಿದೆ ಎಂದು ಅಶೋಕನ್ ಅವರು ಕೋರ್ಟ್ ಮೆಟ್ಟಿಲೇರಿದ್ದರು.
ಕೇರಳ ಹೈಕೋರ್ಟ್ ಮೇ 24ರಂದು ನೀಡಿದ ತೀರ್ಪಿನಂತೆ ಈ ಮದುವೆಯನ್ನು ಅನೂರ್ಜಿತಗೊಳಿಸಲಾಗಿದ್ದು, ಅಶೋಕನ್ ಅವರ ಮನೆಗೆ ಮರಳುವಂತೆ ಹಾದಿಯಾಗೆ ತಿಳಿಸಲಾಗಿತ್ತು. ಆದರೆ, ನಾನು ಮದುವೆ ಬಗ್ಗೆ ನಿರ್ಧಾರ ಕೈಗೊಳ್ಳುವಷ್ಟು ಪ್ರೌಢತೆ ಹೊಂದಿದ್ದು, ಹೇಬಿಯಸ್ ಕಾರ್ಪಸ್ ಅರ್ಜಿ ಮುಂದಿಟ್ಟುಕೊಂಡು ಮದುವೆಯನ್ನು ಅನೂರ್ಜಿತಗೊಳಿಸಲು ಸಾಧ್ಯವಿಲ್ಲ ಎಂದಿದ್ದರು.












Click it and Unblock the Notifications