ಸಿಎಎ ಸಂಬಂಧ ಕೇಂದ್ರದ ವಿರುದ್ಧ ಕೇರಳ ಸಿಎಂ ಸಿಡಿಮಿಡಿ
ತಿರುವನಂತಪುರಂ, ಜನವರಿ.19: ಕೇರಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೊಂದಣಿಯನ್ನು ಅನುಷ್ಠಾನಗೊಳಿಸುವುದಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪುನರ್ ಉಚ್ಛರಿಸಿದ್ದಾರೆ. ಸಿಎಎ ವಿರುದ್ಧ ಕೇರಳ ಸಿಎಂ ಮತ್ತೊಮ್ಮೆ ಕೆಂಡ ಕಾರಿದ್ದಾರೆ.
ದೇಶದಲ್ಲಿ ಜಾರಿಯಾಗುವ ಕಾಯ್ದೆಗಳು ಸಾಂವಿಧಾನಾತ್ಮಕವಾಗಿ ಇರಬೇಕು. ಬದಲಿಗೆ ಆರ್ಎಸ್ಎಸ್ ಉದ್ದೇಶವನ್ನು ಈಡೇರಿಸಿಕೊಳ್ಳಲು ಜಾರಿಗೊಳಿಸಿರುವ ಪೌರತ್ವ ಕಾಯ್ದೆಯನ್ನು ತಮ್ಮ ರಾಜ್ಯದಲ್ಲಿ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಸಿಎಂ ಪಿಣರಾಯ ವಿಜಯನ್ ಸ್ಪಷ್ಟವಾಗಿ ಹೇಳಿದ್ದಾರೆ.
ಹೇಳುವವರು, ಕೇಳುವವರು ಇಲ್ಲವೇ ನಿಮಗೆ: ಕೇರಳ ಸರ್ಕಾರಕ್ಕೆ ತರಾಟೆ!
ಸಿಎಎ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕುಂಟು ನೆಪಗಳನ್ನು ಹೇಳುತ್ತಿದ್ದಾರೆ. ಆದರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ದೇಶಾದ್ಯಂತ ರಾಷ್ಟ್ರೀಯ ನಾಗರಿಕ ನೊಂದಣಿ ಜಾರಿಗೊಳಿಸಿಯೇ ತೀರುತ್ತೇನೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ಕೇರಳದಲ್ಲಿ ಯಾವುದೇ ಅವಕಾಶ ನೀಡುವುದಿಲ್ಲ ಎಂದು ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಆರ್ಎಸ್ಎಸ್ ಹಿನ್ನೆಲೆಯುಳ್ಳ ಕಾಯ್ದೆ ಜಾರಿ ಸಾಧ್ಯವಿಲ್ಲ:

ಪ್ರಜಾಪ್ರಭುತ್ವ ದೇಶವಾಗಿರುವ ಭಾರತದಲ್ಲಿ ಎಲ್ಲ ಕಾಯ್ದೆಗಳು ಸಾಂವಿಧಾನಿಕವಾಗಿ ಇರಬೇಕು. ಇದನ್ನು ಹೊರತುಪಡಿಸಿ ಆರ್ಎಸ್ಎಸ್ ದೃಷ್ಟಿಯಿಂದ ರಚನೆಯಾಗಿರುವ ಯಾವುದೇ ಕಾಯ್ದೆಗಳನ್ನು ಕೇರಳದಲ್ಲಿ ಅನುಷ್ಟಾನಗೊಳಿಸಲು ಬಿಡುವುದಿಲ್ಲ ಎಂದು ಪಿಣರಾಯ್ ವಿಜಯನ್ ತಿಳಿಸಿದರು.
ಕೇರಳ ಸರ್ಕಾರಕ್ಕೆ ವರದಿ ಕೋರಿದ ರಾಜ್ಯಪಾಲರು:

ಇನ್ನು, ಪೌರತ್ವಿ ತಿದ್ದುಪಡಿ ಕಾಯ್ದೆ ವಿರುದ್ಧ ಸುಪ್ರೀಂಕೋರ್ ಮೊರೆ ಹೋಗಿರುವ ಕೇರಳ ಸರ್ಕಾರವನ್ನು ರಾಜ್ಯಪಾಲ ಆರಿಫ್ ಮೊಹಮ್ಮದ್ ತರಾಟೆ ತೆಗೆದುಕೊಂಡಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರವು ಸಾಂವಿಧಾನಿಕ ನಿಯಮಗಳನ್ನು ಉಲ್ಲಂಘಿಸಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಿದ ಸಿಎಎ ವಿರುದ್ಧ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿರುವ ನಿರ್ಧಾರದ ಬಗ್ಗೆ ವರದಿ ನೀಡುವಂತೆ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಡಕ್ ಆಗಿ ಸೂಚನೆ ನೀಡಿದ್ದಾರೆ.











Click it and Unblock the Notifications