ಬಿಜೆಪಿ ಅಧ್ಯಕ್ಷರ ವಿರುದ್ಧ ಎಫ್ಐಆರ್ ದಾಖಲಿಸಲು ಕೋರ್ಟ್ ಸಮ್ಮತಿ
ಕಾಸರಗೋಡು, ಜೂನ್ 8: ಕೇರಳ ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್ ವಿರುದ್ಧ ಚುನಾವಣಾ ಆಕ್ರಮ ಆರೋಪ ಕೇಳಿ ಬಂದಿದ್ದು, ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲು ಕಾಸರಗೋಡು ಕೋರ್ಟ್ ಸಮ್ಮತಿ ನೀಡಿದೆ.
ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಸರಗೋಡಿನ ಮಂಜೇಶ್ವರ ಕ್ಷೇತ್ರದಿಂದ ಕೆ ಸುರೇಂದ್ರನ್ ಸ್ಪರ್ಧಿಸಿದ್ದರು. ತಮ್ಮ ಎದುರಾಳಿಗಳಿಗೆ ನಾಮಪತ್ರ ಹಿಂತೆಗೆದುಕೊಳ್ಳಲು ಪ್ರಭಾವ ಬೀರಿ, ಲಂಚ ನೀಡಿದ ಆರೋಪ ಬಿಜೆಪಿ ರಾಜ್ಯಾಧ್ಯಕ್ಷ ಸುರೇಂದ್ರನ್ ಮೇಲಿದೆ. ಕಾಸರಗೋಡು ಪೊಲೀಸರು ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕೆ ಸುರೇಂದ್ರನ್ ವಿರುದ್ಧ ಸ್ಪರ್ಧಿಸಿದ್ದ ಸಿಪಿಐ(ಎಂ) ಅಭ್ಯರ್ಥಿ ವಿವಿ ರಮೇಶನ್ ಎಂಬುವರು ದೂರು ದಾಖಲಿಸಿದ್ದರು. ಈಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸುರೇಂದ್ರನ್ ವಿರುದ್ಧ ಎಫ್ಐಆರ್ ದಾಖಲಿಸಲು ಪೊಲೀಸರಿಗೆ ಸೂಚಿಸಿದೆ.

ಕೆ ಸುರೇಂದ್ರನ್ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 171(ಬಿ) ಮತ್ತು (ಇ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಬಿಎಸ್ ಪಿ ಅಭ್ಯರ್ಥಿ ಕೆ ಸುಂದರ ಅವರು ಕೆ ಸುರೇಂದ್ರನ್ ಬಗ್ಗೆ ಆರೋಪ ಮಾಡಿ 2.5 ಲಕ್ಷ ರು ಹಾಗೂ ಸ್ಮಾರ್ಟ್ ಫೋನ್ ನೀಡಿ ನಾಮಪತ್ರ ಹಿಂಪಡೆಯಲು ಸೂಚಿಸಿದ್ದರು. ಒಂದು ವೇಳೆ ಕೆ ಸುರೇಂದ್ರನ್ ಗೆದ್ದಿದ್ದರೆ 15 ಲಕ್ಷ ರು, ಕರ್ನಾಟಕದಲ್ಲಿ ಒಂದು ಬಂಗಲೆ, ವೈನ್ ಸ್ಟೋರ್ ನೀಡುವ ಭರವಸೆ ಸಿಕ್ಕಿತ್ತು ಎಂದಿದ್ದಾರೆ.
2016 ರಲ್ಲಿ ಕೆ ಸುರೇಂದ್ರನ್ ಕೇವಲ 89 ಮತಗಳಿಂದ ಸೋಲು ಕಂಡಿದ್ದರು. ಈ ಬಾರಿ ಕೂಡಾ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದಾರೆ. ತಮ್ಮ ಹೆಸರಿಗೆ ಸಾಮ್ಯತೆ ಇರುವ ಇತರೆ ಸ್ಪರ್ಧಿಗಳಿಗೆ ಆಮಿಷವೊಡ್ಡಿ ಸ್ಪರ್ಧಾಕಣದಿಂದ ಹಿಂದೆ ಸರಿಯುವಂತೆ ಮಾಡಿದ್ದಾರೆ ಎಂದು ಇತರೆ ಪಕ್ಷಗಳು ಆರೋಪಿಸಿವೆ.
ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಭ್ಯರ್ಥಿ ಎಕೆಎಂ ಅಶ್ರಫ್ ಅವರು ಸುರೇಂದ್ರನ್ ರನ್ನು 745 ಮತಗಳ ಅಂತರದಿಂದ 2021ರಲ್ಲಿ ಸೋಲಿಸಿದ್ದಾರೆ. ಜನತಿಪತ್ಯ ರಾಷ್ಟ್ರೀಯ ಪಕ್ಷ ಕೂಡಾ ಸುರೇಂದ್ರನ್ ವಿರುದ್ಧ ಆಮಿಷದ ಆರೋಪ ಮಾಡಿದೆ.
ಜೆಆರ್ ಪಿ ರಾಜ್ಯಾಧ್ಯಕ್ಷರಾದ ಸಿಕೆ ಜಾನು ಅವರಿಗೆ ತಿರುವನಂತಪುರಂನ ಹೋಟೆಲ್ ವೊಂದರಲ್ಲಿ 10 ಲಕ್ಷ ರು ಹಣ ಸಂದಾಯವಾಗಿದೆ ಎಂದು ಪಕ್ಷದ ರಾಜ್ಯ ಖಜಾಂಚಿ ಪ್ರಸೀತಾ ಅಳೀಕೋಡ್ ಆರೋಪಿಸಿದ್ದಾರೆ. ಈ ಕುರಿತಂತೆ ಆಡಿಯೋ ರಿಲೀಸ್ ಮಾಡಿದ್ದಾರೆ.












Click it and Unblock the Notifications