ಕೇರಳದ ನಾಲ್ಕನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕಣ್ಣೂರಿನಲ್ಲಿ ಶುರು
ಕೇರಳದ ನಾಲ್ಕನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಭಾನುವಾರ ಕಣ್ಣೂರಿನಲ್ಲಿ ಉದ್ಘಾಟನೆ ಆಯಿತು. ಅಬುಧಾಬಿಗೆ ಹೊರಟ ಏರ್ ಇಂಡಿಯಾ ಎಕ್ಸ್ ಪ್ರೆಸ್ ಮೊದಲ ವಿಮಾನಕ್ಕೆ ಕೇಂದ್ರ ವಿಮಾನಯಾನ ಸಚಿವ ಸುರೇಶ್ ಪ್ರಭು ಹಾಗೂ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಚಾಲನೆ ನೀಡಿದರು.
ಮಾಜಿ ಮುಖ್ಯಮಂತ್ರಿ ಉಮನ್ ಚಾಂಡಿ ಅವರಿಗೆ ಈ ಕಾರ್ಯಕ್ರಮಕ್ಕೆ ಆಹ್ವಾನ ಇರಲಿಲ್ಲ ಎಂಬ ಕಾರಣಕ್ಕೆ ವಿರೋಧ ಪಕ್ಷವಾದ ಕಾಂಗ್ರೆಸ್ ಪ್ರತಿಭಟನೆ ಸೂಚಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಬಹಿಷ್ಕರಿಸಿತ್ತು. ಇನ್ನು ಶಬರಿಮಲೆ ದೇವಾಲಯದ ವಿಚಾರವಾಗಿ ಕೇರಳ ಸರಕಾರದ ನಿಲವು ವಿರೋಧಿಸಿ, ಬಿಜೆಪಿ ಕೂಡ ಕಾರ್ಯಕ್ರಮದಿಂದ ದೂರ ಉಳಿದಿತ್ತು.
ಉತ್ತರ ಕೇರಳದ ಭಾಗಕ್ಕೆ ಇದು ಐತಿಹಾಸಿಕ ಕ್ಷಣ. ಮಲಬಾರ್ ಪ್ರದೇಶದ ಅಭಿವೃದ್ಧಿಗೆ ಈ ಹೊಸ ವಿಮಾನ ನಿಲ್ದಾಣದಿಂದ ಅನುಕೂಲ ಆಗಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು. ಇಲ್ಲಿ ವಿಮಾನ ನಿಲ್ದಾಣ ಆರಂಭಿಸುವ ಬಗ್ಗೆ ಪ್ರಸ್ತಾವವನ್ನು ಮೊದಲ ಬಾರಿಗೆ 1995ರಲ್ಲಿ ಮಾಡಿದ ಆಗಿನ ವಿಮಾನ ಯಾನ ಸಚಿವ ಸಿ.ಎಂ.ಇಬ್ರಾಹಿಂರನ್ನು ಸನ್ಮಾನಿಸಲಾಯಿತು.

ಕರ್ನಾಟಕದ ಕೊಡಗಿಗೆ ಬಹಳ ಹತ್ತಿರದಲ್ಲಿ ಇರುವ ಕಣ್ಣೂರು ವಿಮಾನ ನಿಲ್ದಾಣದಿಂದ ಪ್ರವಾಸೋದ್ಯಮಕ್ಕೆ ನೆರವಾಗಲಿದೆ ಎಂಬ ನಿರೀಕ್ಷೆಯಿದೆ. ಕೇರಳದಲ್ಲಿ ಕೊಚ್ಚಿ, ತಿರುವನಂತಪುರಂ, ಕೋಳಿಕ್ಕೋಡ್ ನಲ್ಲಿ ಈಗಾಗಲೇ ಮೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇದೆ. ಈಗ ಕಣ್ಣೂರಿನಲ್ಲಿ ಆರಂಭ ಆಗಿರುವುದು ನಾಲ್ಕನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ.












Click it and Unblock the Notifications