ಕೇರಳದಲ್ಲಿ ಕೊರೊನಾ ಗೆದ್ದ ಇಟಲಿ ಪ್ರಜೆ, ಸರ್ಕಾರದಿಂದ ಸನ್ಮಾನ
ತಿರುವನಂತಪುರಂ, ಏಪ್ರಿಲ್ 20 : ಇಟಲಿಯಲ್ಲಿ ಕೊರೊನಾ ನಿಯಂತ್ರಣಕ್ಕೆ ತರಲು ಅಲ್ಲಿನ ಸರ್ಕಾರ ಹರಸಾಹಸಪಟ್ಟಿತು. ಆದರೆ, ಇಟಲಿಯ ಪ್ರಜೆಯೊಬ್ಬರು ಭಾರತದಲ್ಲಿ ಕೊರೊನಾ ಗೆದ್ದು ಬಂದಿದ್ದಾರೆ. ಇವರು ಈಗ ತವರಿಗೆ ಹೊರಟಿದ್ದಾರೆ.
ಹೌದು, ಕೇರಳದ ತಿರುವನಂತಪುರದಲ್ಲಿ ಇಟಲಿಯ ಪ್ರಜೆಯೊಬ್ಬರು ಕೊರೊನಾ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈಗ ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದು, ಕ್ವಾರಂಟೈನ್ ಅವಧಿಯನ್ನು ಪೂರ್ಣಗೊಳಿಸಿದ್ದಾರೆ.
ಇಟಲಿಯ ರೊಬರ್ಟೋ ಟೋನಿಜ್ ಅವರನ್ನು ಸೋಮವಾರ ಆಸ್ಪತ್ರೆಯ ಸಿಬ್ಬಂದಿ ಮತ್ತು ಕೇರಳ ಸರ್ಕಾರ ಸನ್ಮಾನ ಮಾಡಿ ಬೀಳ್ಕೊಟ್ಟಿದೆ. ಅವರು ಬೆಂಗಳೂರಿಗೆ ತೆರಳಲು ಕೇರಳ ಸರ್ಕಾರವೇ ಕಾರಿನ ವ್ಯವಸ್ಥೆಯನ್ನು ಮಾಡಿದೆ.

ಮಾರ್ಚ್ 13ರಂದು ತಿರುವನಂತಪುರದ ವರ್ಕಾಲಗೆ ರೊಬರ್ಟೋ ಟೋನಿಜ್ ಭೇಟಿ ಕೊಟ್ಟಿದ್ದರು. ಆಗ ಅವರಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಚಿಕಿತ್ಸೆಯ ಬಳಿಕ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದರು. ಮಾರ್ಚ್ 26ರಂದು ಅವರ ಪರೀಕ್ಷಾ ವರದಿ ನೆಗೆಟೀವ್ ಎಂದು ಬಂದಿತ್ತು. ಆದರೂ ಮುಂಜಾಗ್ರತಾ ಕ್ರಮವಾಗಿ ಅವರನ್ನು ಕ್ವಾರಂಟೈನ್ನಲ್ಲಿ ಇಡಲಾಗಿತ್ತು.
ಸೋಮವಾರ ಕ್ವಾರಂಟೈನ್ ಅವಧಿಯನ್ನೂ ಅವರು ಪೂರ್ಣಗೊಳಿಸಿದ್ದು ಆಸ್ಪತ್ರೆ ಸಿಬ್ಬಂದಿ ಬೀಳ್ಕೊಟ್ಟಿದ್ದಾರೆ. ಆಸ್ಪತ್ರೆ ಸಿಬ್ಬಂದಿ ರೊಬರ್ಟೋ ಟೋನಿಜ್ ಅವರನ್ನು ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಿ ಕಳುಹಿಸಿದರು. ಈ ಸಂದರ್ಭದಲ್ಲಿ ಅವರು ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.

ರೊಬರ್ಟೋ ಟೋನಿಜ್ ಬೆಂಗಳೂರಿಗೆ ತೆರಳಲು ಕೇರಳ ಸರ್ಕಾರ ಕಾರಿನ ವ್ಯವಸ್ಥೆ ಮಾಡಿತ್ತು. ಅವರು ಬೆಂಗಳೂರಿನಿಂದ ಇಟಲಿಗೆ ವಾಪಸ್ ಆಗಲಿದ್ದಾರೆ.
ಇಟಲಿಯಲ್ಲಿ ಇದುವರೆಗೂ 1, 78, 972 ಕೊರೊನಾ ಪ್ರಕರಣಗಳು ದಾಖಲಾಗಿವೆ. 23, 660 ಜನರು ಸಾವನ್ನಪ್ಪಿದ್ದಾರೆ. ಕೊರೊನಾ ಸೋಂಕು ತಗುಲಿದ್ದ ಇಟಲಿ ಪ್ರಜೆಯನ್ನು ಕೇರಳದ ವೈದ್ಯರು ಗುಣಪಡಿಸಿ ವಾಪಸ್ ಕಳಿಸಿದ್ದಾರೆ.












Click it and Unblock the Notifications