'ಪ್ರಧಾನಿ ಚಿತ್ರವಿದ್ದರೆ ನಿಮಗೆ ನಾಚಿಕೆಯಾಗುತ್ತದೆಯೇ': ಲಸಿಕೆ ಪ್ರಮಾಣ ಪತ್ರದ ಬಗ್ಗೆ ಹೈಕೋರ್ಟ್
ತಿರುವನಂತಪುರಂ, ಡಿಸೆಂಬರ್ 13: ಕೋವಿಡ್ ಲಸಿಕೆ ಪ್ರಮಾಣಪತ್ರದಿಂದ ಪ್ರಧಾನಿ ನರೇಂದ್ರ ಮೋದಿ ಚಿತ್ರವನ್ನು ತೆಗೆದುಹಾಕುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಆಲಿಸಿದ ಕೇರಳ ಹೈಕೋರ್ಟ್, ದೇಶದ ಪ್ರಧಾನಿಯ ಬಗ್ಗೆ ನಿಮಗೆ ನಾಚಿಕೆಯಾಗುತ್ತಿದೆಯೇ ಎಂದು ಅರ್ಜಿದಾರರನ್ನು ಪ್ರಶ್ನಿಸಿದೆ.
ವಿಚಾರಣೆ ವೇಳೆ ನ್ಯಾಯಮೂರ್ತಿ ಪಿ.ವಿ.ಕುಂಞಿಕೃಷ್ಣನ್, ಪ್ರಧಾನಿಯನ್ನು ಈ ದೇಶದ ಜನ ಆಯ್ಕೆ ಮಾಡಿದ್ದಾರೆ. ಹೀಗಾಗಿ ಅವರ ಚಿತ್ರವನ್ನು ಲಸಿಕೆ ಪ್ರಮಾಣ ಪತ್ರದಲ್ಲಿ ಹಾಕುವುದರಲ್ಲಿ ತಪ್ಪೇನು ಎಂದು ಕೇರಳ ಹೈಕೋರ್ಟ್ ಪ್ರಶ್ನೆ ಮಾಡಿದೆ. ಇನ್ನು ಅರ್ಜಿದಾರರು ಜವಾಹರಲಾಲ್ ನೆಹರು ಇನ್ಸ್ಟಿಟ್ಯೂಟ್ ಆಫ್ ಲೀಡರ್ಶಿಪ್ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಗಮನಿಸಿದ ನ್ಯಾಯಮೂರ್ತಿ ಕುನ್ಹಿಕೃಷ್ಣನ್, ಪ್ರಧಾನಿ ಮೋದಿಯವರ ಭಾವಚಿತ್ರವನ್ನು ಹೊಂದಿರುವ ಲಸಿಕೆ ಪ್ರಮಾಣಪತ್ರಗಳು ಹಾಗೂ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಹೆಸರನ್ನು ವಿಶ್ವವಿದ್ಯಾಲಯಕ್ಕೆ ಇಟ್ಟಿರುವುದು ಹೇಗೆ ಬೇರೆ ಬೇರೆ ಆಗುತ್ತದೆ ಎಂದು ಸ್ಪಷ್ಟೀಕರಣವನ್ನು ಕೋರಿದೆ.
"ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ಮೋದಿಯವರ ಹೆಸರಿದ್ದರೆ ಏನು ತೊಂದರೆ? ಜವಾಹರಲಾಲ್ ನೆಹರೂ ಅವರ ಹೆಸರಿನ ಸಂಸ್ಥೆಯಲ್ಲಿ ನೀವೂ ಕೆಲಸ ಮಾಡುತ್ತಿದ್ದೀರಿ, ಅವರೂ ಪ್ರಧಾನಿಯಾಗಿದ್ದರು. ಹಾಗಾದರೆ ಅವರ ಹೆಸರನ್ನೂ ತೆಗೆದುಹಾಕುವಂತೆ ವಿಶ್ವವಿದ್ಯಾಲಯಕ್ಕೆ ಏಕೆ ಹೇಳಬಾರದು?," ಎಂದು ನ್ಯಾಯಾಲಯವು ಪ್ರಶ್ನೆ ಮಾಡಿದೆ.

ಬೇರೆ ದೇಶಗಳಲ್ಲಿ ಇಂತಹ ಪದ್ಧತಿ ಇಲ್ಲ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದಾಗ ನ್ಯಾಯಮೂರ್ತಿಗಳು, "ಅವರು ತಮ್ಮ ಪ್ರಧಾನಿಯ ಬಗ್ಗೆ ಹೆಮ್ಮೆ ಪಡದಿರಬಹುದು, ನಮ್ಮ ಪ್ರಧಾನಿ ಬಗ್ಗೆ ನಮಗೆ ಹೆಮ್ಮೆ ಇದೆ," ಎಂದಿದ್ದಾರೆ. "ನಿಮಗೆ (ಅರ್ಜಿದಾರರಿಗೆ) ಪ್ರಧಾನ ಮಂತ್ರಿಯ ಬಗ್ಗೆ ಏಕೆ ನಾಚಿಕೆ? ಅವರು ಜನರ ಆದೇಶದ ಮೇರೆಗೆ ಅಧಿಕಾರಕ್ಕೆ ಬಂದಿದ್ದಾರೆ. ನಮ್ಮಲ್ಲಿ ವಿಭಿನ್ನ ರಾಜಕೀಯ ದೃಷ್ಟಿಕೋನಗಳು ಇರಬಹುದು, ಆದರೆ ಅವರು ಇನ್ನೂ ದೇಶದ ಪ್ರಧಾನಿ ಎಂಬುದನ್ನು ಅಲ್ಲಗಳೆಯುವಂತಿಲ್ಲ," ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಅರ್ಜಿದಾರರ ಪರ ವಕೀಲ ಎಂ.ಪೀಟರ್, "ಪ್ರಮಾಣಪತ್ರವು ಖಾಸಗಿ ಸೊತ್ತಾಗಿದೆ, ಅದರಲ್ಲಿ ವೈಯಕ್ತಿಕ ವಿವರಗಳನ್ನು ದಾಖಲಿಸಲಾಗಿದೆ. ಹಾಗಾಗಿ ಅದರಲ್ಲಿ ಯಾರ ಫೋಟೋ ಇದ್ದರೂ ಅದು ವ್ಯಕ್ತಿಯ ಖಾಸಗಿತನದಲ್ಲಿ ಹಸ್ತಕ್ಷೇಪ ಮಾಡುವಂತಿದೆ, ಇದು ಸರಿಯಲ್ಲ. ಪ್ರಮಾಣ ಪತ್ರದಲ್ಲಿ ಪ್ರಧಾನಿಯವರ ಚಿತ್ರ ಸೇರಿಸಿರುವುದು ಸರಿಯಲ್ಲ. ಅದು ವ್ಯಕ್ತಿಯ ವೈಯಕ್ತಿಕ ಸ್ಥಾನ ಮಾನಕ್ಕೆ ಧಕ್ಕೆ ಉಂಟು ಮಾಡುತ್ತದೆ," ಎಂದಿದ್ದಾರೆ.
"ಕೊರೊನಾ ಲಸಿಕೆ ಪ್ರಮಾಣ ಪತ್ರವು ಓರ್ವ ವ್ಯಕ್ತಿಯ ವೈಯಕ್ತಿಕ ಮಾಹಿತಿ. ಅದರ ಮೇಲೆ ಪ್ರಧಾನಿ ಚಿತ್ರ ಸರಿಯಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಎಂ ಪೀಟರ್ ಪ್ರಕಾರ, ಕೊರೊನಾ ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯ ಚಿತ್ರವು ಮೂಲಭೂತ ಹಕ್ಕನ್ನು ಉಲ್ಲಂಘನೆ ಮಾಡಿದ್ದಂತೆ ಆಗಿದೆ.
ಇನ್ನು ನಾನು ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆಗೆ ದರ ಪಾವತಿ ಮಾಡಿ ಲಸಿಕೆ ಪಡೆದಿದ್ದು, ನಂತರ ಈ ಕುರಿತ ಪ್ರಮಾಣಪತ್ರವನ್ನು ಸ್ವೀಕರಿಸಿದ್ದೇನೆ. ಪ್ರಮಾಣಪತ್ರದಲ್ಲಿ ಪ್ರದಾನಿ ಮೋದಿಯವರ ಚಿತ್ರವಿದೆ. ಅದರೊಟ್ಟಿಗೆ "ಔಷಧ ಮತ್ತು ಕಠಿಣ ನಿಯಂತ್ರಣ" ಎಂದು ಮಲಯಾಳಂನಲ್ಲಿಯೂ, "ಭಾರತವು ಒಗ್ಗೂಡಿ ಕೋವಿಡ್ ಅನ್ನು ಸೋಲಿಸಲಿದೆ" ಎಂದು ಇಂಗ್ಲಿಷ್ನಲ್ಲಿಯೂ ಬರೆದಿದ್ದು, ಇದನ್ನು ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗಳೆಂದು ಸೂಚಿಸಲಾಗಿದೆ ಎಂದು ಆರ್ಟಿಐ ಕಾರ್ಯಕರ್ತ ಹಾಗೂ ವಕೀಲ ಅಜಿತ್ ಜಾಯ್ ಅವರು ಅರ್ಜಿಯಲ್ಲಿ ತಿಳಿಸಿದ್ದರು. ಲಸಿಕೆ ಕಾರ್ಯಕ್ರಮವನ್ನು ಪ್ರಧಾನಿಯವರ ಪ್ರಚಾರ ಕಾರ್ಯಕ್ರಮಕ್ಕೆ ಬಳಸಲಾಗುತ್ತಿದೆ ಎಂದು ಆಕ್ಷೇಪಿಸಿದ್ದರು. ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಿತ್ರ ಇರುವುದು ದೇಶದಲ್ಲಿ ಈ ಹಿಂದೆ ಭಾರೀ ಚರ್ಚೆಗೆ ಕಾರಣವಾಗಿದೆ. ವಿರೋಧ ಪಕ್ಷಗಳು ಮೋದಿಯನ್ನು ಟೀಕೆ ಮಾಡಿದ್ದರು.












Click it and Unblock the Notifications