ಲಷ್ಕರ್, ಜೈಷೆ ಸಂಭಾವ್ಯ ದಾಳಿ, ಕಾಶ್ಮೀರದಲ್ಲೇ ಉಳಿದ ಅಜಿತ್
ಶ್ರೀನಗರ, ಆಗಸ್ಟ್ 12: ಕಣಿವೆ ರಾಜ್ಯ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಅಧಿಕಾರ ರದ್ದುಗೊಳಿಸಿದ ಬಳಿಕ ಬಿಗುವಿನ ಪರಿಸ್ಥಿತಿ ಉಂಟಾಗಿತ್ತು. ಆದರೆ, ಈಗ ಬಕ್ರೀದ್ ಗಾಗಿ ಅನೇಕ ಜಿಲ್ಲೆಗಳಲ್ಲಿ ನಿರ್ಬಂಧ ಹಿಂಪಡೆಯಲಾಗಿದ್ದು, ಸಾರ್ವಜನಿಕರು ಮಾರುಕಟ್ಟೆಯಲ್ಲಿ ಖರೀದಿ ನಿರತಾಗಿರುವ ದೃಶ್ಯ ಕಂಡು ಬಂದಿದೆ.
ವಿಡಿಯೋ: ತಣ್ಣಗಾದ ಕಾಶ್ಮೀರದಲ್ಲಿ ಭಾರತದ 'ಜೇಮ್ಸ್ ಬಾಂಡ್' ಸುತ್ತಾಟ
ಕಲಂ 370ರದ್ದುಗೊಂಡ ಬಳಿಕ ಕಣಿವೆ ರಾಜ್ಯಕ್ಕೆ ಬಂದಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಕಾಶ್ಮೀರದಲ್ಲಿನ ಪರಿಸ್ಥಿತಿಯನ್ನು ಅವಲೋಕನ ಮಾಡುತ್ತಿದ್ದು, ಅನಂತ್ ನಾಗ್ ಜಿಲ್ಲೆಯಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಅಭಯ ನೀಡಿದ್ದಾರೆ. ಬಕ್ರೀದ್, ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಉಗ್ರ ಸಂಘಟನೆ ಲಷ್ಕರ್ ಇ ತೋಯ್ಬಾ ಹಾಗೂ ಜೈಷೆ ಎ ಮೊಹಮ್ಮದ್ ನಿಂದ ಸಂಭಾವ್ಯ ದಾಳಿಯ ಮುನ್ಸೂಚನೆ ಸಿಕ್ಕಿದೆ. ಆಗಸ್ಟ್ 15ರ ತನಕ ಕಾಶ್ಮೀರದಲ್ಲೇ ಉಳಿಯಲಿದ್ದು, ಕಣಿವೆ ರಾಜ್ಯದಲ್ಲಿ ತ್ರಿವರ್ಣ ಧ್ವಜಾರೋಹಣ ಮುಗಿಸಿಕೊಂಡು ರಾಷ್ಟ್ರ ರಾಜಧಾನಿಗೆ ಮರಳಲಿದ್ದಾರೆ ಎಂದು ತಿಳಿದು ಬಂದಿದೆ.
ಭಾರತದಿಂದಲೂ ಸಂಝೌತ ಎಕ್ಸ್ ಪ್ರೆಸ್ ರೈಲು ಸೇವೆ ರದ್ದು
ಉಗ್ರರ ಚಟುವಟಿಕೆ ಬಗ್ಗೆ ಗುಪ್ತಚರ ಇಲಾಖೆ ನೀಡಿರುವ ಮಾಹಿತಿ ಅನ್ವಯ ಅಜಿತ್ ದೋವಲ್ಅವರು ಭದ್ರತೆಯ ಮೇಲ್ವಿಚಾರಣೆ ನಡೆಸುತ್ತಿದ್ದು, ಈಗಾಗಲೇ ಅಗತ್ಯ ಕಾರ್ಯತಂತ್ರ ರೂಪಿಸಿದ್ದು, ಬಕ್ರೀದ್ ಹಾಗೂ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ನೋಡಿಕೊಳ್ಳಲು ಸೇನೆಗೆ ಸೂಚನೆ ನೀಡಲಾಗಿದೆ.
ಭಾರತದ ಗಡಿ ಭದ್ರತಾ ಪಡೆ, ಭೂ ಸೇನೆ, ನೌಕಾಪಡೆ ಗಸ್ತು ತಿರುಗಾಟ ಆರಂಭವಾಗಿದ್ದು, ಸದ್ಯ ಭಾರತದ ರೆಡಾರ್ ಕಣ್ಣಿಗೆ ಉಗ್ರರ ಯಾವುದೆ ಚಟುವಟಿಕೆಗಳು ದಾಖಲಾಗಿಲ್ಲ. ಇತ್ತ ಕಾಶ್ಮೀರದಲ್ಲಿರುವ ಉಗ್ರ ಬೆಂಬಲಿತ ಸಂಘಟನೆ, ಸ್ಲೀಪರ್ ಸೆಲ್ ಗಳು ಸಕ್ರಿಯವಾಗದಂತೆ ಹಿಡಿತ ಸಾಧಿಸಲಾಗಿದೆ. ಲಷ್ಕರ್ ಇ ತೋಯ್ಬಾ, ಜೈಷ್ ಎ ಮೊಹಮ್ಮದ್ ಅಲ್ಲದೆ ಸ್ಟೂಡೆಂಟ್ ಇಸ್ಲಾಮಿಕ್ ಮೂಮೆಂಟ್ ಆಫ್ ಇಂಡಿಯಾ, ಇಸ್ಲಾಮಿಕ್ ಸ್ಟೇಟ್ ಹಾಗೂ ಹರ್ಕತ್ ಉಲ್ ಮುಜಾಹಿದ್ದೀನ್ ಸಂಘಟನೆಗಳಿಂದ ಸಂಭಾವ್ಯ ದಾಳಿ ಬಗ್ಗೆ ಮಾಹಿತಿಯಿದೆ.
ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು, ತೀವ್ರಗೊಂಡ ಪ್ರತಿಭಟನೆ
ಜಮ್ಮು ಮತ್ತು ಕಾಶ್ಮೀರವಲ್ಲದೆ ನವದೆಹಲಿ, ಮುಂಬೈ ಅಥವಾ ಬೆಂಗಳೂರು ಈ ಬಾರಿ ಉಗ್ರರ ಟಾರ್ಗೆಟ್ ಆಗುವ ಸಾಧ್ಯತೆಯಿದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ. ಮುಂಬೈ ಹಾಗೂ ದಕ್ಷಿಣ ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್ ಬೆಂಬಲಿಗರ ಇರುವಿಕೆ ಬಗ್ಗೆ ಇತ್ತೀಚೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ವರದಿಯಿಂದ ತಿಳಿದು ಬಂದಿದೆ.