ಪುಲ್ವಾಮ ದಾಳಿಯನ್ನು ಕಂಡ ಸಿಆರ್ ಪಿಎಫ್ ಸಿಬ್ಬಂದಿ ಹಂಚಿಕೊಂಡ ಘಟನೆ ವಿವರ
ಜಮ್ಮು ಕಾಶ್ಮೀರದಲ್ಲಿ ಹಿಮಪಾತ ಆಗುವಂಥ ಭೀಕರ ದಿನಗಳಿವು. ಆ ಕಾರಣಕ್ಕೆ ಜಮ್ಮು-ಶ್ರೀನಗರದ ಹೆದ್ದಾರಿ ಬಂದ್ ಆಗಿತ್ತು. ಜತೆಗೆ ಪ್ರತ್ಯೇಕತಾವಾದಿಗಳು ಕರೆ ನೀಡಿದ್ದ ಬಂದ್ ಕೂಡ ಸೇರಿಕೊಂಡು ಗುರುವಾರದಂದು ಎಪ್ಪತ್ತೆಂಟು ವಾಹನಗಳಲ್ಲಿ ಏಕ ಕಾಲಕ್ಕೆ ಎರಡು ಸಾವಿರದೈನೂರಕ್ಕೂ ಹೆಚ್ಚು ಸಿಆರ್ ಪಿಎಫ್ ಸಿಬ್ಬಂದಿಯನ್ನು ಕರೆದೊಯ್ಯುವ ಸ್ಥಿತಿ ನಿರ್ಮಾಣವಾಗಿತ್ತು.
ಹೇಗೆ ಮಾಮೂಲಿ ದಿನಗಳಲ್ಲಿ ಈ ರೀತಿಯ ವಾಹನಗಳು ನಸುಕಿನಲ್ಲೇ ಜಮ್ಮುವಿನಿಂದ ಹೊರಡುತ್ತವೋ ಮೊನ್ನೆ ಕೂಡ ಅದೇ ಸಮಯಕ್ಕೆ ಹೊರಟಿವೆ. ಹೀಗೆ ಹೊರಡುವ ವಾಹನಗಳು ಖಾಜಿಗುಂಡ್ ನಲ್ಲಿ ವಿರಾಮಕ್ಕಾಗಿ ಸ್ವಲ್ಪ ಸಮಯ ನಿಲ್ಲಿಸುತ್ತವೆ. ಅಲ್ಲಿಂದ ಮುಂದೆ ಕೆಲವರು ಬಂಕರ್ ಗಳಿಗೆ ಹಾಗೂ ಶಸ್ತ್ರಾಸ್ತ್ರ ಇರುವ ವಾಹನಗಳಿಗೆ ಸ್ಥಳಾಂತರ ಆಗುತ್ತಾರೆ.
ಏಕೆಂದರೆ, ಅಲ್ಲಿಂದ ಮುಂದಿರುವ ದಾರಿಯ ಅಪಾಯವನ್ನು ಸಮರ್ಥವಾಗಿ ಎದುರಿಸುವ ಸಲುವಾಗಿ ಹೀಗೆ ಮಾಡಲಾಗುತ್ತದೆ. ಗುರುವಾರದಂದು ಎರಡು ಬೆಂಗಾವಲು ಪಡೆ ವಾಹನ ಜಮ್ಮುವಿನಿಂದ ಶ್ರೀನಗರ್ ಗೆ ಹೊರಟಿದೆ. ಭದ್ರತಾ ಪಡೆಯ ಬೆಂಗಾವಲು ವಾಹನದ ಭಾಗವಾಗಿ ಶಸ್ತ್ರಾಸ್ತ್ರ ಇದ್ದ ವಾಹನವೂ ತೆರಳಿದೆ.
ಎರಡನೇ ಭದ್ರತಾ ಬೆಂಗಾವಲು ಪಡೆಯ ವಾಹನದ ಮೇಲೆ ಪುಲ್ವಾಮದ ಲೆಥ್ ಪುರ್ ಪ್ರದೇಶದಲ್ಲಿ ಬಾಂಬ್ ತುಂಬಿದ್ದ ಎಸ್ ಯುವಿ ಬಂದು ಅಪ್ಪಳಿಸಿದ್ದು, ನಲವತ್ತು ಸೈನಿಕರು ಹುತಾತ್ಮರಾಗಿದ್ದಾರೆ. ಆ ದಿನ ನಡೆದದ್ದೇನು ಎಂಬ ಬಗ್ಗೆ ಸಿಆರ್ ಪಿಎಫ್ ಕಾನ್ ಸ್ಟೇಬಲ್ ವೊಬ್ಬರು ಮಾಧ್ಯಮದ ಜತೆಗೆ ಹಂಚಿಕೊಂಡಿರುವ ಸಂಗತಿ ಇಲ್ಲಿದೆ.

ಐದಾರು ಸಾವಿರ ಸಿಬ್ಬಂದಿ ಜಮ್ಮುವಿನಲ್ಲಿದ್ದರು
ಒಂದು ವಾರದಿಂದ ಅಲ್ಲಿ ಭದ್ರತಾ ವಾಹನಗಳ ಸಂಚಾರ ಇರಲಿಲ್ಲ. ರಜಾ ಮೇಲೆ ತೆರಳಿದ್ದವರು ಹಿಂತಿರುಗುತ್ತಿದ್ದರು. ಹಾಗೂ ಇತರೆಡೆಗೆ ಪೋಸ್ಟಿಂಗ್ ಆದವರು ಶ್ರೀನಗರ್ ಕಡೆಗೆ ತೆರಳಲು ಆಗುತ್ತಿರಲಿಲ್ಲ. ಜಮ್ಮುವಿನಲ್ಲಿ ಐದರಿಂದ ಆರು ಸಾವಿರ ಸಿಬ್ಬಂದಿ ಜಮೆ ಆಗಿದ್ದರು. ಇದರಿಂದ ಜಮ್ಮುವಿನ ಕ್ಯಾಂಪ್ ನಲ್ಲಿ ಸಮಸ್ಯೆ ಆಗಲು ಶುರುವಾಯಿತು. ಆ ಕಾರಣದಿಂದಲೇ ಎರಡು ಭದ್ರತಾ ಪಡೆಯನ್ನು ಒಟ್ಟಿಗೆ ಕಳುಹಿಸಲು ತೀರ್ಮಾನ ಕೈಗೊಳ್ಳಲಾಯಿತು. ಗುರುವಾರದ ನಸುಕು 3.30ಕ್ಕೆ ಜಮ್ಮುವನ್ನು ಬಿಟ್ಟು, ಬೆಳಗ್ಗೆ 11ರ ಸುಮಾರಿಗೆ ಖಾಜಿಗುಂಡ್ ತಲುಪಿದೆವು. ಅಲ್ಲಿ ಸಾಮಾನ್ಯವಾಗಿ ನಾವು ಬಂಕರ್ ವಾಹನಕ್ಕೆ ತೆರಳುತ್ತೇವೆ. ನಾವು ಬಹಳ ಮಂದಿ ಇದ್ದಿದ್ದರಿಂದ ಭದ್ರತಾ ವಾಹನದಲ್ಲಿ ಇದ್ದವರನ್ನು ಸಾಮಾನ್ಯ ವಾಹನದಲ್ಲಿ ಕೂರಿಸಲಾಯಿತು. ಆ ನಂತರ ವಾಹನಗಳಿಗೆ ಮುಂದಕ್ಕೆ ಹೊರಡುವಂತೆ ತಿಳಿಸಲಾಯಿತು.

ಹೆದ್ದಾರಿಯಲ್ಲಿ ದಿಢೀರನೇ ನುಗ್ಗಿ ಬಂದಿತು ಸ್ಕಾರ್ಪಿಯೋ
ಒಂದು ವೇಳೆ ಎಸ್ ಯುವಿ ಶಸ್ತ್ರಾಸ್ತ್ರದೊಂದಿಗೆ ಕಾವಲಿಗೆ ಇದ್ದ ವಾಹನಕ್ಕೆ ಗುದ್ದಿದ್ದರೆ ಕೆಲವು ಜೀವಗಳು ಉಳಿಯಬಹುದಿತ್ತು. ಖಾಜಿಗುಂಡ್ ಬಿಟ್ಟ ನಂತರ ಲೆಥ್ ಪುರ್ ಅನ್ನು ಮಧ್ಯಾಹ್ನ ಮೂರು ಗಂಟೆ ಹೊತ್ತಿಗೆ ವಾಹನಗಳು ತಲುಪಿದವು. ಲತೂಮೋಡ್ ದಾಟುವಾ ವೇಳೆಯಲ್ಲಿ ದಿಢೀರನ್ ಹೆದ್ದಾರಿಯಲ್ಲಿ ವೇಗವಾಗಿ ಸ್ಕಾರ್ಪಿಯೋ ಬಂದಿತು. ಒಂದು ನಿಮಿಷವೂ ಇಲ್ಲ. ಎರಡನೇ ಭದ್ರತಾ ಪಡೆಯ ಎರಡನೇ ವಾಹನಕ್ಕೆ ಗುದ್ದಿಸಿಯೇ ಬಿಟ್ಟಿತು. ಭಾರೀ ಬೆಳಕಿನೊಂದಿಗೆ ನಮ್ಮ ಕಣ್ಣುಗಳು ಕತ್ತಲೆಯಾಗಿ ಹೋದವು. ಸ್ಫೋಟ ಭಾರೀ ಸದ್ದಿನೊಂದಿಗೆ ಆಯಿತು. ಕೆಲ ಕಾಲ ನಮ್ಮ ಕಿವಿಗೆ ಬೇರೇನೂ ಕೇಳಿಸುತ್ತಿರಲಿಲ್ಲ. ನಮ್ಮ ಇಡೀ ಬಸ್ ಅಲ್ಲಾಡಿ ಹೋಯಿತು. ಬಸ್ ನ ಕೆಲವು ಕಿಟಕಿ ಗಾಜುಗಳು ಬಿರುಕು ಬಿಟ್ಟವು. ನಮ್ಮ ಬುದ್ಧಿಗೆ ಮಂಕು ಕವಿದಂತೆ ಆಯಿತು. ದಿಗ್ಭ್ರಾಂತರಾಗಿದ್ದ ನಾವು ಹತ್ತು ನಿಮಿಷಗಳ ಕಾಲ ಕೂತ ಜಾಗದಿಂದ ಕದಲಲು ಸಹ ಆಗಲಿಲ್ಲ.

ಆಗ ತಾನೇ ತರಬೇತಿ ಮುಗಿಸಿದ್ದರು
ಹಾಗೆ ಕೆಲ ಕಾಲ ಏನೂ ತೋಚದಂತಾಗಿತ್ತು ನಮ್ಮ ಪರಿಸ್ಥಿತಿ. ಆ ನಂತರ ಗುಂಡಿನ ಮೊರೆತದ ಶಬ್ದ ಕೇಳಿಸಿತು. ಅದು ಭಯೋತ್ಪಾದಕರದಾ ಅಥವಾ ದಾಳಿಯ ನಂತರ ನಮ್ಮವರ ಪ್ರತಿದಾಳಿಯಾ ಎಂಬುದು ಗೊತ್ತಾಗಲಿಲ್ಲ. ವಾಹನದಿಂದ ಇಳಿದು ಘಟನಾ ಸ್ಥಳದತ್ತ ಓಡಿದೆವು. ಆ ಭೀಕರ ಘನ ಘೋರ ದೃಶ್ಯ ಕಂಡು ಚೀರಲು ಆರಂಭಿಸಿದೆವು. ಆ ಬಸ್ ಅದೃಶ್ಯವೇ ಆಗಿಹೋಯಿತೇನೋ ಎಂಬ ಸ್ಥಿತಿ. ಸುತ್ತಲೂ ರಕ್ತಮಯ, ದೇಹದ ಭಾಗಗಳು ಸುತ್ತಲೂ ಚೆಲ್ಲಾಪಿಲ್ಲಿ ಆಗಿದ್ದವು. ನಮ್ಮಲ್ಲಿ ಹಲವರಿಗೆ ತಾನಾಗಿಯೇ ಕಣ್ಣೀರು ಬರಲಾರಂಭಿಸಿತು. ಹುತಾತ್ಮರಾದ ಪೈಕಿ ಹಲವರು ನಮ್ಮ ಆತ್ಮೀಯ ಸ್ನೇಹಿತರಾಗಿದ್ದರು. ಇನ್ನು ಆ ಬಸ್ ನಲ್ಲಿ ಇಬ್ಬರು ಆಗಷ್ಟೇ ಸೇರ್ಪಡೆ ಆಗಿದ್ದವರು. ತರಬೇತಿ ಮುಗಿಸಿ ಮೊದಲ ಪೋಸ್ಟಿಂಗ್ ಗಾಗಿ ತೆರಳುತ್ತಿದ್ದರು. ತಮ್ಮ ಯೂನಿಟ್ ಯಾವುದು ಎಂಬುದನ್ನು ಸಹ ಅವರು ನೋಡಿರಲಿಲ್ಲ.

ಸ್ಥಳೀಯರ ಸಹಾಯ ಇಲ್ಲದೆ ಹೀಗೆ ಮಾಡಲು ಸಾಧ್ಯವಿಲ್ಲ
ಸಂಜೆ ಹೊತ್ತಿಗೆ ವಾಹನಗಳು ಶ್ರೀನಗರ್ ತಲುಪಿದವು. ಅಲ್ಲಿಯವರೆಗೆ ಇದ್ದ ದಿಗ್ಭ್ರಮೆ, ದುಃಖವು ಸಿಟ್ಟಾಗಿ ಬದಲಾಯಿತು. ನನ್ನ ಎಷ್ಟೋ ಸಹೋದ್ಯೋಗಿಗಳು ಈಗಲೂ ಆ ಘಟನೆಯಿಂದ ಮಾನಸಿಕವಾಗಿ ಹೊರಬರಲು ಆಗುತ್ತಿಲ್ಲ. ಆ ದಾಳಿಯ ನಂತರ ಏನನ್ನೂ ತಿನ್ನುತ್ತಿಲ್ಲ. ಜತೆಗೆ ಹಲವರು ಈ ದಾಳಿಗೆ ಪ್ರತ್ಯುತ್ತರ ನೀಡಲು ಕುದಿಯುತ್ತಿದ್ದಾರೆ. ಇನ್ನೂ ಬಹಳ ಜನರಿಗೆ ಇರುವ ಸಿಟ್ಟು ಏನೆಂದರೆ ಕಾರಿನಲ್ಲಿ ಅಷ್ಟು ದೊಡ್ಡ ಪ್ರಮಾಣದಲ್ಲಿ ಸ್ಫೋಟಕವನ್ನು ಸ್ಥಳೀಯರ ಬೆಂಬಲ ಇಲ್ಲದೆ ತೆಗೆದುಕೊಂಡು ಬರುವುದಕ್ಕೆ ಸಾಧ್ಯವೇ ಇಲ್ಲ. ಆ ಬಗ್ಗೆ ಈಗ ಆಕ್ರೋಶಗೊಂಡಿದ್ದಾರೆ.












Click it and Unblock the Notifications