ಉಗ್ರರ ದಾಳಿ ಭೀತಿ :ಕಾಶ್ಮೀರ ತೊರೆಯುತ್ತಿರುವ ಸರಕಾರಿ ನೌಕರರು
ಶ್ರೀನಗರ ಜೂನ್ 3: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿ ಹೆಚ್ಚಳವು ಕಣಿವೆ ರಾಜ್ಯದಲ್ಲಿ ಹಿಂದೂಗಳು ಮತ್ತು ಕಾಶ್ಮೀರಿ ಪಂಡಿತರ ಮತ್ತೊಂದು ಸುತ್ತಿನ ವಲಸೆಗೆ ಕಾರಣವಾಗಿದೆ. ಇನ್ನೊಂದೆಡೆ ಪ್ರಧಾನಿಯವರ ಪರಿಹಾರ ಪ್ಯಾಕೇಜ್ ಅಡಿಯಲ್ಲಿ ಕೆಲಸ ಮಾಡುತ್ತಿರುವ ಅನೇಕ ಸರಕಾರಿ ನೌಕರರು ಕಾಶ್ಮೀರ ತೊರೆದು ಗುರುವಾರ ಜಮ್ಮು ತಲುಪಿದ್ದಾರೆ. ಇದು ಕಾಶ್ಮೀರದಲ್ಲಿ ಸತತ ಉಗ್ರರ ದಾಳಿಯಿಂದ ಹದೆಗೆಟ್ಟಿರುವ ಅಲ್ಲಿನ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.
"ಗುರುವಾರ ಭಯೋತ್ಪಾದಕರಿಂದ ರಾಜಸ್ಥಾನ ಮೂಲದ ಬ್ಯಾಂಕ್ ಮ್ಯಾನೇಜರ್ ಕೊಲೆ ಮತ್ತು ಬಿಹಾರದಿಂದ ಬಂದಿದ್ದ ವಲಸೆ ಕಾರ್ಮಿನ ಹತ್ಯೆಯಾಗಿದೆ. ಕಾಶ್ಮೀರದಲ್ಲಿ ಪರಿಸ್ಥಿತಿ ಹದೆಗೆಡುತ್ತಿದೆ. ಸುರಕ್ಷತೆಯ ನಿಟ್ಟಿನಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸದ ಕಾರಣ 30-40 ಕುಟುಂಬಗಳು ನಗರಗಳನ್ನು ತೊರೆದಿದ್ದಾರೆ. ಆದರೆ ನಗರದೊಳಗೆ ಮಾತ್ರ ಸುರಕ್ಷಿತ ಸ್ಥಳಗಳಿವೆ,'' ಎಂದು ಪ್ರಧಾನಿಯವರ ಪರಿಹಾರ ಪ್ಯಾಕೇಜ್ ಅಡಿಯಲ್ಲಿ ಉದ್ಯೋಗಿಯಾಗಿರುವ ಅಮಿತ್ ಕೌಲ್ ಎಎನ್ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
"1990ರ ದಶಕಕ್ಕಿಂತ ಇಂದಿನ ಕಾಶ್ಮೀರ ಹೆಚ್ಚು ಅಪಾಯಾರಿಯಾಗಿದೆ. ನಿರಾಶ್ರಿತರ ಕಾಲೊನಿಗಳಲ್ಲಿ ಏಕೆ ನಮ್ಮ ಜನರನ್ನು ಕೂಡಿಹಾಕಲಾಯಿತು ಎಂಬುದು ನಮ್ಮ ಪ್ರಶ್ನೆಯಾಗಿದೆ. ಆಡಳಿತ ತನ್ನ ವೈಫಲ್ಯಗಳನ್ನು ಏಕೆ ಮರೆಮಾಚುತ್ತಿದೆ,'' ಎಂದು ಮತ್ತೊಬ್ಬ ಉದ್ಯೋಗಿ ಅಜಯ್ ಪ್ರಶ್ನಿಸಿದ್ದಾರೆ.

ಭದ್ರತಾ ಸಿಬ್ಬಂದಿಯೂ ಸುರಕ್ಷಿತವಾಗಿಲ್ಲ
"ಇಲ್ಲಿ ಭದ್ರತಾ ಸಿಬ್ಬಂದಿಯೂ ಸುರಕ್ಷಿತವಾಗಿಲ್ಲ. ಈ ಪರಿಸ್ಥಿತಿಯಲ್ಲಿ ನಾಗರಿಕರು ಹೇಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಾರೆ. ಹೆಚ್ಚಿನ ಕುಟುಂಬಗಳು ಶ್ರೀನಗರವನ್ನು ತೊರೆಯುತ್ತಿವೆ. ಕಾಶ್ಮೀರಿ ಪಂಡಿತರ ಶಿಬಿರಗಳನ್ನು ಪೊಲೀಸರು ಸೀಲ್ ಮಾಡಿದ್ದಾರೆ,'' ಎಂದು ಸ್ಥಳೀಯ ನಿವಾಸಿ ಆಶು ಅವಲತ್ತುಕೊಂಡಿದ್ದಾರೆ.

65 ಸರಕಾರಿ ಉದ್ಯೋಗಿಗಳ ಕುಟುಂಬಗಳು ವಲಸೆ
ಕಾಶ್ಮೀರಿ ಪಂಡಿತ್ ಸಂಘರ್ಷ ಸಮಿತಿ(ಕೆಪಿಎಸ್ಎಸ್) ಅಧ್ಯಕ್ಷ ಸಂಜಯ್ ಟಿಕ್ಕೂ ಮಾತನಾಡಿ, "ಗುರುವಾರ ಅನೇಕ ಕಾಶ್ಮೀರಿ ಪಂಡಿತರು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ತೊರೆದಿದ್ದಾರೆ. ಅಲ್ಲದೇ ನನ್ನ ಮಾಹಿತಿಯ ಪ್ರಕಾರ ಸುಮಾರು 65 ಸರಕಾರಿ ಉದ್ಯೋಗಿಗಳು ತಮ್ಮ ಕುಟುಂಬ ಸಮೇತ ಶ್ರೀನಗರ ತೊರೆದಿದ್ದಾರೆ,'' ಎಂದು ಮಾಹಿತಿ ನೀಡಿದರು.

ಬನಿಹಾಲ್ ಸುರಂಗದವರೆಗೆ ಭದ್ರತೆ ಕಲ್ಪಿಸಿ
"ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ನಲ್ಲಿ ಬ್ಯಾಂಕ್ ಮ್ಯಾನೇಜರ್ ವಿಜಯ್ ಕುಮಾರ್ ಹತ್ಯೆಯ ನಂತರ ಹಲವು ಕುಟುಂಬಗಳು ಕಣಿವೆ ರಾಜ್ಯವನ್ನು ತೊರೆಯಲು ಪ್ರಾರಂಭಿಸಿದೆ. ಕಾಶ್ಮೀರವನ್ನು ತೊರೆಯುವ ಕುಟುಂಬಗಳಿಗೆ ಬನಿಹಾಲ್ ಸುರಂಗದವರೆಗೆ ಭದ್ರತೆಯನ್ನು ಆಡಳಿತ ಕಲ್ಪಿಸಬೇಕು,'' ಎಂದು ಕಾಶ್ಮೀರಿ ಪಂಡಿತ್ ಸಂಘರ್ಷ ಸಮಿತಿ(ಕೆಪಿಎಸ್ಎಸ್) ಒತ್ತಾಯಿಸಿದೆ.

ಸ್ಥಳದಲ್ಲಿ ಡಿಸಿ, ಎಸ್ಪಿ ಮೊಕ್ಕಾಂ
"ಪ್ರಧಾನಿಯವರ ಪರಿಹಾರ ಪ್ಯಾಕೇಜ್ ಅಡಿಯಲ್ಲಿ ಉದ್ಯೋಗಿಗಳಾಗಿರುವ ಕಾಶ್ಮೀರಿ ಪಂಡಿತ್ ನೌಕರರು ಸದ್ಯ ಕಾಶ್ಮೀರದ ಮಟ್ಟಾನ್ ನಲ್ಲಿದ್ದಾರೆ. ನಾಳೆ ಜಮ್ಮುವಿಗೆ ಸಾಮೂಹಿಕವಾಗಿ ವಲಸೆ ಹೋಗಲಿರುವ ಕಾರಣ ಬನಿಹಾಲ್ ಸುರಂಗದವರೆಗೆ ಭದ್ರತೆ ಒದಗಿಸುವಂತೆ ಅನಂತನಾಗ್ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಮಟ್ಟಾನ್ ನ ನಿರಾಶ್ರಿತರ ಕ್ಯಾಂಪ್ ನಲ್ಲಿ ಅನಂತನಾಗ್ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧೀಕ್ಷಕರು(ಎಸ್ಎಸ್ಪಿ) ಉಪಸ್ಥಿತರಿದ್ದಾರೆ,'' ಎಂದು ಕಾಶ್ಮೀರಿ ಪಂಡಿತ್ ಸಂಘರ್ಷ ಸಮಿತಿ(ಕೆಪಿಎಸ್ಎಸ್) ಟ್ವೀಟ್ ಮಾಡಿದೆ.

ಕಾಶ್ಮೀರದ ಪರಿಸ್ಥಿತಿ ಹದಗೆಟ್ಟಿದೆ
ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ವಕ್ತಾರ ತನ್ವೀರ್ ಸಾದಿಕ್ ಮಾತನಾಡಿ, "ಕಾಶ್ಮೀರವು ಸುರಕ್ಷಿತವಲ್ಲ ಎಂದು ಕಾಶ್ಮೀರಿ ಪಂಡಿತರಿಗೆ ಅನುಭವವಾಗುತ್ತಿದೆ. ಅವರು ಜಮ್ಮು ಮತ್ತು ಕಾಶ್ಮೀರ ತೊರೆಯುತ್ತಿರುವುದು ದುರದುಷ್ಟಕರ.
ಕಾಶ್ಮೀರವು ಅವರ ತವರು ಮನೆಯಾಗಿದೆ. ಅವರ ಸುರಕ್ಷತೆಯು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕೇವಲ ಹಾರಿಕೆ ಮಾತುಕಗಳಿಂದ ಯಾವುದೇ ಪ್ರಯೋಜನವಿಲ್ಲ. ಭದ್ರತೆ ಬೇಕಾಗಿದೆ. 1990ರ ಪರಿಸ್ಥಿತಿಗಿಂತಲೂ ಈಗಿನ ಕಾಶ್ಮೀರದ ಪರಿಸ್ಥಿತಿ ಹೆಚ್ಚು ಕೆಟ್ಟದಾಗಿದೆ. ಇದು ಬಿಜೆಪಿ ಹೇಗೆ ಕಾಶ್ಮೀರದ ಆಡಳಿತ ನಡೆಸಿದೆ ಎಂಬುದಕ್ಕೆ ಸಾಕ್ಷಿಯಾಗಿದೆ," ಎಂದು ದೂರಿದರು.

ಬ್ಯಾಂಕ್ ಮ್ಯಾನೇಜರ್ ಹತ್ಯೆ
ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಗೋಪಾಲ್ಪೋರಾ ಪ್ರದೇಶದಲ್ಲಿ ಹಿಂದೂ ಮಹಿಳೆಯೊಬ್ಬರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದರಯ. ಇದಾದ ಎರಡು ದಿನಗಳ ನಂತರ ಕುಲ್ಗಾಮ್ ಜಿಲ್ಲೆಯಲ್ಲಿ ಜೂನ್ 2 ರಂದು ರಾಜಸ್ಥಾನ ಮೂಲದ ಬ್ಯಾಂಕ್ ಮ್ಯಾನೇಜರ್ ವಿಜಯ್ ಕುಮಾರ್ ಅವರನ್ನು ಉಗ್ರರು ಹತ್ಯೆ ಮಾಡಿದ್ದರು.

ಭಯೋತ್ಪಾದಕರಿಂದ ಶಾಲಾ ಶಿಕ್ಷಕಿ ಹತ್ಯೆ
ರಜನಿ ಬಾಲಾ ಎಂಬ ಶಾಲಾ ಶಿಕ್ಷಕಿಯನ್ನು ಕೊಲ್ಲಲಾಗಿತ್ತು. ಅವರು ತಮ್ಮ ಪತಿ ಮತ್ತು ಮಗಳೊಂದಿಗೆ ಜಮ್ಮು ವಿಭಾಗದ ಸಾಂಬಾದಲ್ಲಿ ವಾಸಿಸುತ್ತಿದ್ದರು. ಕಾಶ್ಮೀರದಲ್ಲಿ ಇತ್ತೀಚಿಗೆ ನಡೆದ ಉದ್ದೇಶಿತ ಹತ್ಯೆಗಳ ಸರಣಿ ಮುಂದುವರಿದಿದೆ . ಕಳೆದ ವಾರ, ಬುದ್ಗಾಮ್ನ ಚದೂರ ಪ್ರದೇಶದಲ್ಲಿ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರು ಗುಂಡು ಹಾರಿಸಿದ ನಂತರ ಟಿವಿ ನಿರೂಪಕಿ ಅಮ್ರೀನ್ ಭಟ್ ಸಾವನ್ನಪ್ಪಿದ್ದರು. ಮೇ 12 ರಂದು ಬುದ್ಗಾಮ್ ಜಿಲ್ಲೆಯಲ್ಲಿ ಕಂದಾಯ ಇಲಾಖೆ ನೌಕರ ರಾಹುಲ್ ಭಟ್ ಅವರನ್ನು ಉಗ್ರರು ಹತ್ಯೆ ಮಾಡಿದ್ದರು.












Click it and Unblock the Notifications