'ವೈದ್ಯಕೀಯ ಅಧ್ಯಯನಕ್ಕಾಗಿ ಇನ್ನು ಪಾಕ್ಗೆ ಹೋಗಬೇಕಾಗಿಲ್ಲ': ಕಾಶ್ಮೀರದ ಯುವಕರಿಗೆ ಶಾ
ಶ್ರೀನಗರ, ಅಕ್ಟೋಬರ್ 25: ಜಮ್ಮು ಕಾಶ್ಮೀರದ ಮೂರು ದಿನದ ಪ್ರವಾಸ ಕೈಗೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ, "ವೈದ್ಯಕೀಯ ಅಧ್ಯಯನಕ್ಕಾಗಿ ಇನ್ನು ನೀವು ಪಾಕಿಸ್ತಾನಕ್ಕೆ ಹೋಗಬೇಕಾಗಿಲ್ಲ," ಎಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಯುವಕರಿಗೆ ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ನ್ನು 2019 ರಲ್ಲಿ ರದ್ದು ಮಾಡಿದ ಬಳಿಕ ಮೊದಲ ಬಾರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಅಮಿತ್ ಶಾ ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಾರು ಅಭಿವೃದ್ದಿ ಕಾರ್ಯವನ್ನು ಮಾಡಿದ್ದಾರೆ. ಎಸ್ಕೆಐಸಿಸಿಯಲ್ಲಿ ಮಾತನಾಡಿದ ಅಮಿತ್ ಶಾ, "ಕೇಂದ್ರಾಡಳಿತ ಪ್ರದೇಶದ ಮೇಲೆ 12,000 ಕೋಟಿ ರೂಪಾಯಿಯ ಹೂಡಿಕೆಯನ್ನು ನಾವು ಈಗಾಗಲೇ ಮಾಡಿದ್ದೇವೆ. ಸ್ಥಳೀಯ ಯುವಕರಿಗೆ ಐದು ಲಕ್ಷ ಉದ್ಯೋಗಗಳನ್ನು ಸೃಷ್ಟಿ ಮಾಡುವ ನಿಟ್ಟಿನಲ್ಲಿ 2022 ರ ಅಂತ್ಯದ ವೇಳೆಗೆ ಒಟ್ಟು ರೂಪಾಯಿ 51,000 ಕೋಟಿ ಹೂಡಿಕೆಯ ಗುರಿಯನ್ನು ಸರ್ಕಾರ ಹೊಂದಿದೆ. ಕಳೆದ ಎರಡು ವರ್ಷದಲ್ಲಿ ಇಪತ್ತು ಸಾವಿರ ಜನರಿಗೆ ಸರ್ಕಾರಿ ಉದ್ಯೋಗವನ್ನು ಒದಗಿಸಲಾಗಿದೆ," ಎಂದು ಹೇಳಿದ್ದಾರೆ.
ಇನ್ನು ಈ ಸಂದರ್ಭದಲ್ಲೇ ನ್ಯಾಷನಲ್ ಕಾನ್ಫೆರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾರ ವಿರುದ್ದ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ. "ಸರ್ಕಾರವು ಪಾಕಿಸ್ತಾನದೊಂದಿಗೆ ಮಾತನಾಡಬೇಕು ಎಂದು ಫಾರೂಕ್ ಅಬ್ದುಲ್ಲ ಸಲಹೆ ನೀಡಿದ್ದಾರೆ. ಈ ಬಗ್ಗೆ ನಾನು ಪತ್ರಿಕೆಯಲ್ಲಿ ಓದಿದೆ. ಅವರಿಗೆ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ಯ್ರವಿದೆ. ಆದರೆ ನಮ್ಮ ಸರ್ಕಾರ ಪಾಕಿಸ್ತಾನದ ಬದಲಾಗಿ ಕಾಶ್ಮೀರದ ಯುವಜನರ ಜೊತೆಗೆ ಮಾತನಾಡಲು ಬಯಸುತ್ತದೆ," ಎಂದು ಕೇಂದ್ರ ಗೃಹ ಸಚಿವರು ತಿಳಿಸಿದರು.

ಮೂರು ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಶಾ
"ಜಮ್ಮು ಮತ್ತು ಕಾಶ್ಮೀರವನ್ನು ಮೂರು ಕುಟುಂಬಗಳು ಆಳಿದೆ. ಆದರೆ ಕೇವಲ ಮೂರು ವೈದ್ಯಕೀಯ ಕಾಲೇಜುಗಳನ್ನು ಮಾತ್ರ ಇಲ್ಲಿ ಸ್ಥಾಪನೆ ಮಾಡಿದೆ. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಮ್ಮು ಮತ್ತು ಕಾಶ್ಮೀರದಲ್ಲಿ ಏಳು ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪನೆ ಮಾಡಲಿದ್ದಾರೆ. ನಾವು ಇಲ್ಲಿನ ಯುವಜನರೊಂದಿಗೆ ಮಾತನಾಡುತ್ತೇವೆ. ದೇಶದಲ್ಲೇ ಈ ರಾಜ್ಯವನ್ನು ಅತ್ಯಂತ ಅಭಿವೃದ್ದಿ ಹೊಂದಿದ ರಾಜ್ಯವನ್ನಾಗಿ ಮಾಡುತ್ತೇವೆ," ಎಂದು ಕಾಂಗ್ರೆಸ್, ನ್ಯಾಷನಲ್ ಕಾನ್ಪೆರೆನ್ಸ್ ಪಕ್ಷ ಹಾಗೂ ಪೀಪಲ್ಸ್ ಡೆಮಾಕ್ರಿಟಿಕ್ ಪಕ್ಷವನ್ನು ಉಲ್ಲೇಖ ಮಾಡದೆಯೇ ಹೇಳಿದರು.
"ಈ ಹಿಂದೆ ಐನ್ನೂರು ಯುವಕರು ವೈದ್ಯರಾಗಲು ಸಾಧ್ಯವಾಗಿದೆ. ಆದರೆ ಈಗ ಎರಡು ಸಾವಿರ ಯುವಕರು ವೈದ್ಯರಾಗಲು ಸಾಧ್ಯವಾಗುವಂತೆ ಈ ನೂತನ ವೈದ್ಯಕೀಯ ಕಾಲೇಜು ಮಾಡಲಿದೆ. ನಾವು ಈ ಬದಿ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನಡುವೆ ಅಭಿವೃದ್ದಿಯನ್ನು ತುಲನೆ ಮಾಡಿ ನೋಡಿದ್ದೇವೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರವರಿಗೆ ವಿದ್ಯುತ್, ರಸ್ತೆ, ಆರೋಗ್ಯ ಸೇವೆ, ಶೌಚಾಲಯ ಇದೆಯೇ?. ಅಲ್ಲಿ ಯಾವುದೂ ಕೂಡಾ ಇಲ್ಲ. ನಿಮಗೆ (ಕಾಶ್ಮೀರಿಗಳು) ಎಲ್ಲಾ ಭಾರತೀಯರಿಗೆ ಇರುವಂತಹ ಎಲ್ಲಾ ಹಕ್ಕುಗಳು ಇದೆ," ಎಂದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಪುಲ್ವಾಮಾ ಜಿಲ್ಲೆಯ ಲೇಥ್ಪೊರಾದಲ್ಲಿರುವ ಕೇಂದ್ರಿಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಶಿಬಿರಕ್ಕೆ ಭೇಟಿ ನೀಡಲಿದ್ದಾರೆ. ಸೈನಿಕರೊಂದಿಗೆ ಅಮಿತ್ ಶಾ ಊಟ ಮಾಡಲಿದ್ದಾರೆ. ರಾತ್ರಿ ಶಿಬಿರದಲ್ಲಿಯೇ ಉಳಿಯಲಿದ್ದಾರೆ ಎಂದು ವರದಿಯಾಗಿದೆ. ಇಂದು ಸಂಜೆ ಅಮಿತ್ ಶಾ ಶ್ರೀನಗರದ ದಾಲ್ ಸರೋವರದಲ್ಲಿ ಶಿಕಾರಾ ಆಚರಣೆಯ ಪ್ರಯುಕ್ತವಾಗಿ ನಡೆದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾದರು. ಇನ್ನು ಇಂದು ಖೀರ್ ಭವಾನಿ ದೇವಾಲಯಕ್ಕೆ ಕೂಡಾ ಗೃಹ ಸಚಿವರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications