ದೇವಿಂದರ್ ಸಿಂಗ್ ರಾಷ್ಟ್ರಪತಿ ಪದಕ ಪಡೆದಿರಲಿಲ್ಲ
ನವದೆಹಲಿ, ಜನವರಿ 14 : ಜಮ್ಮು ಮತ್ತು ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿ ದೇವಿಂದರ್ ಸಿಂಗ್ ಯಾವುದೇ ಪ್ರಶಸ್ತಿಯನ್ನು ಗೃಹ ಇಲಾಖೆಯಿಂದ ಪಡೆದಿರಲಿಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ. ದೇವಿಂದರ್ ಸಿಂಗ್ ಈಗಾಗಲೇ ಸೇವೆಯಿಂದ ಅಮಾನತುಗೊಂಡಿದ್ದಾರೆ.
ದೇವಿಂದರ್ ಸಿಂಗ್ ರಾಷ್ಟ್ರಪತಿಗಳ ಪದಕ ಪಡೆದಿದ್ದರು ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಆದ್ದರಿಂದ, ಪೊಲೀಸರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಪೊಲೀಸರು ಸತತವಾಗಿ ದೇವಿಂದರ್ ಸಿಂಗ್ ವಿಚಾರಣೆಯನ್ನು ನಡೆಸುತ್ತಿದ್ದಾರೆ.
ಮೂವರು ಉಗ್ರರಿಗೆ ಆಶ್ರಯ ನೀಡಿದ್ದ ಆರೋಪದ ಮೇಲೆ ದೇವಿಂದರ್ ಸಿಂಗ್ ಬಂಧಿಸಲಾಗಿದೆ. ಉಗ್ರರಿಂದ 12 ಲಕ್ಷ ಹಣ ಪಡೆದು ಅವರಿಗೆ ಆಶ್ರಯ ನೀಡಿದ್ದರು ಎಂಬ ಗಂಭೀರ ಆರೋಪ ಅವರ ಮೇಲಿದೆ. ಬಂಧನವಾಗುತ್ತಿದ್ದಂತೆ ಅವರನ್ನು ಅಮಾನತುಗೊಳಿಸಲಾಗಿದೆ.

ದೇವಿಂದರ್ ಸಿಂಗ್ 2018ರ ಸ್ವಾತಂತ್ರ ದಿನಾಚರಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಸರ್ಕಾರದಿಂದ ಪದಕವೊಂದನ್ನು ಪಡೆದಿದ್ದರು. 2017ರ ಆಗಸ್ಟ್ 27ರಂದು ಪುಲ್ವಾಮದಲ್ಲಿ ಉಗ್ರರ ಜೊತೆ ನಡೆಸಿದ ಎನ್ಕೌಂಟರ್ ಕಾರಣಕ್ಕೆ ಈ ಪದಕ ನೀಡಲಾಗಿತ್ತು.
ಹಿಜ್ಬುಲ್ ಮುಜಾಹಿದ್ದೀನ್ ಉಗ್ರರನ್ನು ಶರಣಾಗಿಸಲು ತಾನು ಪ್ರಯತ್ನ ನಡೆಸುತ್ತಿದ್ದೆ ಎಂದು ದೇವಿಂದರ್ ಸಿಂಗ್ ಪ್ರಾಥಮಿಕ ವಿಚಾರಣೆ ವೇಳೆ ಹೇಳಿದ್ದರು. ಆದರೆ, ಅವರು ಉಗ್ರರಿಗೆ ಸಹಕಾರ ನೀಡುತ್ತಿದ್ದರು ಎಂಬ ಆರೋಪವಿದ್ದು, ತನಿಖೆ ಮುಂದುವರೆದಿದೆ.
ಹಲವು ಬಾರಿ ಉಗ್ರರು ತಪ್ಪಿಸಿಕೊಳ್ಳಲು ದೇವಿಂದರ್ ಸಹಾಯ ಮಾಡಿದ್ದಾರೆ. ಇದಕ್ಕಾಗಿ ಅವರಿಂದ ಹಣವನ್ನು ಪಡೆದಿದ್ದಾರೆ ಎಂಬ ಆರೋಪಗಳಿವೆ. ಕೇಂದ್ರಿಯ ತನಿಖಾ ಸಂಸ್ಥೆಗಳು ಸಹ ತನಿಖೆಗೆ ಕೈ ಜೋಡಿಸಿವೆ. ದೇವಿಂದರ್ ವಿಚಾರಣೆ ತೀವ್ರಗೊಂಡಿದೆ.
ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಸೈಯದ್ ನಾವಿದ್ ಮುಷ್ತಾಕ್, ಇರ್ಫಾನ್ ಷಫಿ ಮಿರ್ ವಿಚಾರಣೆಯನ್ನು ನಡೆಸಲಾಗುತ್ತಿದೆ. ಸೈಯದ್ ಮೊದಲು ಪೊಲೀಸ್ ಪೇದೆಯಾಗಿದ್ದ. ದೇವಿಂದರ್ ಸಿಂಗ್ ಉಗ್ರರಿಗೆ ಹೇಗೆ ಪರಿಚಯವಾದ? ಎಂದು ಮಾಹಿತಿ ಸಂಗ್ರಹಿಸಲಾಗುತ್ತಿದೆ.











Click it and Unblock the Notifications