ಪುಲ್ವಾಮಾ ದಾಳಿ ಪ್ರಕರಣ: ಚಾರ್ಜ್ ಶೀಟ್ ಸಲ್ಲಿಸಿದ ಎನ್ಐಎ
ಶ್ರೀನಗರ, ಆ. 25: ಜಮ್ಮು ಮತ್ತು ಕಾಶ್ಮೀರ ಪುಲ್ವಾಮಾ ಜಿಲ್ಲೆಯ ಆವಂತಿಪೊರ್ ನಲ್ಲಿ ನಡೆದ ಅತ್ಮಾಹುತಿ ದಾಳಿಯ ಹಿಂದಿನ ಸಂಚುಕೋರ ಜೈಷ್ ಎ ಮೊಹಮ್ಮದ್ ಉಗ್ರ ಮುದಾಸಿರ್ ಅಹ್ಮದ್ ಖಾನ್ ಅಲಿಯಾಸ್ 'ಮೊಹಮ್ಮದ್ ಭಾಯಿ' ಸೇರಿದಂತೆ ದಾಳಿಗೆ ಕಾರಣರಾದವರನ್ನು ಭಾರತೀಯ ಸೇನೆ ಮಟ್ಟ ಹಾಕಿದೆ. ಸುಮಾರು 18 ತಿಂಗಳ ಬಳಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ತನ್ನ ತನಿಖೆಯಲ್ಲಿ ಪ್ರಗತಿ ತೋರಿಸಿದ್ದು ಇಂದು ದೋಷಾರೋಪಣಪಟ್ಟಿ ಸಲ್ಲಿಸಿದೆ.
ಫೆಬ್ರವರಿ 14ರಂದು ಸಿಆರ್ ಪಿಎಫ್ ಯೋಧರು ಬರುತ್ತಿದ್ದ ಶ್ರೀನಗರ-ಆವಂತಿಪೋರ್ ಹೆದ್ದಾರಿಯಲ್ಲಿ ಕಾರು ನುಗ್ಗಿಸಿ ಸ್ಫೋಟಕ ನಡೆಸಲು ಬೇಕಾದ ಯೋಜನೆ, ಸಾಮಾಗ್ರಿ, ಸಲಕರಣೆಗಳನ್ನು ಮುದಾಸಿರ್ ಒದಗಿಸಿದ್ದ. ಮುದಾಸಿರ್ ನಿರ್ದೇಶನದಂತೆ ಆದಿಲ್ ಅಹ್ಮದ್ ದಾರ್ ಅಂದು ಸ್ಫೋಟಕಗಳನ್ನು ಹೊಂದಿದ್ದ ಮಾರುತಿ ಎಕೋ ಕಾರನ್ನು ಸಿಆರ್ ಪಿಎಫ್ ಬಸ್ ನತ್ತ ನುಗ್ಗಿಸಿ ಸ್ಫೋಟಿಸಿದ್ದ. ಈ ದುರ್ಘಟನೆಯಲ್ಲಿ 40ಕ್ಕೂ ಅಧಿಕ ಸಿಆರ್ ಪಿಎಫ್ ಯೋಧರು ಹುತಾತ್ಮರಾದರು ಎಂದು ಚಾರ್ಜ್ ಶೀಟ್ ನಲ್ಲಿ ವಿವರಿಸಲಾಗಿದೆ.
ಜುಲೈ 5 ರಂದು ಎನ್ಐಎ ಏಳನೇ ಆರೋಪಿ ಜಮ್ಮು ಮತ್ತು ಕಾಶ್ಮೀರದ ಹಾಜಿಬಲ್ನ ಕಾಕಪೋರಾದ ನಿವಾಸಿ ಬಿಲಾಲ್ ಅಹ್ಮದ್ ಕುಚೆ ಬಂಧಿಸಲಾಗಿದೆ. ಘಟನೆಗೆ ಕಾರಣರಾದ ಜೈಶ್-ಎ-ಮೊಹಮ್ಮದ್ (ಜೆಇಎಂ)ನ ಭಯೋತ್ಪಾದಕರನ್ನು ಹತ್ಯೆ ಇಲ್ಲವೇ ಬಂಧನ ಮಾಡಲಾಗಿದೆ ಎಂದು ಶ್ರೀನಗರದ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾದ ದೋಷಾರೋಪಣ ಪಟ್ಟಿಯಲ್ಲಿ ಹೇಳಲಾಗಿದೆ.

ವರ್ಷಕ್ಕೂ ಮುಂಚಿತವಾಗಿ ಗಡಿಯಲ್ಲಿ ನುಸಳಿದ್ದರು
ದಾಳಿಯಲ್ಲಿ ಸುಮಾರು 35 ಕೆಜಿಗೂ ಅಧಿಕ ಆರ್ ಡಿಎಕ್ಸ್ ಅನ್ನು ಬಳಸಲಾಗಿದ್ದು, ಇದರಲ್ಲಿ ಅಮೋನಿಯಂ ನೈಟ್ರೇಟ್ ಮತ್ತು ಇನ್ನಿತರ ರಾಸಾಯನಿಕಗಳಿದ್ದವು. ಕಳೆದ ಮಾರ್ಚ್ ನಲ್ಲಿ ಸುಮಾರು 13 ಉಗ್ರರು ಭಾರತದ ಗಡಿಯೊಳಗೆ ನುಸುಳಿದ್ದರು. ಅವರು ಪೂಂಚ್, ಶೋಪಿಯಾನ್ ಮೂಲಕ ಆರ್ ಡಿಎಕ್ಸ್ ಗಳನ್ನು ಸಾಗಿಸಿದ್ದರು. ನಂತರ ಮಿಡೋರಾ ಟ್ರಾಲ್ ಪ್ರದೇಶದಿಂದ ಪುಲ್ವಾಮಾಕ್ಕೆ ಆರ್ ಡಿಎಕ್ಸ್ ಗಳನ್ನು ಸಿಲಿಂಡರ್ ಮತ್ತು ಕಲ್ಲಿದ್ದಲು ಚೀಲಗಳ ಮೂಲಕ ಸಾಗಿಸಲಾಗಿತ್ತು.

ಫೆಬ್ರವರಿ 6ರಂದು ದಾಳಿಗೆ ಸಂಚು
ಫೆಬ್ರವರಿ 6, 2019ರಂದು ದಾಳಿ ಮಾಡಲು ಮೊದಲು ಸಂಚು ರೂಪಿಸಲಾಗಿತ್ತು. ಆದರೆ, ಹೆದ್ದಾರಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಿಮಪಾತವಾಗಿದ್ದರಿಂದ ಸಾಧ್ಯವಾಗಿರಲಿಲ್ಲ. ರಸ್ತೆ ಕಾಮಗಾರಿ ಬಗ್ಗೆ ಫಾರೂಕ್ ಗೆ ಶಕೀರ್ ಬಷೀರ್ ನಿರಂತರವಾಗಿ ಮಾಹಿತಿ ನೀಡುತ್ತಿದ್ದ. ಸ್ಫೋಟಕಗಳನ್ನು ಬಷೀರ್ ಮನೆಯಲ್ಲೇ ಇರಿಸಲಾಗಿತ್ತು. ನಂತರ ಸೂಸೈಡ್ ಬಾಂಬರ್ ಆದಿಲ್ ಅಹ್ಮದ್ ದರ್ ಬಳಸಿಕೊಂಡು ದಾಳಿ ನಡೆಸಲಾಯಿತು. ಎಕೋ ಕಾರನ್ನು ಚಲಾಯಿಸಿದ ಅಹ್ಮದ್ ನೇರವಾಗಿ ಹೆಚ್ಚು ಯೋಧರಿದ್ದ ವಾಹನಕ್ಕೆ ಗುದ್ದಿದ್ದ.

ಸುಮಾರು 15, 000 ಪುಟಗಳ ದಾಖಲೆ
ಪುಲ್ವಾಮಾ ದಾಳಿಗೆ ಸಂಬಂಧಿಸಿದಂತೆ ಎನ್ಐಎ ನ್ಯಾಯಾಲಯದಲ್ಲಿ 5,000 ಪುಟಗಳ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದೆ. ಸಾಕ್ಷಿಗಳು, ಡಿಜಿಟಲ್ ಪುರಾವೆ ಎಲ್ಲವೂ ಸೇರಿಸಿದರೆ ಸುಮಾರು 15,000 ಪುಟದ ಚಾರ್ಜ್ ಶೀಟ್ ಇದಾಗಿದೆ. ಮಸೂದ್ ಅಜರ್ ಪ್ರಮುಖ ಆರೋಪಿಯಾಗಿ ಹೆಸರಿಸಲಾಗಿದೆ. ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ಸೆಪ್ಟೆಂಬರ್ 1ಕ್ಕೆ ಮುಂದೂಡಿದೆ ಎಂದು ಎನ್ಐಎ ಪರ ವಕೀಲ ವಿಪಿನ್ ಕಾಲ್ರಾ ಹೇಳಿದರು.

ಒಟ್ಟು 200 ಕೆಜಿ ಸ್ಫೋಟಕ ಬಳಕೆ
ಪುಲ್ವಾಮಾ ದಾಳಿಗೆ ಉಗ್ರ ಜೈಷ್ ಎ ಮೊಹಮ್ಮದ್ ಸಂಘಟನೆ 200ಕೆಜಿ ಸ್ಫೋಟಕ ವಸ್ತುಗಳನ್ನು ಬಳಸಲಾಗಿದ್ದು, ಅದರಲಿ 35 ಕೆಜಿ ಆರ್ ಡಿಎಕ್ಸ್ ಇತ್ತು. ಆರ್ ಡಿಎಕ್ಸ್ ಪೂರೈಕೆ ಪಾಕಿಸ್ತಾನದಿಂದ ಆಗಿದೆ, ಇದಕ್ಕೆ ಪೂರಕವಾದ ವಿಡಿಯೋ ಸಾಕ್ಷ್ಯ ಇದೆ, ಗಡಿಯಲ್ಲಿ ಅಕ್ರಮವಾಗಿ ನುಸುಳುವಿಕೆಯಾಗಿದೆ. ನೈಟ್ರೋ ಗ್ಲಿಸರಿನ್ ಹಾಗೂ ಅಮೊನಿಯಂ ನೈಟ್ರೇಟ್ ಗಳನ್ನು ಸ್ಥಳೀಯ ಮಾರುಕಟ್ಟೆಯಲ್ಲೇ ಖರೀದಿಸಲಾಗಿದೆ ಎಂದು ಎನ್ಐಎ ಹೇಳಿದೆ.












Click it and Unblock the Notifications