ಕಾಶ್ಮೀರ ಪ್ರತ್ಯೇಕತಾವಾದಿ ಯಾಸಿನ್ ಮಲಿಕ್ ದೋಷಿ; ಮೇ 25ಕ್ಕೆ ಶಿಕ್ಷೆ ಪ್ರಕಟ
ಶ್ರೀನಗರ, ಮೇ 19: ಕಳೆದ 2017ರಲ್ಲಿ ಕಾಶ್ಮೀರ ಕಣಿವೆಯಲ್ಲಿ ಶಾಂತಿ ಕದಡಿದ ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಪ್ರತ್ಯೇಕತಾವಾದಿ ನಾಯಕ ಮೊಹಮ್ಮದ್ ಯಾಸಿನ್ ಮಲಿಕ್ ದೋಷಿ ಎಂದು ದೆಹಲಿ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ದೆಹಲಿ ವಿಶೇಷ ನ್ಯಾಯಾಲಯದ ಎದುರು ಕಠಿಣ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಸೇರಿದಂತೆ ಎಲ್ಲಾ ಆರೋಪಗಳಲ್ಲಿ ತಪ್ಪೊಪ್ಪಿಕೊಂಡಿರುವುದರ ಬೆನ್ನಲ್ಲೇ ಮೇ 25ರಂದು ಶಿಕ್ಷೆ ಪ್ರಮಾಣವನ್ನು ಪ್ರಕಟಿಸಲಾಗುವುದು ಎಂದು ಕೋರ್ಟ್ ಹೇಳಿದೆ.
ತಪ್ಪಾಯ್ತು ಕ್ಷಮಿಸಿ: ಕಾಶ್ಮೀರ ಕಣಿವೆಯಲ್ಲಿ ಕಿಡಿ ಹೊತ್ತಿಸಿದ ಮಲಿಕ್ ಕೋರ್ಟಿನಲ್ಲಿ ಮಂಡಿಯೂರಿದ!
ಮಲಿಕ್ ಮತ್ತು ಇತರರು ಭಯೋತ್ಪಾದಕತೆಗೆ ನಿಧಿ ಸಂಗ್ರಹಿಸಿರುವುದು ಪ್ರಾಥಮಿಕ ಹಂತದಲ್ಲಿ ದೃಢಪಟ್ಟಿದೆ ಎಂದು ಈ ಹಿಂದೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಪ್ರವೀಣ್ ಸಿಂಗ್ ಹೇಳಿದ್ದು, ಮೇ 19ರಂದು ಆರೋಪಿಗಳ ವಿರುದ್ಧದ ವಾದಗಳನ್ನು ಆಲಿಸಲಾಯಿತು. ಅಪರಾಧಿಗಳ ಶಿಕ್ಷೆ ಪ್ರಮಾಣವನ್ನು ಮೇ 25ಕ್ಕೆ ಪ್ರಕಟಿಸಲಾಗುತ್ತದೆ.
ನನ್ನದೇ ತಪ್ಪು ಎಂದು ಒಪ್ಪಿಕೊಂಡ ಯಾಸಿನ್ ಮಲಿಕ್
ಸೆಕ್ಷನ್ 16ರ ಭಯೋತ್ಪಾದನಾ ಕೃತ್ಯ, 17ರ ಭಯೋತ್ಪಾದಕ ಕೃತ್ಯಕ್ಕೆ ನಿಧಿ ಸಂಗ್ರಹಿಸುವುದು, 18ರ ಅಡಿ ಭಯೋತ್ಪಾದಕ ಕೃತ್ಯಕ್ಕೆ ಪಿತೂರಿ ನಡೆಸುವುದು ಮತ್ತು 20ರ ಪ್ರಕಾರ ಭಯೋತ್ಪಾದಕ ಕೃತ್ಯಕ್ಕೆ ಪಿತೂರಿ ನಡೆಸುವುದು. ಇದರ ಜೊತೆಗೆ ಯುಎಪಿಎ ಮತ್ತು ಭಾರತೀಯ ದಂಡ ಸಂಹಿತೆಯ 120-ಬಿರ ಕ್ರಿಮಿನಲ್ ಪಿತೂರಿ ಮತ್ತು 124-ಎ ದೇಶದ್ರೋಹದ ಗ್ಯಾಂಗ್ ಅಥವಾ ಸಂಸ್ಥೆ ಕಟ್ಟಿರುವುದು ಸೇರಿದಂತೆ ತನ್ನ ವಿರುದ್ಧ ಹೊರಿಸಲಾದ ಆರೋಪಗಳನ್ನು ತಾನು ವಿರೋಧಿಸುವುದಿಲ್ಲ ಎಂದು ಮಲಿಕ್ ನ್ಯಾಯಾಲಯಕ್ಕೆ ತಿಳಿಸಿದ್ದಾನೆ.
ಸ್ವಾತಂತ್ರ್ಯ ಹೋರಾಟದ ಹೆಸರಿನಲ್ಲಿ ನಿಧಿ ಸಂಗ್ರಹ
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಮತ್ತು ಇತರ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುವುದಕ್ಕಾಗಿ ಸ್ವಾತಂತ್ರ್ಯ ಹೋರಾಟದ ಹೆಸರಿನಲ್ಲಿ ನಿಧಿ ಸಂಗ್ರಹಿಸಲು ಯಾಸಿನ್ ಮಲಿಕ್ ಜಗತ್ತಿನಾದ್ಯಂತ ತಮ್ಮ ನೆಟ್ ವರ್ಕ್ ಹೊಂದಿದ್ದನು ಎಂದು ನ್ಯಾಯಾಲಯ ಹೇಳಿದೆ.
ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಫಾರೂಕ್ ಅಹ್ಮದ್ ದಾರ್ ಅಲಿಯಾಸ್ ಬಿಟ್ಟಾ ಕರಾಟೆ, ಶಬ್ಬೀರ್ ಶಾ, ಮಸರತ್ ಆಲಂ, ಮೊಹಮ್ಮದ್ ಯೂಸುಫ್ ಶಾ, ಅಫ್ತಾಬ್ ಅಹ್ಮದ್ ಶಾ, ನಯೀಮ್ ಖಾನ್, ಮೊಹಮ್ಮದ್ ಅಕ್ಬರ್ ಖಾಂಡೆ, ರಾಜಾ ಮೆಹ್ರಾಜುದ್ದೀನ್ ಕಲ್ವಾಲ್, ಬಶೀರ್ ಅಹ್ಮದ್ ಭಟ್, ಜಹೂರ್ ಅಹ್ಮದ್ ಶಾ ವತಾಲಿ, ಶಬೀರ್ ಅಹ್ಮದ್ ಶಾ, ಅಬ್ದುಲ್ ರಶೀದ್ ಶೇಖ್, ಮತ್ತು ನವಲ್ ಕಿಶೋರ್ ಕಪೂರ್ ಸೇರಿದಂತೆ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕರ ವಿರುದ್ಧ ನ್ಯಾಯಾಲಯವು ಔಪಚಾರಿಕ ಆರೋಪಗಳನ್ನು ಮಾಡಿದೆ.
ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಕ್ಕೆ ಪಾಕ್ ನಿಧಿ
ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುವುದಕ್ಕಾಗಿಯೇ ಪಾಕಿಸ್ತಾನ ಮತ್ತು ಅದರ ಏಜೆನ್ಸಿಗಳ ಮೂಲಕ ನಿಧಿ ಸಂಗ್ರಹಿಸಲಾಗುತ್ತಿದೆ. ದುಷ್ಕೃತ್ಯಗಳನ್ನು ಮಾಡುವುದಕ್ಕೆ ರಾಜತಾಂತ್ರಿಕ ಕಾರ್ಯಾಚರಣೆಯನ್ನು ಸಹ ಬಳಸಲಾಗಿದೆ. ಭಯೋತ್ಪಾದನಾ ಕೃತ್ಯಗಳಿಗೆ ಅಂತಾರಾಷ್ಟ್ರೀಯ ಘೋಷಿತ ಭಯೋತ್ಪಾದಕರು ಹಾಗೂ ಆರೋಪಿ ಹಫೀಜ್ ಸಯೀದ್ನಿಂದಲೂ ಹಣ ಕಳುಹಿಸಲಾಗಿದೆ. ಭಾರತದ ಒಕ್ಕೂಟದಿಂದ ಜಮ್ಮು ಮತ್ತು ಕಾಶ್ಮೀರವನ್ನು ಪ್ರತ್ಯೇಕಿಸುವ ಉದ್ದೇಶದಿಂದ ಕ್ರಿಮಿನಲ್ ಸಂಚು ರೂಪಿಸಲಾಗಿದೆ. ಈ ಮೂಲ ಉದ್ದೇಶವನ್ನು ಈಡೇರಿಸಿಕೊಳ್ಳುವುದಕ್ಕಾಗಿಯೇ ಕೆಲವು ಉಗ್ರಕೃತ್ಯಗಳು ಪಿತೂರಿಯನ್ನು ನಡೆಸುವ ಕುರಿತು ಚರ್ಚಿಸಲಾಗಿದೆ ಎಂದು ಹೇಳಲಾಗಿದೆ.
ಉಗ್ರಕೃತ್ಯಗಳಿಗೆ ನಿಧಿ ಸಂಗ್ರಹಣೆಯ ಹೊಣೆ ಹೊತ್ತಕೊಂಡವರು?
ಈ ಭಯೋತ್ಪಾದಕ ನಿಧಿಯ ಹರಿವಿನ ಪ್ರಮುಖ ಮಾರ್ಗಗಳಲ್ಲಿ ಆರೋಪಿ ಜಹೂರ್ ಅಹ್ಮದ್ ಶಾ ವತಾಲಿ ಒಬ್ಬನಾಗಿದ್ದಾನೆ. ಈ ನಿಧಿ ಸಂಗ್ರಹಣೆ ಹಾದಿಯನ್ನು ಆರೋಪಿ ನವಲ್ ಕಿಶೋರ್ ಕಪೂರ್ ಸುಗಮಗೊಳಿಸುವಲ್ಲಿ ಸಕ್ರಿಯ ಪಾತ್ರ ವಹಿಸಿದ್ದಾನೆ ಎಂದು ಹೇಳಲಾಗಿದೆ. ರಾಷ್ಟ್ರೀಯ ತನಿಖಾ ತಂಡ (NIA)ದ ಪ್ರಕಾರ ಲಷ್ಕರ್-ಎ-ತೈಬಾ (LeT), ಹಿಜ್ಬುಲ್-ಮುಜಾಹಿದ್ದೀನ್ (HM), ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (JKLF), ಜೈಶ್-ಎ-ಮೊಹಮ್ಮದ್ (JeM) ಮುಂತಾದ ವಿವಿಧ ಭಯೋತ್ಪಾದಕ ಸಂಘಟನೆಗಳು ಪಾಕಿಸ್ತಾನದ ಐಎಸ್ಐ ಬೆಂಬಲದ ಮೂಲಕ ನಾಗರಿಕರು ಮತ್ತು ಭದ್ರತಾ ಸಿಬ್ಬಂದಿ ಮೇಲೆ ದಾಳಿ ಮಾಡುವ ಮೂಲಕ ಕಣಿವೆಯಲ್ಲಿ ಹಿಂಸಾಚಾರವನ್ನು ನಡೆಸಿದೆ.