ಸತತ 100 ದಿನಗಳ ಬಳಿಕ ಕಾಶ್ಮೀರದಲ್ಲಿ ರೈಲು ಸೇವೆ ಪುನರಾರಂಭ
ಶ್ರೀನಗರ, ನವೆಂಬರ್ 7: ಕಾಶ್ಮೀರದಲ್ಲಿ ರೈಲು ಸೇವೆ ಮುಂಬರುವ ಸೋಮವಾರದಿಂದ ಪುನರಾರಂಭಗೊಳ್ಳಲಿದೆ.
ಕಾಶ್ಮೀರದ ಉತ್ತರದಿಂದ ದಕ್ಷಿಣ ಭಾಗಕ್ಕೆ ಸಂಚರಿಸುವ ರೈಲನ್ನು ನವೆಂಬರ್ 11ರಿಂದ ಪುನರಾರಂಭಿಸಲು ಸರ್ಕಾರ ಚಿಂತನೆ ನಡೆಸಿದೆ.
ಕಾಶ್ಮೀರದ ವಿಭಾಗೀಯ ಆಯುಕ್ತರಾದ ಬಷೀರ್ ಅಹ್ಮದ್ ಖಾನ್ ಈ ವಿಚಾರ ತಿಳಿಸಿದ್ದು, ಈಗಾಗಲೇ ರೈಲ್ವೆ ಅಧಿಕಾರಿಗಳು, ಜಿಲ್ಲೆಯ ಮುಖ್ಯ ಅಧಿಕಾರಿಗಳು ಹಾಗೂ ಪೊಲೀಸರ ನಡುವೆ ಈ ಸಂಬಂಧ ಮಾತುಕತೆ ನಡೆದಿದ್ದು, ನವೆಂಬರ್ 10ರಂದು ಪ್ರಯೋಗಾರ್ಥ ಸಂಚಾರ ಆರಂಭವಾಗಲಿದೆ, ಹಾಗೂ ನವೆಂಬರ್ 11ರಂದು ರೈಲು ಸಂಚಾರ ಪುನರಾರಂಭಗೊಳ್ಳಲಿದೆ.

100 ದಿನಗಳ ನಂತರ ರೈಲು ಸೇವೆ
ಸತತ ನೂರು ದಿನಗಳ ನಂತರ ಈ ರೈಲು ಸಂಚಾರ ಮತ್ತೊಮ್ಮೆ ಆರಂಭಗೊಳ್ಳುತ್ತಿದ್ದು, ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ಧತಿ ವೇಳೆ ರೈಲು ಸಂಚಾರ ನಿರ್ಬಂಧಿಸಲಾಗಿತ್ತು.

ರೈಲು ಕಂಬಿಗಳ ವ್ಯವಸ್ಥೆ ಪರಿಶೀಲನೆ
ಬಾರಾಮುಲ್ಲಾ , ಅನಂತ್ನಾಗ್ , ಪುಲ್ವಾಮಾದಂತಹ ಆಯಕಟ್ಟಿನ ಪ್ರದೇಶಗಳನ್ನು ಹಾದು ಹೋಗುವ ರೈಲು ಸಂಚಾರಕ್ಕೆ ಪೂರಕವಾಗುವಂತೆ 3 ದಿನಗಳ ಕಾಲ ರೈಲು ಕಂಬಿಗಳ ವ್ಯವಸ್ಥೆಯನ್ನೂ ಪರಿಶೀಲಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.

ರೈಲ್ವೆ ಮೊದಲು ಆರಂಭಗೊಂಡಿದ್ದು ಯಾವಾಗ
2009ರಿಂದ ಆರಂಭವಾಗಿದ್ದ ಈ ರೈಲು ಸೇವೆಯಲ್ಲಿ 26 ರೈಲುಗಳು ಬಾರಾಮುಲ್ಲಾದಿಂದ ದಕ್ಷಿಣ ಕಾಶ್ಮೀರದ ಬನಿಹಾಲ್ಗೆ ಸಂಚರಿಸುತ್ತವೆ. ಆ.5ರಂದು ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿತ್ತು.

ಆರ್ಟಿಕಲ್ 370 ರದ್ದು, ಮಾಹಿತಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರವು 05 ಆಗಸ್ಟ್ 2019ರ ಸೋಮವಾರ ಇತಿಹಾಸ ರಚಿಸಿತ್ತು. ಪಾಕಿಸ್ತಾನಿ ಭಯೋತ್ಪಾದಕರ ಆಡುಂಬೊಲವಾಗಿದ್ದ ಜಮ್ಮು ಮತ್ತು ಕಾಶ್ಮೀರ ಎಂಬ ಹಿಂಸಾಪೀಡಿತ, ಉಗ್ರವಾದ ಪೀಡಿತ ರಾಜ್ಯವು ಕಳೆದ ಏಳು ದಶಕಗಳಿಂದ ಅನುಭವಿಸುತ್ತಿದ್ದ 'ವಿಶೇಷ ಸ್ಥಾನಮಾನ' ಕಳಚಿಕೊಂಡು, ಕೇಂದ್ರಾಡಳಿತವಾಗಿದೆ. ಈ ಪ್ರಸ್ತಾವನೆಗೆ ರಾಷ್ಟ್ರಪತಿಯ ಅಂಕಿತವೂ ಬಿದ್ದಿದ್ದು, ಜಮ್ಮು ಮತ್ತು ಕಾಶ್ಮೀರವು ಇಂದಿನಿಂದಲೇ ಕೇಂದ್ರಾಡಳಿತ ಪ್ರದೇಶವಾಗಿದೆ.
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾಗಿದೆ. ಅಂದರೆ ಸಂವಿಧಾನದ 370ನೇ ವಿಧಿ ಹಾಗೂ 35(ಎ) ಕೂಡ ರದ್ದಾಗಿದೆ.
ಕೇಂದ್ರದ ಎಲ್ಲ ಕಾನೂನುಗಳು, ಉದಾಹರಣೆಗೆ ಕರ್ನಾಟಕ ರಾಜ್ಯದಂತೆ, ಗೋವಾದಂತೆ, ದಿಲ್ಲಿಯಂತೆ, ಇನ್ನು ನೇರವಾಗಿ ಜಮ್ಮು ಮತ್ತು ಕಾಶ್ಮೀರಕ್ಕೂ ಲಾಗೂ ಆಗಿದೆ.












Click it and Unblock the Notifications