ಜಮ್ಮು ಕಾಶ್ಮೀರ: ದೂರವಾಣಿ ನಿರ್ಬಂಧ ತೆರವು, ಶಾಲೆ ಮರು ಪ್ರಾರಂಭ
ನವದೆಹಲಿ, ಆಗಸ್ಟ್ 16: ಜಮ್ಮು ಕಾಶ್ಮೀರದ ಪರಿಸ್ಥಿತಿ ದಿನೇ-ದಿನೇ ಶಾಂತಿಯುತವಾಗುತ್ತಿದ್ದು, ಇಂದು ಮಧ್ಯರಾತ್ರಿಯಿಂದ ಅಥವಾ ಇನ್ನೆರಡು ದಿನದಲ್ಲಿ ಜಮ್ಮು ಕಾಶ್ಮೀರದಲ್ಲಿ ದೂರವಾಣಿ ಸಂಪರ್ಕ ಪುನರ್ಸ್ಥಾಪಿಸಲಾಗುವುದು ಎಂದು ಜಮ್ಮು ಕಾಶ್ಮೀರ ಮುಖ್ಯ ಕಾರ್ಯದರ್ಶಿ ಬಿವಿಆರ್ ಸುಬ್ರಹ್ಮಣ್ಯಂ ಹೇಳಿದ್ದಾರೆ.
ಅಷ್ಟೆ ಅಲ್ಲದೆ ಸೋಮವಾರದಿಂದ ಶಾಲೆ, ಕಾಲೇಜುಗಳು ಸಹ ಮರು ಪ್ರಾರಂಭವಾಗಲಿವೆ. ಮೊದಲಿಗೆ ಶ್ರೀನಗರದಲ್ಲಿ ಶಾಲೆಗಳು ಪ್ರಾರಂಭವಾಗಲಿವೆ ಆ ನಂತರ ಹಂತ-ಹಂತವಾಗಿ ಬೇರೆಡೆಗಳಲ್ಲಿಯೂ ಶಾಲೆಗಳು ಪ್ರಾರಂಭವಾಗಲಿವೆ. ಎಂದು ಸುಬ್ರಹ್ಮಣ್ಯಂ ಹೇಳಿದ್ದಾರೆ.
ಸರ್ಕಾರಿ ಕಚೇರಿಗಳು ಸೋಮವಾರದಿಂದ ಕಾರ್ಯನಿರ್ವಹಿಸುತ್ತವೆ ಮತ್ತು ಸಾರ್ವಜನಿಕ ಸಾರಿಗೆಗಳು ಸಹ ಲಭ್ಯವಾಗಲಿವೆ ಎಂದು ಸುಬ್ರಹ್ಮಣ್ಯಂ ಹೇಳಿದ್ದಾರೆ.

ಹೀಗೆ ಹಂತ ಹಂತವಾಗಿ ಜಮ್ಮು ಕಾಶ್ಮೀರದಲ್ಲಿ ವಿಧಿಸಲಾಗಿರುವ ಎಲ್ಲ ನಿರ್ಬಂಧಗಳನ್ನು ಹಿಂದಕ್ಕೆ ಪಡೆಯಲಾಗುವುದು ಎಂದ ಸುಬ್ರಹ್ಮಣ್ಯಂ ಪಾಕಿಸ್ತಾನ ಮೂಲದ ಉಗ್ರರು ಕಣಿವೆ ರಾಜ್ಯದಲ್ಲಿ ದಾಳಿ ಮಾಡುವುದು ಸಮಸ್ಯೆ ಸೃಷ್ಟಿಸುವುದನ್ನು ತಡೆಯಲೆಂದು ನಿರ್ಭಂದಗಳನ್ನು ಹೇರಲಾಗಿದೆ ಎಂದರು.
ಪಾಕಿಸ್ತಾನವು ಕಾಶ್ಮೀರದಲ್ಲಿ ತಲ್ಲಣ ಸೃಷ್ಟಿಸಲು ಪ್ರಯತ್ನಗಳನ್ನು ಮಾಡಿತಾದರೂ ನಾವು ಅದನ್ನು ತಡೆಯಲು ಯಶಸ್ವಿ ಆಗಿದ್ದೇವೆ. ಕಣಿವೆ ರಾಜ್ಯದಲ್ಲಿ ನಿರ್ಬಂಧ ಹೇರಿದ ದಿನದಿಂದ ಈ ವರೆಗೆ ಒಂದು ಸಾವು ಸಹ ವರದಿ ಆಗಿಲ್ಲ ಎಂದು ಅವರು ಮಾಹಿತಿ ನೀಡಿದರು. ಆಗಸ್ಟ್ 4 ರಂದು ಜಮ್ಮು ಕಾಶ್ಮೀರದಲ್ಲಿ ನಿರ್ಬಂಧ ಹೇರಲಾಗಿತ್ತು. ಈಗ ಅದನ್ನು ಸ್ವಲ್ಪ ಮಟ್ಟಿಗೆ ಸಡಿಲಿಸಲಾಗಿದೆ.












Click it and Unblock the Notifications