ಕಾಶ್ಮೀರಿಗಳಿಗೆ ತಾವು ಭಾರತೀಯರು ಎನಿಸುತ್ತಿಲ್ಲ: ಫಾರೂಖ್ ಅಬ್ದುಲ್ಲಾ
ಶ್ರೀನಗರ, ಸೆಪ್ಟೆಂಬರ್ 24: ಈಗಿನ ಸಂದರ್ಭದಲ್ಲಿ ಕಾಶ್ಮೀರದ ಜನತೆಗೆ ತಾವು ಭಾರತೀಯರು ಎಂಬ ಭಾವನೆ ಉಳಿದಿಲ್ಲ, ಭಾರತೀಯರಾಗಲು ಅವರು ಬಯಸುತ್ತಿಲ್ಲ ಮತ್ತು ಮುಂದೆ ಬಹುಶಃ ಚೀನೀಯರಾಗಲು ಬಯಸಬಹುದು ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ಹೇಳಿದ್ದಾರೆ.
ಟೆಲಿವಿಷನ್ ಸಂದರ್ಶನವೊಂದರಲ್ಲಿ ಬುಧವಾರ ಮಾತನಾಡಿರುವ ಅವರು ಈ ಹೇಳಿಕೆ ನೀಡಿದ್ದಾರೆ. 'ಪ್ರಾಮಾಣಿಕವಾಗಿ ಹೇಳುತ್ತೇನೆ, ತಾನು ಭಾರತೀಯ ಎಂದು ಹೇಳಿಕೊಳ್ಳುವ ಒಬ್ಬ ವ್ಯಕ್ತಿಯನ್ನು ಕಾಶ್ಮೀರದಲ್ಲಿ ಕಂಡುಹಿಡಿಯಲು ಸರ್ಕಾರಕ್ಕೆ ಸಾಧ್ಯವೇ ಎಂದು ಎನಿಸುತ್ತದೆ' ಎಂದಿದ್ದಾರೆ.
'ನೀವು ಅಲ್ಲಿ ಹೋಗಿ ಯಾರ ಬಳಿಯಾದರೂ ಮಾತನಾಡಿ. ಒಬ್ಬರೂ ತಾನು ಭಾರತೀಯ ಎಂದು ಹೇಳಿಕೊಳ್ಳಲು ಇಷ್ಟಪಡುವುದಿಲ್ಲ. ಹಾಗೆಯೇ ಪಾಕಿಸ್ತಾನಿ ಎಂದೂ ಹೇಳಿಕೊಳ್ಳುವುದಿಲ್ಲ ಎಂಬುದನ್ನು ಸಹ ಸ್ಪಷ್ಟಪಡಿಸಲು ಬಯಸುತ್ತೇನೆ. ಆದರೆ ಅವರಿಗೆ ಭಾರತೀಯರು ಎಂಬ ಭಾವನೆ ಮೂಡುತ್ತಿಲ್ಲ. ಯಾರೊಂದಿಗೆ ನಾವು ಮಾತನಾಡಬೇಕು ಎಂದು ತಿಳಿಯುತ್ತಿಲ್ಲ. ನಾವು ಇಲ್ಲಿ ಉಳಿಯುತ್ತೇವೆಯೇ ಎಂಬ ಪ್ರಶ್ನೆ ಮೂಡುತ್ತಿದೆ' ಎಂದು ಅವರು ತಿಳಿಸಿದ್ದಾರೆ. ಮುಂದೆ ಓದಿ...

ಮೋದಿ ಭಾರತವಲ್ಲ, ಗಾಂಧಿ ಭಾರತ
ಕಾಶ್ಮೀರ ಕಣಿವೆಯಲ್ಲಿನ ಜನರ ಮನಸ್ಥಿತಿ ಹೇಗಾಗಿದೆಯೆಂದರೆ ಈ ಸರ್ಕಾರದ ಮೇಲೆ ಕೊಂಚವೂ ನಂಬಿಕೆ ಉಳಿದಿಲ್ಲ. ಕಣಿವೆ ರಾಜ್ಯದ ಜನರು ದೇಶ ವಿಭಜನೆ ವೇಳೆ ಪಾಕಿಸ್ತಾನಕ್ಕೆ ಸುಲಭವಾಗಿ ಹೋಗಬಹುದಾಗಿತ್ತು. ಆದರೆ ಅವರು 'ಗಾಂಧಿ ಭಾರತ'ವನ್ನು ಸೇರಿಕೊಂಡಿದ್ದರೇ ವಿನಾ 'ಮೋದಿ ಭಾರತ'ವನ್ನು ಅಲ್ಲ ಎಂದು ಫಾರೂಖ್ ಹೇಳಿದ್ದಾರೆ.

ಚೀನಾದತ್ತ ಒಲವು ಹೆಚ್ಚುತ್ತಿದೆ
'ಇನ್ನೊಂದು ಭಾಗದಲ್ಲಿ ಇಂದು ಚೀನಾ ಹೆಚ್ಚು ಪ್ರಬಲವಾಗುತ್ತಿದೆ. ಕಾಶ್ಮೀರದ ಜನತೆಯೊಂದಿಗೆ ನೀವು ಮಾತನಾಡಿದರೆ ಹೆಚ್ಚಿನವರು ಮುಂದಿನ ದಿನಗಳಲ್ಲಿ ಚೀನೀಯರಾಗಲು ಬಯಸುತ್ತಿದ್ದಾರೆ. ಯಾರಾದರೂ ಏನಾದರೂ ಹೇಳಬಹುದು, ತಮ್ಮ ಪ್ರದೇಶದಲ್ಲಿ ಮುಸ್ಲಿಮರಿಗೆ ಚೀನೀಯರು ಏನು ಮಾಡಿದ್ದಾರೆ ಎನ್ನುವುದು ಅವರಿಗೆ ತಿಳಿದಿದೆ' ಎಂದು ಹೇಳಿದ್ದಾರೆ.

ಪಾಕಿಸ್ತಾನವನ್ನೂ ಇಷ್ಟಪಡುವುದಿಲ್ಲ
ಈ ವಿಚಾರವನ್ನು ನಾನು ಗಂಭೀರವಾಗಿ ಹೇಳುತ್ತಿಲ್ಲ, ಆದರೆ ಈ ಬಗ್ಗೆ ಪ್ರಾಮಾಣಿಕವಾಗಿ ಮಾತನಾಡುತ್ತಿದ್ದೇನೆ. ಜನರು ಯಾವುದನ್ನೂ ಕೇಳಿಸಿಕೊಳ್ಳಲು ಇಷ್ಟಪಡುತ್ತಿಲ್ಲ ಎಂದು ನಾನು ನಿಮಗೆ ಪ್ರಮಾಣಿಕವಾಗಿ ಹೇಳುತ್ತೇನೆ, ಎಲ್ಲರಿಗೂ ಸಾಕಾಗಿದೆ. ಹೀಗಾಗಿ ಅವರು ಪಾಕಿಸ್ತಾನಕ್ಕೆ ಹೋಗಲು ಸಹ ಬಯಸುವುದಿಲ್ಲ' ಎಂದಿದ್ದಾರೆ.

ಕಣಿವೆಯಲ್ಲಿ ಸ್ವಾತಂತ್ರ್ಯ ಎಲ್ಲಿದೆ?
ಕಣಿವೆಯಲ್ಲಿ ಎಲ್ಲಿಯಾದರೂ ಭಾರತದ ಬಗ್ಗೆ ಮಾತನಾಡಿದರೆ, ಒಬ್ಬರೂ ಕೇಳಿಸಿಕೊಳ್ಳಲು ಇಲ್ಲ. ಪ್ರತಿ ಬೀದಿ ಬೀದಿಯಲ್ಲಿಯೂ ಎಕೆ 47 ಹಿಡಿದ ಭದ್ರತಾ ಸಿಬ್ಬಂದಿ ಇದ್ದಾರೆ. ನಮಗೆ ಸ್ವಾತಂತ್ರ್ಯ ಎಲ್ಲಿದೆ? ಎಂದು ಅವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.












Click it and Unblock the Notifications