ಗುಪ್ತಚರ ಇಲಾಖೆ ದಾರಿ ತಪ್ಪಿಸಲು ಉಗ್ರ ಸಂಘಟನೆಯ ಹೊಸ ತಂತ್ರ
ಶ್ರೀನಗರ, ಫೆಬ್ರವರಿ 15 : ಪುಲ್ವಾಮದ ಅವಂತಿಪುರ್ನಲ್ಲಿ ಉಗ್ರರು ಸೇನಾ ವಾಹನದ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯ ರೂವಾರಿ ಆದಿಲ್ ಅಹ್ಮದ್ ದಾರ್ ಜೈಷ್-ಎ-ಮೊಹಮ್ಮದ್ ಸಂಘಟನೆಯ ಗ್ರೇಡ್ ಸಿ ಉಗ್ರನಾಗಿದ್ದ.
ಹೌದು, ಗುಪ್ತಚರ ಇಲಾಖೆಯ ಕಣ್ಣು ತಪ್ಪಿಸಲು ಜೈಷ್-ಎ-ಮೊಹಮ್ಮದ್ ಸಂಘಟನೆ ಹೊಸ ತಂತ್ರದ ಮೊರೆ ಹೋಗಿದೆ. ತುಂಬಾ ಪರಿಚಿತರಲ್ಲದ ಯುವಕರನ್ನು ಸಂಘಟನೆಗಳಿಗೆ ಸೇರಿಸಿಕೊಂಡು ಅವರಿಗೆ ಸ್ಫೋಟದ ಟಾಸ್ಕ್ ನೀಡುತ್ತದೆ.
ಪರಿಚಿತರಾಗಿರುವ ಯುವಕರು ಕಣ್ಮರೆ ಆದ ತಕ್ಷಣ ಅವರು ಉಗ್ರ ಸಂಘಟನೆ ಸೇರಿರಬಹುದು ಎಂದು ಗುಪ್ತಚರ ಇಲಾಖೆ ಅವರ ಮೇಲೆ ಕಣ್ಣಿಡುತ್ತದೆ. ಆದ್ದರಿಂದ, ಹೊಸ ಯುವಕರನ್ನು ಸೇರಿಸಿಕೊಂಡು ಅವರಿಗೆ ತರಬೇತಿಯನ್ನು ನೀಡಲಾಗುತ್ತದೆ.

ಪುಲ್ವಾಮದಲ್ಲಿ ದಾಳಿ ನಡೆದ ಕೆಲವೇ ಕ್ಷಣಗಳಲ್ಲಿ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆ ದಾಳಿಯ ಹೊಣೆಯನ್ನು ಹೊತ್ತುಕೊಂಡಿತು. ಆದಿಲ್ ಅಹ್ಮದ್ ದಾರ್ ಈ ದಾಳಿಯ ರೂವಾರಿ ಎಂದು ವಿಡಿಯೋವನ್ನು ಬಿಡುಗಡೆ ಮಾಡಿತು.
ಆದಿಲ್ ಅಹ್ಮದ್ ದಾರ್ 2018ರಲ್ಲಿ ಸಂಘಟನೆಗೆ ಸೇರಿದ್ದ ಎಂದು ಉಗ್ರ ಸಂಘಟನೆ ಹೇಳಿತು. ಸ್ಫೋಟಕಗಳನ್ನು ತುಂಬಿದ್ದ ವಾಹನವನ್ನು ಸಿಆರ್ಪಿಎಫ್ ಜವಾನರು ಪ್ರಯಾಣಿಸುತ್ತಿದ್ದ ಬಸ್ಗೆ ಡಿಕ್ಕಿ ಹೊಡೆಸಿ ಸ್ಫೋಟಿಸುವ ಟಾಸ್ಕ್ ಅನ್ನು ಆದಿಲ್ಗೆ ನೀಡಲಾಗಿತ್ತು.
ಎನ್ಐಎ ಪುಲ್ವಾಮದ ಅವಂತಿಪುರ್ನಲ್ಲಿ ನಡೆದ ದಾಳಿಯ ತನಿಖೆಯನ್ನು ನಡೆಸುತ್ತಿದೆ. ಸ್ಥಳೀಯರು ಸಹ ಈ ದಾಳಿಗೆ ಸಹಕಾರ ನೀಡಿರಬಹುದು ಎಂಬ ಶಂಕೆ ಇದೆ. ದಾಳಿಯಲ್ಲಿ 40 ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದು, ದೆಹಲಿಗೆ ಪಾರ್ಥಿವ ಶರೀರವನ್ನು ತರಲಾಗಿದೆ.












Click it and Unblock the Notifications