ಪ್ರವಾಹದಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ವಾಯುಪಡೆ: ರೋಮಾಂಚನಕಾರಿ ವಿಡಿಯೋ
Recommended Video
ಶ್ರೀನಗರ, ಆಗಸ್ಟ್ 19: ಜಮ್ಮು ಮತ್ತು ಕಾಶ್ಮೀರದಲ್ಲಿ ಉಕ್ಕಿ ಹರಿಯುತ್ತಿದ್ದ ನದಿ ಬಳಿ ಸಿಲುಕಿದ್ದ ನಾಲ್ವರನ್ನು ವಾಯುಪಡೆ ಯೋಧರು ಹೆಲಿಕಾಪ್ಟರ್ ಮೂಲಕ ಬಂದು ರಕ್ಷಿಸಿದ್ದಾರೆ. ಈ ಸಾಹಸದ ರೋಮಾಂಚನಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜಮ್ಮುವಿನ ಮೂಲಕ ಹರಿಯುವ ತಾವಿ ನದಿಗೆ ನಿರ್ಮಾಣ ಹಂತದಲ್ಲಿದ್ದ ಸೇತುವೆ ಸಮೀಪ ಪ್ರವಾಹದಲ್ಲಿ ಸಿಲುಕಿದ್ದವರನ್ನು ಸೋಮವಾರ ರಕ್ಷಿಸಲಾಗಿದೆ.
ನಿರ್ಮಾಣ ಹಂತದಲ್ಲಿದ್ದ ಸೇತುವೆ ಸಮೀಪದ ಕಟ್ಟೆಯ ಮೇಲೆ ಕುಳಿತು ಆಶ್ರಯ ಪಡೆದಿದ್ದ ಇಬ್ಬನ್ನು ಹೆಲಿಕಾಪ್ಟರ್ನಲ್ಲಿ ಬಂದ ಯೋಧ ಹಗ್ಗದ ಸಹಾಯದಿಂದ ಮೇಲೆಕ್ಕೆ ಕರೆದುಕೊಂಡು ಹೋಗಿದ್ದಾರೆ. ರಭಸದಿಂದ ಹರಿಯುತ್ತಿದ್ದ ನೀರಿನಲ್ಲಿ ಇಬ್ಬರ ವ್ಯಕ್ತಿಗಳು ಈಜಿಕೊಂಡು ಬಂದು ಕಟ್ಟೆ ಮೇಲೆ ಹತ್ತಿ ಕುಳಿತು ಜೀವ ಉಳಿಸಿಕೊಳ್ಳುವ ಮತ್ತು ಅವರನ್ನು ಹೆಲಿಕಾಪ್ಟರ್ ಮೂಲಕ ಕರೆದೊಯ್ಯುವ ಸಿನಿಮೀಯ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.

ಈ ವ್ಯಕ್ತಿಗಳು ಮೀನುಗಾರಿಕೆಗೆಂದು ನದಿಗೆ ತೆರಳಿದ್ದರು. ಆದರೆ, ಭಾರಿ ಮಳೆಯ ಕಾರಣ ಇದ್ದಕ್ಕಿದ್ದಂತೆ ನದಿಯಲ್ಲಿ ನೀರಿನ ಪ್ರಮಾಣ ಏರತೊಡಗಿತು. ಇದರಿಂದ ನದಿ ಮಧ್ಯೆ ಅವರು ಸಿಲುಕಿಕೊಂಡರು.
ಈ ವಿಚಾರ ತಿಳಿದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಕೂಡಲೇ ಅವರ ರಕ್ಷಣೆಗೆ ಧಾವಿಸಿತು. ಅವರ ರಕ್ಷಣೆಯ ಪ್ರಯತ್ನ ಆರಂಭದಲ್ಲಿ ವಿಫಲವಾಯಿತು. ನೀರು ಒಂದೇ ಸಮನೆ ಏರತೊಡಗಿದ್ದರಿಂದ ನಾಲ್ವರೂ ಈಜತೊಡಗಿದರು. ಇಬ್ಬರು ಯಶಸ್ವಿಯಾಗಿ ದಡ ಸೇರಿದರು. ಇನ್ನಿಬ್ಬರು ಕಷ್ಟಪಟ್ಟು ಸೇತುವೆಯ ಕಂಬಕ್ಕೆ ಕಟ್ಟಲಾಗಿದ್ದ ಕಟ್ಟೆಯನ್ನು ಏರಿ ಬಚಾವಾದರು.

ಅವರ ಸುತ್ತಲೂ ನೀರು ಹರಿಯತೊಡಗಿತ್ತು. ಹೆಲಿಕಾಪ್ಟರ್ನಿಂದ ಹಗ್ಗದ ಸಹಾಯದಿಂದ ಕಟ್ಟೆಯ ಮೇಲೆ ಇಳಿದ ವಾಯುಪಡೆ ಸಿಬ್ಬಂದಿ, ಇಬ್ಬರೂ ವ್ಯಕ್ತಿಗಳು ಬೀಳದಂತೆ ಅವರ ಬೆನ್ನಿಗೆ ಆಧಾರವಾಗಿ ಹಗ್ಗವನ್ನು ಕಟ್ಟಿ ಹೆಲಿಕಾಪ್ಟರ್ ಮೂಲಕ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವಲ್ಲಿ ಸಫಲರಾದರು.












Click it and Unblock the Notifications