ಕಾಶ್ಮೀರದಲ್ಲಿ ಬುಲೆಟ್ ಪ್ರೂಫ್ ಗ್ಲಾಸ್ ಶೀಲ್ಡ್ ತೆಗೆದ ಅಮಿತ್ ಶಾ ಹೇಳಿದ ಮಾತು?

ಶ್ರೀನಗರ್, ಅಕ್ಟೋಬರ್ 26: ಜಮ್ಮು ಕಾಶ್ಮೀರ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಶ್ರೀನಗರದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಭದ್ರತೆಗಾಗಿ ಇರುವ ಬುಲೆಟ್ ಪ್ರೂಫ್ ಗ್ಲಾಸ್ ಶೀಲ್ಡ್(ಗುಂಡು ತಡೆಗೆ ಗಾಜಿನ ಹೊದಿಕೆ) ತೆಗೆದ ಅವರು, "ನಾನು ಜನರೊಂದಿಗೆ ನೇರವಾಗಿ ಮಾತನಾಡುವುದಕ್ಕೆ ಇಚ್ಛಿಸುತ್ತೇನೆ" ಎಂದು ಹೇಳುವ ಮೂಲಕ ಗಮನ ಸೆಳೆದರು.

ಅಮಿತ್ ಶಾ ಅವರು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರೊಂದಿಗೆ ಶೇರ್-ಎ-ಕಾಶ್ಮೀರ್ ಕನ್ವೆನ್ಷನ್ ಸೆಂಟರ್‌ನಲ್ಲಿ ವೇದಿಕೆಯ ಮೇಲೆ ನಡೆದುಕೊಂಡು ಹೋಗುವುದು ಮತ್ತು ಬುಲೆಟ್ ಪ್ರೂಫ್ ಶೀಲ್ಡ್ ಅನ್ನು ತೆಗೆದುಹಾಕಲು ಆದೇಶಿಸುವುದು ವಿಡಿಯೋಗಳಲ್ಲಿ ಕಂಡುಬಂದಿದೆ. ಲೆಫ್ಟಿನೆಂಟ್ ಗವರ್ನರ್ ಮೇಲ್ವಿಚಾರಣೆಯಲ್ಲಿ ಭದ್ರತಾ ಸಿಬ್ಬಂದಿ ಗಾಜಿನ ಹೊದಿಕೆಯನ್ನು ಕಿತ್ತುಹಾಕಿದರು.

ಬುಲೆಟ್ ಪ್ರೂಫ್ ಗ್ಲಾಸ್ ಶೀಲ್ಡ್ ತೆಗೆದು ಹಾಕಿದ ನಂತರದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಮಾತು ಆರಂಭಿಸಿದರು. "ನನ್ನನ್ನು ನಿಂದಿಸಲಾಯಿತು, ಖಂಡಿಸಲಾಯಿತು. ಇಂದು ನಾನು ನಿಮ್ಮೊಂದಿಗೆ ಸ್ಪಷ್ಟವಾಗಿ ಮಾತನಾಡಲು ಬಯಸುತ್ತೇನೆ, ಅದಕ್ಕಾಗಿಯೇ ಇಲ್ಲಿ ಬುಲೆಟ್ ಪ್ರೂಫ್ ಶೀಲ್ಡ್ ಅಥವಾ ಭದ್ರತೆ ಇಲ್ಲದೇ ನಾನು ನಿಮ್ಮ ಮುಂದೆ ಈ ರೀತಿ ನಿಂತಿದ್ದೇನೆ," ಎಂದು ಅಮಿತ್ ಶಾ ಹೇಳಿದರು. ಈ ವೇಳೆ ಕಾಶ್ಮೀರಿ ಜನರು ಧರಿಸುವ ಸಾಂಪ್ರದಾಯಿಕವಾಗಿ ಫೆರಾನ್ ಧರಿಸಿಕೊಂಡು ಶಾ ವೇದಿಕೆ ಮೇಲೆ ಕಾಣಿಸಿಕೊಂಡಿದ್ದರು.

Home Minister Amit Shah Removes Bulletproof Shield In Srinagar

ಕಣಿವೆ ಯುವಕರೊಂದಿಗೆ ಮಾತನಾಡಲು ಬಯಸುತ್ತೇನೆ:

"ಫಾರೂಕ್ ಅಬ್ದುಲ್ಲಾ ಸಾಹಬ್ ಅವರು ನಾವು ಪಾಕಿಸ್ತಾನದೊಂದಿಗೆ ಮಾತನಾಡಬೇಕೆಂದು ಸೂಚಿಸಿದ್ದರು. ಆದರೆ ನಾನು ಫಾರೂಕ್ ಸಾಹಬ್ ಮತ್ತು ನಿಮಗೆ ಇಲ್ಲಿ ಒಂದು ವಿಷಯ ಸ್ಪಷ್ಟಪಡಿಸುವುದಕ್ಕೆ ಬಯಸುತ್ತೇನೆ. ನಾನು ಕಣಿವೆ ರಾಜ್ಯದ ಯುವಕರು ಮತ್ತು ಜನರೊಂದಿಗೆ ಮಾತನಾಡುತ್ತೇನೆ," ಎಂದು ಅಮಿತ್ ಶಾ ಹೇಳಿದರು.

2024ರ ಹೊತ್ತಿಗೆ 370ನೇ ವಿಧಿ ರದ್ಧತಿ ಫಲ:

"370ನೇ ವಿಧಿಯ ರದ್ದತಿಯ ಹಿಂದೆ ಒಂದೇ ಒಂದು ಉದ್ದೇಶವಿತ್ತು. ಕಾಶ್ಮೀರ, ಜಮ್ಮು ಮತ್ತು ಹೊಸದಾಗಿ ಸೃಷ್ಟಿಯಾದ ಲಡಾಖ್ ಅನ್ನು ಅಭಿವೃದ್ಧಿಯ ಹಾದಿಯಲ್ಲಿ ಇರಿಸುವುದೇ ಆ ಉದ್ದೇಶವಾಗಿದೆ. 2024ರ ವೇಳೆಗೆ ನಮ್ಮ ಪ್ರಯತ್ನದ ಫಲವನ್ನು ನೀವು ನೋಡುತ್ತೀರಿ," ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದರು. ಈ ಮಾತಿನ ನಂತರದಲ್ಲಿ ಸಮೂಹದ ಜನರನ್ನು ತಮ್ಮ ಬಳಿಗೆ ಸ್ವಾಗತಿಸಿದರು.

ಕಣಿವೆ ರಾಜ್ಯದಲ್ಲಿ ಹೆಚ್ಚಿನ ಕಣ್ಗಾವಲು:

ಜಮ್ಮು ಮತ್ತು ಕಾಶ್ಮೀರದಲ್ಲಿ ಅಕ್ಟೋಬರ್ ಆರಂಭದ ದಿನಗಳಿಂದ ನಾಗರಿಕರನ್ನು ಗುರಿಯಾಗಿಸಿಕೊಂಡು ಸರಣಿ ದಾಳಿಗಳನ್ನು ನಡೆಸಲಾಗಿದ್ದು, ಈವರೆಗೂ 9 ನಾಗರಿಕರನ್ನು ಹತ್ಯೆ ಮಾಡಲಾಗಿದೆ. ಈ ಮಧ್ಯೆ ಪೂಂಚ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಈವರೆಗೂ 11 ಯೋಧರು ಹುತಾತ್ಮರಾಗಿದ್ದು, 15ಕ್ಕೂ ಹೆಚ್ಚು ಉಗ್ರರನ್ನು ಹೊಡೆದುರುಳಿಸಲಾಗಿತ್ತು. ಒಂದು ಕಡೆಯಲ್ಲಿ ಗಡಿಯಲ್ಲಿ ಉಗ್ರರು ಮತ್ತು ಕಣಿವೆಯಲ್ಲಿ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ಮುಂದುವರಿಸಲಾಗಿದೆ. ಈ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಹಿನ್ನೆಲೆ ಭದ್ರತೆಯ ಕಣ್ಗಾವಲು ಹೆಚ್ಚಿಸಲಾಗಿದೆ. ಶ್ರೀನಗರ್ ಸೇರಿದಂತೆ ರಾಜ್ಯಾದ್ಯಂತ 5,000ಕ್ಕೂ ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ಅಮಿತ್ ಶಾ ಹಾಗೂ ಕಾಶ್ಮೀರ ಭೇಟಿ:

ಜಮ್ಮು ಮತ್ತು ಕಾಶ್ಮೀರಕ್ಕೆ ಮೂರು ದಿನಗಳ ಭೇಟಿ ನೀಡಿದ ಕೇಂದ್ರ ಸಚಿವ ಅಮಿತ್ ಶಾ, ಕಳೆದ 2019 ಆಗಸ್ಟ್ 5ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸುವ 370ನೇ ವಿಧಿಯನ್ನು ರದ್ದುಗೊಳಿಸುವುದಾಗಿ ಘೋಷಿಸಿದರು. ಅಲ್ಲದೇ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಘೋಷಿಸಲಾಯಿತು. ಅದಕ್ಕೂ ಮೊದಲು, 2019ರಲ್ಲಿ ಬಿಜೆಪಿ ಅಧಿಕಾರವನ್ನು ಉಳಿಸಿಕೊಂಡ ನಂತರ ಕೇಂದ್ರ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಅಮಿತ್ ಶಾ ಕಾಶ್ಮೀರಕ್ಕೆ ಭೇಟಿ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+