ಸುರಕ್ಷಿತ ಸ್ಥಳಗಳಿಗೆ ಕಾಶ್ಮೀರಿ ಪಂಡಿತ್ ಉದ್ಯೋಗಿಗಳ ವರ್ಗಾವಣೆ
ಶ್ರೀನಗರ ಜೂನ್ 5: ಜಮ್ಮು ಮತ್ತು ಕಾಶ್ಮೀರದ ಸ್ಥಳೀಯ ಆಡಳಿತವು ಸರಕಾರಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾಶ್ಮೀರಿ ಪಂಡಿತ್ ಶಿಕ್ಷಕರನ್ನು ಕಣಿವೆ ರಾಜ್ಯದ ಸುರಕ್ಷಿತ ಸ್ಥಳಗಳಿಗೆ ವರ್ಗಾವಣೆ ಮಾಡಿದೆ.
ಕಳೆದ ಒಂದು ತಿಂಗಳಲ್ಲಿ ಉಗ್ರರು 9 ಮಂದಿ ಕಾಶ್ಮೀರಿ ಪಂಡಿತರನ್ನು ಹತ್ಯೆ ಮಾಡಿದ್ದಾರೆ. ಈ ಸರಣಿ ಹತ್ಯೆಗಳ ನಂತರ ಕಾಶ್ಮೀರಿ ಪಂಡಿತರು ಜಮ್ಮು ಮತ್ತು ಕಾಶ್ಮೀರ ತೊರೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಣಿವೆ ರಾಜ್ಯದ ಸ್ಥಳೀಯ ಆಡಳಿತವು ಈ ಕ್ರಮ ಕೈಗೊಂಡಿದೆ.
ಉಗ್ರರ ಗುಂಡೇಟಿಗೆ ಬೆದರಿದ ಕಾಶ್ಮೀರಿ ಪಂಡಿತರು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ
ಶ್ರೀನಗರದ ಮುಖ್ಯ ಶಿಕ್ಷಣ ಅಧಿಕಾರಿಯು, ಪ್ರಧಾನಿಗಳ ವಿಶೇಷ ಪರಿಹಾರ ಪ್ಯಾಕೇಜ್ ಅಡಿಯಲ್ಲಿ ನೇಮಕಗೊಂಡಿರುವ 177 ಕಾಶ್ಮೀರಿ ಪಂಡಿತ್ ಶಿಕ್ಷಕರನ್ನು ನಗರಗಳ ಹೆಚ್ಚು ಸುರಕ್ಷಿತ ಪ್ರದೇಶಗಳಿಗೆ ನಿಯೋಜಿಸಿದ್ದಾರೆ.
ಜಮ್ಮು ಕಾಶ್ಮೀರ: ಅನಂತ್ನಾಗ್ನಲ್ಲಿ ಭಯೋತ್ಪಾದಕನ ಹತ್ಯೆ
ಈ ಪೈಕಿ ಹೆಚ್ಚಿನವರನ್ನು ಸೇನಾ ಕಂಟೋನ್ಮೆಂಟ್ನ ಸುತ್ತಮುತ್ತಲಿನ ಬಾದಾಮಿಬಾಗ್, ಬಟ್ವಾರಾ ಮತ್ತು ಅಥ್ವಾಜನ್ ಹಾಗೂ ಹೆಚ್ಚಿನ ಭದ್ರತೆ ಇರುವ ಜವಾಹರ್ ನಗರ, ರಾಜ್ ಬಾಗ್ ಮತ್ತು ಬರ್ಜುಲ್ಲಾದಂತಕ ಪ್ರದೇಶಗಳಿಗೆ ವರ್ಗಾಯಿಸಲಾಗಿದೆ. ಇದೇ ವೇಳೆ ಬೋಧಕೇತರ ಕಾಶ್ಮೀರಿ ಪಂಡಿತ್ ಸಿಬ್ಬಂದಿಯನ್ನು ಸಹ ಸುರಕ್ಷಿತ ಸ್ಥಳಗಳಿಗೆ ನಿಯೋಜಿಸಲಾಗಿದೆ.
ಶಿಕ್ಷಕರ ವರ್ಗಾವಣೆ ಪಟ್ಟಿ ವೈರಲ್
177 ಕಾಶ್ಮೀರಿ ಪಂಡಿತ್ ಶಿಕ್ಷಕರ ವರ್ಗಾವಣೆ ಪಟ್ಟಿಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಕುರಿತು ಸ್ಥಳೀಯ ಸರಕಾರದ ವಿರುದ್ಧ ಟೀಕೆಗಳು ವ್ಯಕ್ತವಾಗಿದೆ. ಕಾಶ್ಮೀರಿ ಪಂಡಿತ್ ಉದ್ಯೋಗಿಗಳ ವರ್ಗಾವಣೆ ಪಟ್ಟಿಯು ಸಾರ್ವಜನಿಕ ವಲಯದಲ್ಲಿ ಪ್ರಕಟವಾಗಿರುವುದಕ್ಕೆ ಭಾರತೀಯ ಜನತಾ ಪಕ್ಷ(ಬಿಜೆಪಿ)ದಿಂದ ಆಕ್ಷೇಪ ವ್ಯಕ್ತವಾಗಿದೆ. ಇದಕ್ಕೆ ಕಾರಣವಾದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.
ಕಠಿಣ ಕ್ರಮಕ್ಕೆ ಬಿಜೆಪಿ ಆಗ್ರಹ
"ಸಾಮಾಜಿಕ ಮಾಧ್ಯಮಗಳಲ್ಲಿ ವರ್ಗಾವಣೆ ಪಟ್ಟಿ ವೈರಲ್ ಆಗಿರುವುದು ದೊಡ್ಡ ಭದ್ರತಾ ಉಲ್ಲಂಘನೆಯಾಗಿದೆ. ಇದರಿಂದ ಭಯೋತ್ಪಾದಕರಿಗೆ ಯಾರನ್ನು ಎಲ್ಲಿ ವರ್ಗಾವಣೆ ಮಾಡಲಾಗಿದೆ ಎಂಬ ಸ್ಪಷ್ಟ ಕಲ್ಪನೆ ಸಿಗಲಿದೆ," ಎಂದು ಬಿಜೆಪಿ ವಕ್ತಾರ ಅಲ್ತಾಫ್ ಠಾಕೂರ್ ದೂರಿದ್ದಾರೆ.
ಕಣಿವೆ ರಾಜ್ಯದ 10 ಜಿಲ್ಲೆಗಳ ಒಳಭಾಗದಲ್ಲಿ ಕೆಲಸ ಮಾಡುವ ತಮ್ಮ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಕಾಶ್ಮೀರಿ ಪಂಡಿತ್ ಉದ್ಯೋಗಿಗಳನ್ನು ಹೆಚ್ಚು ಸುರಕ್ಷಿತವಾದ ಜಿಲ್ಲಾ ಕೇಂದ್ರಗಳಿಗೆ ಸ್ಥಳಾಂತರಿಸುವಂತೆ ಜಮ್ಮು ಮತ್ತು ಕಾಶ್ಮೀರ ಸರಕಾರವು ಎಲ್ಲಾ ಇಲಾಖೆಗಳಿಗೆ ನಿರ್ದೇಶನ ನೀಡಿದೆ.
ವರ್ಗಾವಣೆ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಭೆ
ಈ ಮೂಲಕ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಹೊರಗೆ ನೌಕರರನ್ನು ಸ್ಥಳಾಂತರಿಸುವ ಕಾಶ್ಮೀರಿ ಪಂಡಿತ್ ಉದ್ಯೋಗಿಗಳ ಬೇಡಿಕೆಯನ್ನು ಸರಕಾರ ಈಡೇರಿಸಿಲ್ಲ ಎಂಬುದು ಸ್ಪಷ್ಟಪಡಿಸಿದೆ. ನೌಕರರ ವರ್ಗಾವಣೆಯ ಸ್ಥಿತಿ-ಗತಿಯನ್ನು ಪರಿಶೀಲಿಸಲು ಕಾಶ್ಮೀರದ ವಿಭಾಗೀಯ ಆಯುಕ್ತ ಪಾಂಡುರಂಗ್ ಕೆ. ಪೊಲೆ ಅವರು ಶನಿವಾರ ಎಲ್ಲಾ ಇಲಾಖೆಗಳ ಉಪ ಆಯುಕ್ತರು ಮತ್ತು ವಿಭಾಗೀಯ ಮುಖ್ಯಸ್ಥರ ಸಭೆಯನ್ನು ನಡೆಸಿದರು.
ಜಿಲ್ಲಾ ಕೇಂದ್ರಗಳಿಗೆ ವರ್ಗಾವಣೆ
"ವರ್ಗಾವಣೆಗಾಗಿ ಜಮ್ಮು ಮತ್ತು ಕಾಶ್ಮೀರ ಒಳಗೆ ತಮ್ಮ ಆದ್ಯತೆಯ ಸ್ಥಳಗಳನ್ನು ಗುರುತಿಸುವಂತೆ ಸರಕಾರವು ಹಿಂದೂ ನೌಕರರನ್ನು ಕೇಳಿತ್ತು. ಅಂತಹ ಅರ್ಜಿಗಳ ಸ್ಥಿತಿ-ಗತಿ ಕುರಿತು ಪರಿಶೀಲನೆ ನಡೆಸಲಾಗಿದೆ,'' ಎಂದು ಪಾಂಡುರಂಗ್ ಕೆ. ಪೊಲೆ ತಿಳಿಸಿದರು. "ಕಾಶ್ಮೀರಿ ಪಂಡಿತ್ ಉದ್ಯೋಗಿಗಳನ್ನು ಜಿಲ್ಲಾ ಕೇಂದ್ರಗಳು ಮತ್ತು ತಾಲೂಕು ಕೇಂದ್ರಗಳಿಗೆ ವರ್ಗಾಯಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಉದ್ಯೋಗಿಗಳಾದ ಕಾಶ್ಮೀರಿ ಪಂಡಿತ್ ದಂಪತಿಯನ್ನು ಒಂದೇ ಕಡೆಗೆ ವರ್ಗಾಯಿಸಲಾಗುವುದು,'' ಎಂದು ಪಾಂಡುರಂಗ್ ಕೆ. ಪೊಲೆ ಮಾಹಿತಿ ನೀಡಿದ್ದಾರೆ.
ಬ್ಯಾಂಕ್ ಮ್ಯಾನೇಜರ್ ಹತ್ಯೆ
ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಗೋಪಾಲ್ಪೋರಾ ಪ್ರದೇಶದಲ್ಲಿ ಹಿಂದೂ ಮಹಿಳೆಯೊಬ್ಬರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದರು. ಇದಾದ ಎರಡು ದಿನಗಳ ನಂತರ ಕುಲ್ಗಾಮ್ ಜಿಲ್ಲೆಯಲ್ಲಿ ಜೂನ್ 2 ರಂದು ರಾಜಸ್ಥಾನ ಮೂಲದ ಬ್ಯಾಂಕ್ ಮ್ಯಾನೇಜರ್ ವಿಜಯ್ ಕುಮಾರ್ ಅವರನ್ನು ಉಗ್ರರು ಹತ್ಯೆ ಮಾಡಿದ್ದರು.
ಭಯೋತ್ಪಾದಕರಿಂದ ಶಾಲಾ ಶಿಕ್ಷಕಿ ಹತ್ಯೆ
ಕಳೆದ ತಿಂಗಳು ರಜನಿ ಬಾಲಾ ಎಂಬ ಶಾಲಾ ಶಿಕ್ಷಕಿಯನ್ನು ಉಗ್ರರು ಹತ್ಯೆ ಮಾಡಿದ್ದರು.ಅವರು ತಮ್ಮ ಪತಿ ಮತ್ತು ಮಗಳೊಂದಿಗೆ ಜಮ್ಮು ವಿಭಾಗದ ಸಾಂಬಾದಲ್ಲಿ ವಾಸಿಸುತ್ತಿದ್ದರು. ಕಾಶ್ಮೀರದಲ್ಲಿ ಇತ್ತೀಚಿಗೆ ಉದ್ದೇಶಿತ ಹತ್ಯೆಗಳ ಸರಣಿ ಮುಂದುವರಿದಿದೆ. ಇತ್ತೀಚಿಗೆ ಬುದ್ಗಾಮ್ನ ಚದೂರ ಪ್ರದೇಶದಲ್ಲಿ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರ ಗುಂಡಿಗೆ ಟಿವಿ ನಿರೂಪಕಿ ಅಮ್ರೀನ್ ಭಟ್ ಸಾವನ್ನಪ್ಪಿದ್ದರು. ಮೇ 12 ರಂದು ಬುದ್ಗಾಮ್ ಜಿಲ್ಲೆಯಲ್ಲಿ ಕಂದಾಯ ಇಲಾಖೆ ನೌಕರ ರಾಹುಲ್ ಭಟ್ ಅವರನ್ನು ಉಗ್ರರು ಹತ್ಯೆ ಮಾಡಿದ್ದರು.