ಇನ್ಮುಂದೆ ಭಾರತದಲ್ಲಿ ಇಪ್ಪತ್ತೆಂಟೇ ರಾಜ್ಯ, 9 ಕೇಂದ್ರಾಡಳಿತ ಪ್ರದೇಶ
ಜಮ್ಮು ಮತ್ತು ಕಾಶ್ಮೀರ, ಲಡಾಖ್ ಪಾಲಿಗೆ ಇದು ಎಲ್ಲ ಬೆಳಗಿನಂತಲ್ಲ... 'ರಾಜ್ಯ' ಎಂಬ ಹಣೆಪಟ್ಟಿ ಕಳಚಿಕೊಂಡು ಕೇಂದ್ರಾಡಳಿತ ಪ್ರದೇಶವಾಗಿ ಅಕ್ಟೋಬರ್ 30 ರ ಮಧ್ಯರಾತ್ರಿ ಹೊರಹೊಮ್ಮಿದ ಜಮ್ಮು ಮತ್ತು ಕಾಶ್ಮೀರ, ಲಡಾಖ್ ಪ್ರದೇಶ ಹೊಸ ಭವಿಷ್ಯವೊಂದನ್ನು ಕಾಣುವ ತವಕದಲ್ಲಿದೆ.
ಈ ಮೂಲಕ ಭಾರತದ 29 ರಾಜ್ಯಗಳಲ್ಲಿ ಒಂದು ರಾಜ್ಯ ಕಳೆದು 28 ರಾಜ್ಯವಾಗಿದೆ. ಹಾಗೆಯೇ ಏಳಿದ್ದ ಕೇಂದ್ರಾಡಳಿತ ಪ್ರದೇಶ 9 ಆಗಿದೆ.
ಜಮ್ಮು ಮತ್ತು ಕಾಶ್ಮೀರದ ಮೊದಲು ಲೆಫ್ಟಿನೆಂಟ್ ಗವರ್ನರ್ ಆಗಿ ಗಿರಿಶ್ ಚಂದ್ರ ಮುರ್ಮು ಮತ್ತು ಲಡಾಖ್ ನ ಲೆಫ್ಟಿನೆಂಟ್ ಗವರ್ನರ್ ಆಗಿ ಮಾಜಿ ಐಎಎಸ್ ಅಧಿಕಾರಿ ಆರ್ ಕೆ ಮಥುರ್ ಅವರನ್ನು ನೇಮಿಸಲಾಗುತ್ತಿದೆ.

ಆಗಸ್ಟ್ 5 ರಂದು ಘೋಷಣೆ
ಆಸಗ್ಟ್ 5 ರಂದು ಕೇಂದ್ರ ಸರ್ಕಾರವು ಭಾರತದ ಸಂವಿಧಾನದ 370 ನೇ ವಿಧಿಯ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಮಾಡಿ, ಜಮ್ಮು-ಕಾಶ್ಮೀರ ಮತ್ತು ಲಡಾಖ್ ಅನ್ನು ಎರಡೂ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಿಸಿತ್ತು.

ಪ್ರಯೋಜನವೇನು?
ಇನ್ನು ಮುಂದೆ ಜಮ್ಮು ಮತ್ತು ಕಾಶ್ಮೀರ ಪ್ರತ್ಯೇಕ ಧ್ವಜವನ್ನು ಹೊಂದುವಂತಿಲ್ಲ. ಜೊತೆಗೆ ದೇಶದ ಯಾವುದೇ ಭಾಗದ ಜನರು ಜಮ್ಮು ಮತ್ತು ಕಾಶ್ಮೀರದಲ್ಲಿ ಆಸ್ತಿ ಖರೀದಿಸಲು ಯಾವುದೇ ಕಟ್ಟುಪಾಡುಗಳಿರುವುದಿಲ್ಲ. ಅಲ್ಲದೆ ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲಸ ಮಾಡುವುದಕ್ಕೂ ಅಡ್ಡಿಯಿರುವುದಿಲ್ಲ. ಜೊತೆಗೆ ಮಿಕ್ಕೆಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯವಾಗುತ್ತಿದ್ದ ಕೇಂದ್ರ ಸರ್ಕಾರದ ನಿರ್ಣಯಗಳು ಇನ್ನು ಮುಂದೆ ಜಮ್ಮು ಮತ್ತು ಕಾಶ್ಮೀರ, ಲಡಾಖ್ ಗಳಿಗೂ ಅನ್ವಯವಾಗಲಿದೆ.

ಪಟೇಲ್ ಜನ್ಮದಿನದಂದೇ ಜಾರಿ!
ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನವಾದ ಇಂದು ಏಕತಾ ದಿವಸವನ್ನು ಭಾರತದಾದ್ಯಂತ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇದೇ ದಿನವನ್ನು ಜಮ್ಮು ಮತ್ತಿ ಕಾಶ್ಮೀರ, ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ್ದ ಸರ್ಕಾರದ ಕ್ರಮವನ್ನು ಜಾರಿಗೆ ತರಲಾಗುತ್ತಿದೆ.

ಪಟೇಲ್ ಜನ್ಮದಿನದಂದೇ ಏಕೆ?
ಭಾರತದ ಮೊದಲ ಗೃಹಸಚಿವರಾಗಿದ್ದ ಸರ್ದಾರ್ ವಲ್ಲಭ ಬಾಯ್ ಪಟೇಲ್ ಅವರು ಪ್ರತ್ಯೇಕವಾಗಿ ಹಂಚಿಹೋಗಿದ್ದ 560 ಪ್ರಾಂತ್ಯಗಳನ್ನು ಒಂದುಗೂಡಿಸಿ 'ಏಕ ಭಾರತ'ದ ಪರಿಕಲ್ಪನೆಯನ್ನು ಪರಿಚಯಿಸಿದ್ದರು. ಆ ಕಾರಣದಿಂದಲೇ ಭಾರತದಲ್ಲೇ ಇದ್ದರೂ ಭಾರತದ ಭಾಗವಾಗಿರದಂತೆ ಇದ್ದ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಮಾಡಿ, ಅದನ್ನೂ ಮಿಕ್ಕೆಲ್ಲ ರಾಜ್ಯಗಳಂತೇ ನೋಡಲು ಸರ್ಕಾರ ಮುಂದಾಗಿದ್ದು, ಆ ದಿನಕ್ಕೆ ಅವರ ಜನ್ಮದಿನದಂದೇ ಮುಹೂರ್ತ ನಿಗದಿ ಮಾಡಲಾಗಿತ್ತು.












Click it and Unblock the Notifications