ಅಂದು ಮೋದಿ ವಿರುದ್ದ ಆರ್ಭಟಿಸಿದ್ದ ಫಾರೂಕ್, ಮುಫ್ತಿ, ಈಗೇನಂತಾರೆ?
ನವದೆಹಲಿ, ಆ 5: ಆರ್ಟಿಕಲ್ 370 ರದ್ದತಿ ಮತ್ತು ಜಮ್ಮು ಮತ್ತು ಕಾಶ್ಮೀರ ಪುನರ್ ರಚನೆ ವಿಧೇಯಕ ರಾಜ್ಯಸಭೆಯಲ್ಲಿ ಆಂಗೀಕಾರಗೊಂಡಿದೆ. ಮೋದಿ ಸರಕಾರ, ಪ್ರಣಾಳಿಕೆಯಲ್ಲಿ ಹೇಳಿದಂತೆ, ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ.
ತೀವ್ರ ವಿರೋಧ ವ್ಯಕ್ತವಾಗುತ್ತದೆ ಎನ್ನುವುದನ್ನು ಮೊದಲೇ ನಿರೀಕ್ಷಿಸಿದ್ದ ಕೇಂದ್ರ ಸರಕಾರ, ರಾಜ್ಯದಲ್ಲಿನ ಭದ್ರತೆಯನ್ನು ಗಣನೀಯವಾಗಿ ಹೆಚ್ಚಿಸಿತ್ತು. ವಿಧೇಯಕ ಪ್ರಸ್ತಾವನೆಯನ್ನು ಸೋಮವಾರ ಮಂಡನೆ ಮಾಡಲು ಮೊದಲೇ ನಿರ್ಧರಿಸಿದ್ದ ಅಮಿತ್ ಶಾ, ಅಕ್ಷರಸಃ ಶ್ರೀನಗರವನ್ನು ಭದ್ರತಾ ಪಡೆಗಳ ಸುಪರ್ದಿಯಲ್ಲಿ ಇರುವಂತೆ ಮಾಡಿದ್ದರು.
ಕಾಶ್ಮೀರದಲ್ಲಿ ಉದ್ವಿಗ್ನ ವಾತಾವರಣ: ಮುಫ್ತಿ, ಅಬ್ದುಲ್ಲಾ ಬಂಧನ
ನ್ಯಾಷನಲ್ ಕಾನ್ಫರೆನ್ಸಿನ ಮುಖಂಡರು, ನಾಲ್ಕೈದು ದಿನಗಳ ಕೆಳಗೆ ಮೋದಿಯನ್ನು ಭೇಟಿಯಾಗಿ ಯಾವುದೇ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬಾರದೆಂದು ಮನವಿ ಮಾಡಿದ್ದರು. ಈ ಹಿಂದೆ, ಫಾರೂಕ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ, ಆರ್ಟಿಕಲ್ 370ರ ವಿಚಾರದಲ್ಲಿ ಮೋದಿಗೆ ನೇರ ಸವಾಲು ಹಾಕಿದ್ದರು.
'ಒಂದು ಬಾರಿಯಲ್ಲ, ಎರಡು ಬಾರಿಯಲ್ಲ, ಹತ್ತು ಬಾರಿ ನರೇಂದ್ರ ಮೋದಿ ಪ್ರಧಾನಮಂತ್ರಿಯಾದರೂ, ಸಂವಿಧಾನದ ಪರಿಚ್ಛೇದ 370ವನ್ನು, ರದ್ದು ಮಾಡುವುದು ಹಾಗಿರಲಿ, ಮುಟ್ಟಲೂ ಸಾಧ್ಯವಿಲ್ಲ' ಎಂದು ನ್ಯಾಷನಲ್ ಕಾನ್ಫರೆನ್ಸಿನ ಮುಖಂಡ ಫಾರೂಕ್ ಅಬ್ದುಲ್ಲಾ ಹೇಳಿದ್ದರು.
ಇನ್ನೊಂದು ಕಡೆ ಪಿಡಿಪಿ ನಾಯಕಿ, ಮಾಜಿ ಸಿಎಂ ಮೆಹಬೂಬಾ ಮುಫ್ತಿ, ' ಆರ್ಟಿಕಲ್ 370ರ ವಿಚಾರಕ್ಕೆ ಯಾರಾದರೂ ಕೈಹಾಕಿದರೆ, ಮೈಯೆಲ್ಲಾ ಭಷ್ಮವಾಗುತ್ತದೆ,ಹುಷಾರ್' ಎಂದು ಪರೋಕ್ಷವಾಗಿ ಮೋದಿಗೆ ಸವಾಲು ಹಾಕಿದ್ದರು.
ಈಗ, ಕಾಶ್ಮೀರ ಕಣಿವೆಯಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗುವ ಸಾಧ್ಯತೆ ಇರುವುದರಿಂದ ಮೆಹಬೂಬಾ ಮುಫ್ತಿ ಮತ್ತು ಫಾರೂಖ್ ಅಬ್ದುಲ್ಲಾ ಪುತ್ರ ಒಮರ್ ಅಬ್ದುಲ್ಲಾ ಅವರನ್ನು ಬಂಧಿಸಲಾಗಿದೆ.