ಪ್ರತ್ಯೇಕತಾವಾದಿಗೆ ಅಂತರ್ಜಾಲ ಸಂಪರ್ಕ: ಕಾಶ್ಮೀರದ ಇಬ್ಬರು ಬಿಎಸ್ಎನ್ಎಲ್ ಅಧಿಕಾರಿಗಳ ಅಮಾನತು
ಶ್ರೀನಗರ, ಆಗಸ್ಟ್ 19: ಪ್ರತ್ಯೇಕತಾವಾದಿ ಮುಖಂಡ ಸೈಯದ್ ಅಲಿ ಶಾ ಗೀಲಾನಿ ಜತೆ ನಿಕಟ ಸಂಪರ್ಕ ಹೊಂದಿದ್ದ ಆರೋಪದಲ್ಲಿ ಬಿಎಸ್ಎಲ್ನ ಇಬ್ಬರು ಅಧಿಕಾರಿಗಳನ್ನು ಜಮ್ಮು ಮತ್ತು ಕಾಶ್ಮೀರ ಆಡಳಿತ ಅಮಾನತು ಮಾಡಿದೆ.
ರಾಜ್ಯದಲ್ಲಿ 370ನೇ ವಿಧಿ ರದ್ದುಗೊಳಿಸುವ ಮತ್ತು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ನಿರ್ಧಾರ ಪ್ರಕಟಿಸುವ ವೇಳೆ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗದಂತೆ ಎಚ್ಚರಿಕೆ ವಹಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಫೋನ್, ಇಂಟರ್ನೆಟ್ ಸಂಪರ್ಕಗಳನ್ನು ಕಡಿತಗೊಳಿಸಲಾಗಿತ್ತು. ಇಂತಹ ಪರಿಸ್ಥಿತಿಯಲ್ಲಿಯೂ ಕದ್ದುಮುಚ್ಚಿ ನಾಲ್ಕು ದಿನ ಗೀಲಾನಿ ಅವರಿಗೆ ಅಂತರ್ಜಾಲ ಸೌಲಭ್ಯವನ್ನು ಒದಗಿಸಿದ್ದರು ಎಂದು ಆರೋಪಿಸಲಾಗಿದೆ.
ಇಡೀ ಕಣಿವೆಯಲ್ಲಿ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಒಂದು ವಾರದಿಂದ ರಾಜ್ಯದಾದ್ಯಂತ ಎಲ್ಲ ಸಂಹವನ ಮಾಧ್ಯಮಗಳನ್ನು ನಿರ್ಬಂಧಿಸಲಾಗಿತ್ತು. ಈ ನಡುವೆ ಪ್ರತ್ಯೇಕತಾವಾದಿ ನಾಯಕ ಗೀಲಾನಿ ಅವರು ತಮ್ಮ ಖಾತೆಯಿಂದ ಟ್ವೀಟ್ ಮಾಡಿದ್ದರು. ಇದು ಅನುಮಾನಕ್ಕೆ ಕಾರಣವಾಗಿತ್ತು.

ಕಾಶ್ಮೀರದೆಲ್ಲಡೆ ಆಗಸ್ಟ್ 4ರಂದು ಸ್ಥಿರ ದೂರವಾಣಿ ಸೇರಿದಂತೆ ಎಲ್ಲ ಸಂವಹನ ಮಾರ್ಗಗಳನ್ನು ಸ್ಥಗಿತಗೊಳಿಸಲಾಗಿತ್ತು. ಮರುದಿನ ರಾಜ್ಯದಲ್ಲಿ 370ನೇ ವಿಧಿ ರದ್ದುಗೊಳಿಸುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿತ್ತು.
ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಮತ್ತು ಫಾರೂಕ್ ಅಬ್ದುಲ್ಲಾ ಸೇರಿದಂತೆ ನೂರಾರು ಪ್ರಮುಖ ರಾಜಕಾರಣಿಗಳು, ಮುಖಂಡರನ್ನು ಬಂಧಿಸಿ ಗೃಹಬಂಧನದಲ್ಲಿರಿಸಲಾಗಿತ್ತು. ಆದರೆ, ಇಂತಹ ಕಠಿಣ ಕ್ರಮದ ನಡುವೆಯೂ ಸಯ್ಯದ್ ಅಲಿ ಶಾ ಗೀಲಾನಿ ಅವರಿಗೆ ಆಗಸ್ಟ್ 8ರ ಬೆಳಗಿನವರೆಗೂ ಸ್ಥಿರ ದೂರವಾಣಿ ಮತ್ತು ಬ್ರಾಡ್ಬ್ಯಾಂಡ್ ಸೌಲಭ್ಯ ದೊರಕಿತ್ತು.
ಗೀಲಾನಿ ಅವರು ತಮ್ಮ ಖಾತೆಯಿಂದ ಟ್ವೀಟ್ ಮಾಡುವವರೆಗೂ ಅವರಿಗೆ ಕಾಶ್ಮೀರದೊಳಗಿದ್ದೂ ಇಂಟರ್ನೆಟ್ ಸೌಲಭ್ಯ ದೊರಕುತ್ತಿದೆ ಎಂಬ ವಿಚಾರದ ಸುಳಿವು ಅಧಿಕಾರಿಗಳಿಗೆ ದೊರಕಿರಲಿಲ್ಲ.
ಗೀಲಾನಿ ಅವರ ಟ್ವೀಟ್ ನೋಡಿದ ಕೂಡಲೇ ಕೇಂದ್ರ ಮತ್ತು ಜಮ್ಮು & ಕಾಶ್ಮೀರ ಪೊಲೀಸರು ಗೀಲಾನಿ ಸೇರಿದಂತೆ ಎಂಟು ಮಂದಿಯ ಟ್ವಿಟ್ಟರ್ ಖಾತೆಗಳಿಂದ ಕಣಿವೆಯಲ್ಲಿ ದ್ವೇಷ ಹೇಳಿಕೆ ಪ್ರಸಾರ ಮಾಡಲಾಗುತ್ತಿದ್ದು, ಅವುಗಳನ್ನು ಅಮಾನತು ಮಾಡುವಂತೆ ಟ್ವಿಟ್ಟರ್ಗೆ ಪತ್ರ ಬರೆದಿದ್ದರು.
ಇತರೆ ಯಾರಿಗೂ ದೂರವಾಣಿ ಮತ್ತು ಇಂಟರ್ನೆಟ್ ಸೌಲಭ್ಯ ಸಿಗದೆ ಇರುವಾಗ ಗೀಲಾನಿಗೆ ಹೇಗೆ ಸಿಕ್ಕಿತು ಎಂಬ ಅನುಮಾನದಿಂದ ತನಿಖೆ ಆರಂಭಿಸಿದ ಅಧಿಕಾರಿಗಳಿಗೆ ಬಿಎಸ್ಎನ್ಎಲ್ ಅಧಿಕಾರಿಗಳ ಪಾತ್ರ ಗೊತ್ತಾಗಿದೆ. ಕೂಡಲೇ ಗೀಲಾನಿಗೆ ನೀಡಿದ್ದ ಅಂತರ್ಜಾಲ ಸೌಲಭ್ಯವನ್ನು ಕಡಿತಗೊಳಿಸಿ, ನೌಕರರ ವಿರುದ್ಧ ಕ್ರಮ ತೆಗೆದುಕೊಂಡಿದ್ದಾರೆ.












Click it and Unblock the Notifications