ಉರಿ ಸೆಕ್ಟರ್ನಲ್ಲಿ ಪಾಕಿಸ್ತಾನದ 19 ವರ್ಷದ ಲಷ್ಕರ್ ಉಗ್ರ ಜೀವಂತ ಸೆರೆ
ಶ್ರೀನಗರ್, ಸೆಪ್ಟೆಂಬರ್ 28: ಜಮ್ಮು ಕಾಶ್ಮೀರದ ಉರಿ ಸೆಕ್ಟರ್ನಲ್ಲಿ ಭಾರತೀಯ ಸೇನಾ ಪಡೆ ನಡೆಸಿದ 10 ದಿನಗಳ ಕಾರ್ಯಾಚರಣೆ ಮಂಗಳವಾರ ಪೂರ್ಣಗೊಂಡಿದ್ದು, 18 ವರ್ಷದ ಒಬ್ಬ ಪಾಕಿಸ್ತಾನಿ ನುಸುಳುಕೋರನನ್ನು ಜೀವಂತವಾಗಿ ಸೆರೆ ಹಿಡಿಯಲಾಗಿದೆ. ಇದೇ ಕಾರ್ಯಾಚರಣೆ ವೇಳೆ ಒಂದು ಮೃತದೇಹ ಪತ್ತೆಯಾಗಿದೆ.
ಉರಿ ಸೆಕ್ಟರ್ ಮತ್ತು ನೆರೆಯ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಪ್ರದೇಶಗಳಲ್ಲಿನ ಒಳನುಸುಳುವಿಕೆ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆ ಕಳೆದ ಸೆಪ್ಟೆಂಬರ್ 18ರಿಂದಲೇ ಭಾರತೀಯ ಸೇನೆಯು ಕಾರ್ಯಾಚರಣೆ ಶುರು ಮಾಡಿದ್ದು, ಮೊಬೈಲ್, ಇಂಟರ್ನೆಟ್ ಮತ್ತು ದೂರವಾಣಿ ಸಂಪರ್ಕವನ್ನು ಕಡಿದುಕೊಳಿಸಲಾಗಿತ್ತು.
ಕಳೆದ ಭಾನುವಾರ ಇಬ್ಬರು ನುಸುಳುಕೋರರು ಸಾವನ್ನಪ್ಪಿರುವ ಸಾಧ್ಯತೆಯಿದ್ದು, ಶವಗಳನ್ನು ಇನ್ನಷ್ಟೇ ಪತ್ತೆ ಮಾಡಬೇಕಿದೆ ಎಂದು ಸೇನಾ ಮೂಲಗಳು ಹೇಳಿದ್ದವು. ಈ ಘಟನೆಯಲ್ಲಿ ನಾಲ್ವರು ಭಾರತೀಯ ಯೋಧರು ಗಾಯಗೊಂಡಿದ್ದಾರೆ.
ಪಾಕಿಸ್ತಾನ ಮೂಲದ ಯುವಕನ ಸೆರೆ:
ಲಷ್ಕರ್ ಸಂಘಟನೆಗೆ ಸೇರಿದ 18 ವರ್ಷದ ಯುವಕ ಪಾಕಿಸ್ತಾನದ ಓಕರ ನಿವಾಸಿ ಎಂದು ಆಂತರಿಕ ಮೂಲಗಳು ತಿಳಿಸಿವೆ. ಕಳೆದ 2018ರಲ್ಲಿ ಉರಿ ದಾಳಿಯಲ್ಲಿ ಬಳಸಿದ ಅದೇ ಮಾರ್ಗದ ಮೂಲಕ ಗುಂಪು ಮತ್ತೊಂದು ದಾಳಿ ನಡೆಸಲು ಬಂದಿತ್ತು ಎಂದು ಗೊತ್ತಾಗಿದೆ. ರಜೌರಿಯ ಪಿರ್ ಪಂಜಾಲ್ ಪ್ರದೇಶದಲ್ಲಿ ಇತ್ತೀಚೆಗೆ ಸೇನೆ ಮತ್ತು ಉಗ್ರಗಾಮಿಗಳ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಈ ಮಧ್ಯೆ ಕಾಶ್ಮೀರ ಕಣಿವೆಯಲ್ಲಿ ನಡೆದ ಕೆಲವು ಒಳನುಸುಳುವಿಕೆ ಪ್ರಯತ್ನಗಳು ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿವೆ.
ಉಗ್ರರ ನುಸುಳುವಿಕೆ ಇದು 2ನೇ ಬಾರಿ
ಕಳೆದ ಫೆಬ್ರವರಿ ತಿಂಗಳಿನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಉಲ್ಲಂಘನೆಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದಾದ ಬಳಿಕ ಉಗ್ರರು ನಡೆಸಿರುವ ಎರಡನೇ ನುಸುಳುವಿಕೆ ಪ್ರಯತ್ನ ಇದಾಗಿದೆ. ಆದರೆ ಅಂದಿನಿಂದ ಯಾವುದೇ ಕದನ ವಿರಾಮ ಉಲ್ಲಂಘನೆ ವರದಿಯಾಗಿಲ್ಲ ಮತ್ತು ಪಾಕಿಸ್ತಾನದಿಂದ ಯಾವುದೇ ರೀತಿ ಪ್ರಚೋದಿತ ಗುಂಡಿನ ದಾಳಿ ನಡೆದಿಲ್ಲ ಎಂದು ಸೇನೆ ಹೇಳಿದೆ.
ನಾವು ಕದನ ವಿರಾಮ ಉಲ್ಲಂಘನೆ ಮಾಡಿಲ್ಲ:
"ಈ ವರ್ಷ ಕದನ ವಿರಾಮ ಉಲ್ಲಂಘನೆ ಆಗಿಲ್ಲ. ನಾವು ಯಾವುದೇ ರೀತಿ ಕದನ ವಿರಾಮ ಉಲ್ಲಂಘನೆಗೆ ಸಿದ್ಧರಿದ್ದೇವೆ. ಆದರೆ ನಾವು ಗಡಿಯಿಂದ ಯಾವುದೇ ರೀತಿ ಪ್ರಚೋದನೆ ನೀಡಿಲ್ಲ" ಎಂದು 15 ಕಾರ್ಪ್ಗಳ ಜನರಲ್ ಆಫೀಸರ್ ಕಮಾಂಡಿಂಗ್ ಲೆಫ್ಟಿನೆಂಟ್ ಜನರಲ್ ಡಿಪಿ ಪಾಂಡೆ ಸ್ಪಷ್ಟಪಡಿಸಿದ್ದಾರೆ. ಹಿಂದಿಗಿಂತ ಈ ವರ್ಷ ಕೆಲವು ಒಳನುಸುಳುವಿಕೆ ಪ್ರಯತ್ನಗಳು ಹೆಚ್ಚಾಗಿ ನಡೆಯುತ್ತಿವೆ. ಸೇನೆಯು ಉರಿ ಸೆಕ್ಟರ್ ನಲ್ಲಿ ನುಸುಳುಕೋರರಿಗಾಗಿ ಕಾರ್ಯಾಚರಣೆ ನಡೆಸುತ್ತಿದೆ ಎಂದರು.
"ಉರಿ ಸೆಕ್ಟರ್ ನಲ್ಲಿ ಕಳೆದ 24 ಗಂಟೆಗಳಿಂದ ಕಾರ್ಯಾಚರಣೆ ನಡೆಯುತ್ತಿದೆ. ಇದರಲ್ಲಿ ಉಗ್ರರ ಒಳನುಸುಳುವಿಕೆ ಪ್ರಯತ್ನ ನಡೆದಿದೆ ಎಂದು ನಾವು ಭಾವಿಸಿದ್ದೇವೆ. ನಾವು ಅವರನ್ನು ಹುಡುಕುತ್ತಿದ್ದೇವೆ. ಅವರು ಈ ಕಡೆ ಇದ್ದಾರೆಯೇ ಅಥವಾ ಪ್ರಯತ್ನ ಮಾಡಿದ ನಂತರ ಅವರು ವಾಪಸ್ ಹೋಗಿದ್ದಾರೆಯೇ, ಆ ವಿಷಯವನ್ನು ಸ್ಪಷ್ಟಪಡಿಸಲಾಗಿಲ್ಲ ಅಥವಾ ದೃಢೀಕರಿಸಲಾಗಿಲ್ಲ," ಎಂದು ಜನರಲ್ ಪಾಂಡೆ ಹೇಳಿದ್ದಾರೆ.
ಕಳೆದ 2016ರಲ್ಲಿ ಉರಿ ಸೆಕ್ಟರ್ ದಾಳಿ:
2016ರ ಇದೇ ಸೆಪ್ಟೆಂಬರ್ ತಿಂಗಳ 18ರಂದು ಉರಿ ಸೆಕ್ಟರ್ ಸೇನಾ ನೆಲೆಗಳ ಮೇಲೆ ಉಗ್ರರು ಆತ್ಮಾಹುತಿ ದಾಳಿ ನಡೆಸಿದ್ದರು. ಉಗ್ರರ ದಾಳಿಗೆ ಭಾರತೀಯ ಸೇನೆಯ 19 ಯೋಧರು ಪ್ರಾಣತ್ಯಾಗ ಮಾಡಿದ್ದರು, ಇಂಥ ಕಹಿ ನೆನಪಿಗೆ ಐದು ವರ್ಷ ಪೂರೈಸಿದ ಸಂದರ್ಭದಲ್ಲೇ ಉಗ್ರರು ಗಡಿ ಪ್ರವೇಶಿಸುವುದಕ್ಕೆ ಯತ್ನಿಸಿರುವುದು ಗೊತ್ತಾಗಿತ್ತು. ಕೇಂದ್ರ ಸರ್ಕಾರದ ಮೂಲಗಳ ಪ್ರಕಾರ, ಪಾಕಿಸ್ತಾನದಿಂದ 6 ನುಸುಳುಕೋರ ಉಗ್ರರ ತಂಡವು ಗಡಿ ಪ್ರವೇಶಿಸಿರುವುದು ಗೊತ್ತಾಗಿತ್ತು. ಈ ಹಿನ್ನೆಲೆ ಉತ್ತರ ಕಾಶ್ಮೀರದ ಉರಿ ಸೆಕ್ಟರ್ ಪ್ರದೇಶದಲ್ಲಿ ಮೊಬೈಲ್ ಮತ್ತು ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.