RCB: ಆರ್ಸಿಬಿ ಕಂಡ್ರೆ ಉರಿದುಕೊಳ್ಳೋದ್ಯಾಕೆ? ಮೊದಲ ಸ್ಥಾನದಲ್ಲಿದ್ರೂ ವ್ಯಂಗ್ಯವಾಡಿದ ಸೆಹ್ವಾಗ್
ಅದ್ಯಾಕೋ ಆರ್ ಸಿಬಿ ತಂಡ ಕಂಡ್ರೆ ತುಂಬಾ ಜನಕ್ಕೆ ಉರಿ ಶುರುವಾಗುತ್ತೆ. ಆರ್ ಸಿಬಿ ಒಮ್ಮೆಯೂ ಕಪ್ ಗೆಲ್ಲದೇ ಇದ್ದರೂ ಹಲವು ತಂಡಗಳ ನಿದ್ದೆಗೆಡಿಸಿರುವುದು ನಿಜ. ಅದರಲ್ಲೂ ಕೆಲವು ಹಿಂದಿ ಕಾಮೆಂಟರಿ ಮಾಡುವವರು ಆರ್ ಸಿಬಿ ಕಾಲೆಳೆಯುವ ಯಾವ ಅವಕಾಶವನ್ನೂ ಬಿಡುವುದಿಲ್ಲ. ಮೆಗಾ ಹರಾಜಿನ ಬಳಿಕ ತಂಡವನ್ನು ನೋಡಿ ಸಾಕಷ್ಟು ಜನ ವ್ಯಂಗ್ಯವಾಡಿದ್ದರು. ಆದರೆ ಆಡಿದ ಮೊದಲ ಎರಡೂ ಪಂದ್ಯಗಳಲ್ಲಿ ಗೆದ್ದು ಆರ್ ಸಿಬಿ ಉತ್ತಮ ತಂಡ ಎನ್ನುವ ಸಂದೇಶ ಕೊಟ್ಟಿದೆ.
17 ವರ್ಷಗಳ ಬಳಿಕ ಸಿಎಸ್ಕೆ ವಿರುದ್ಧ ಚೆನ್ನೈನಲ್ಲಿ ಗೆದ್ದ ಬಳಿಕ ತವರಿನಲ್ಲಿ ಮೊದಲ ಪಂದ್ಯ ಆಡಲು ಸಜ್ಜಾಗಿದೆ. ಸದ್ಯ ಎರಡೂ ಪಂದ್ಯಗಳನ್ನು ಗೆದ್ದು 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿದ್ದರೂ ಕೆಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ವಿರೇಂದ್ರೆ ಸೆಹ್ವಾಗ್ ಅವರ ಹೇಳಿಕೆ ಇದಕ್ಕೆ ಸಾಕ್ಷಿ.

ತಂಡ ಉತ್ತಮ ಪ್ರದರ್ಶನ ನೀಡದೇ ಇದ್ದಾಗ ಟೀಕೆ ಮಾಡುವುದು ಸರಿ, ಆಟಗಾರ ಸತತ ವೈಫಲ್ಯ ಕಂಡಾಗ ಅದನ್ನು ಟೀಕಿಸಬೇಕು. ಆದರೆ ತಂಡ ಮೊದಲ ಸ್ಥಾನದಲ್ಲಿದ್ದರೆ ಅದನ್ನೂ ಆಡಿಕೊಳ್ಳುವುದು, ವ್ಯಂಗ್ಯವಾಡುವುದು ಇದ್ಯಾವ ರೀತಿಯ ಮನಸ್ಥಿತಿಯೋ ದೇವರಿಗೆ ಗೊತ್ತು ಎನ್ನುವಂತಾಗಿದೆ.
ಸೆಹ್ವಾಗ್ ಹೇಳಿದ್ದೇನು?
ಭಾರತದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಆರ್ ಸಿಬಿ ತಂಡವನ್ನು ಕಳಪೆ (ಗರೀಬ್) ತಂಡ ಎಂದು ಅಣಕಿಸಿದ್ದಾರೆ. ಬೆಂಗಳೂರು ತಂಡವನ್ನು ಟ್ರೋಲ್ ಮಾಡುವ ಮೂಲಕ ಸೆಹ್ವಾಗ್, ಆರ್ಸಿಬಿಯಂತಹ ಬಡ ತಂಡಗಳು ಐಪಿಎಲ್ ಪ್ರಶಸ್ತಿಯನ್ನು ಗೆಲ್ಲುವ ಯಶಸ್ಸನ್ನು ಎಂದಿಗೂ ಅನುಭವಿಸದ ಕಾರಣ ಪಾಯಿಂಟ್ಸ್ ಪಟ್ಟಿಯಲ್ಲಿ ಅಂತಹ ಉನ್ನತ ಸ್ಥಾನಗಳನ್ನು ಆನಂದಿಸಲು ಅವಕಾಶವನ್ನು ಪಡೆಯಬೇಕು ಎಂದಿದ್ದಾರೆ.
ಬಡವರು ಐಪಿಎಲ್ ಪಾಯಿಂಟ್ ಪಟ್ಟಿಯಲ್ಲಿ ಮೇಲೆ ಇರಲಿ, ಅವರು ಫೋಟೋಗಳನ್ನು ತೆಗೆದುಕೊಳ್ಳಲಿ. ಅವರು ಎಷ್ಟು ಕಾಲ ಮೇಲ್ಭಾಗದಲ್ಲಿ ಇರುತ್ತಾರೆಂದು ಯಾರಿಗೆ ತಿಳಿದಿದೆ ಎಂದು ಕ್ರಿಕ್ಬುಜ್ನಲ್ಲಿ ಮಾತನಾಡುವ ಸಂದರ್ಭದಲ್ಲಿ ಅಣಕವಾಗಿಡ್ಡಾರೆ.
ಸೆಹ್ವಾಗ್ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಪರ ಆಡಿದ್ದಾರೆ. ಆದರೂ ಈ ಎರಡೂ ತಂಡಗಳು ಒಮ್ಮೆಯೂ ಕಪ್ ಗೆದ್ದಿಲ್ಲ, ತಾನು ಆಟಗಾರನಾಗಿದ್ದ ತಂಡಗಳು ಕಪ್ ಗೆಲ್ಲದೇ ಇದ್ದರೂ, ಆರ್ ಸಿಬಿ ತಂಡದ ಮಾತ್ರ ವ್ಯಂಗ್ಯವಾಡಿದ್ದಾರೆ.
ವೀರೇಂದ್ರ ಸೆಹ್ವಾಗ್ ಅವರ ಹೇಳಿಕೆಗೆ ಆರ್ ಸಿಬಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆರ್ ಸಿಬಿ ಬಗ್ಗೆ ಹಲವು ಮಾಜಿ ಆಟಗಾರರು ಬಹಿರಂಗವಾಗಿಯೇ ವಿಷ ಕಾರುವುದು ಹೊಸದೇನೂ ಅಲ್ಲ, ಅಂಬಾಟಿ ರಾಯುಡು, ಬದ್ರಿನಾಥ್ ಅಂತಹವರು ಈಗಾಗಳೇ ಇದನ್ನು ಮಾಡಿದ್ದಾರೆ, ಇದಕ್ಕೆ ಸೆಹ್ವಾಗ್ ಹೊಸ ಸೇರ್ಪಡೆ ಅಷ್ಟೆ.












Click it and Unblock the Notifications