Virat Kohli: ರಜತ್ ಪಾಟಿದಾರ್ ವಿರುದ್ಧ ಸಿಟ್ಟಾದ ವಿರಾಟ್ ಕೊಹ್ಲಿ! ಯಾಕೆ?
2025ರ ಐಪಿಎಲ್ ಆವೃತ್ತಿಯಲ್ಲಿ ಐದನೇ ಗೆಲುವು ಸಾಧಿಸಿರುವ ಆರ್ ಸಿಬಿ ಪ್ಲೇಆಫ್ಗೆ ಮತ್ತಷ್ಟು ಸನಿಹವಾಗಿದೆ. ಭಾನುವಾರ ಮುಲ್ಲನ್ಪುರದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಆರ್ ಸಿಬಿ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. 8 ಪಂದ್ಯಗಳಲ್ಲಿ 5 ಪಂದ್ಯ ಗೆದ್ದು 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ.
ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್ ಸಿಬಿ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 157 ರನ್ ಕಲೆಹಾಕಿತು. ಉತ್ತಮ ಆರಂಭ ಸಿಕ್ಕರೂ ದೊಡ್ಡ ಮೊತ್ತ ಗಳಿಸುವಲ್ಲಿ ಪಂಜಾಬ್ ಕಿಂಗ್ಸ್ ವಿಫಲವಾಯಿತು.

ಜೋಶ್ ಹೇಜಲ್ವುಡ್ ಮತ್ತು ಭುವನೇಶ್ವರ್ ಕುಮಾರ್ ಕೊನೆಯ 4 ಓವರ್ ಗಳಲ್ಲಿ ಪಂಜಾಬ್ಕಿಂಗ್ಸ್ಗೆ ಕೇವಲ ಒಂದು ಸಿಕ್ಸರ್ ಮಾತ್ರ ಬಿಟ್ಟುಕೊಟ್ಟರು. ಮಧ್ಯಮ ಕ್ರಮಾಂಕದಲ್ಲಿ ಸುಯಾಶ್ ಶರ್ಮಾ ಪಂಜಾಬ್ ಕಿಂಗ್ಸ್ ಬ್ಯಾಟರ್ ಗಳನ್ನು ಕಟ್ಟಿಹಾಕಿದರು. ಬೆಂಗಳೂರಿನಲ್ಲಿ ಪಂಜಾಬ್ ವಿರುದ್ಧ ಸೋತಿದ್ದ ಆರ್ ಸಿಬಿ ಸೇಡು ತೀರಿಸಿಕೊಳ್ಳುವ ತವಕದಲ್ಲಿತ್ತು.
ಕೊಹ್ಲಿ, ಪಡಿಕ್ಕಲ್ ಅಬ್ಬರ
158 ರನ್ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಆರ್ ಸಿಬಿ ಆರಂಭದಲ್ಲೇ ಫಿಲ್ ಸಾಲ್ಟ್ ವಿಕೆಟ್ ಕಳೆದುಕೊಂಡಿತು. ಬಳಿಕ ಜೊತೆಯಾದ ಪಡಿಕ್ಕಲ್ ಮತ್ತು ವಿರಾಟ್ ಕೊಹ್ಲಿ ಎರಡನೇ ವಿಕೆಟ್ಗೆ 103 ರನ್ಗಳನ್ನು ಕಲೆಹಾಕಿದರು. ದೇವದತ್ ಪಡಿಕ್ಕಲ್ 35 ಎಸೆತಗಳಲ್ಲಿ 5 ಬೌಂಡರಿ 4 ಸಿಕ್ಸರ್ ಸಹಿತ 61 ರನ್ ಗಳಿಸಿದರು.
ವಿರಾಟ್ ಕೊಹ್ಲಿ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿದರು. ಐಪಿಎಲ್ನಲ್ಲಿ 67ನೇ ಅರ್ಧಶತಕ ಪೂರೈಸುವ ಮೂಲಕ ಡೇವಿಡ್ ವಾರ್ನರ್ ಅವರ ದಾಖಲೆಯನ್ನು ಮುರಿದು ಐಪಿಎಲ್ನಲ್ಲಿ ಅತಿ ಹೆಚ್ಚು ಅರ್ಧಶತಕ ಸಿಡಿಸಿದ ಬ್ಯಾಟರ್ ಎನಿಸಿಕೊಂಡರು.
ಪಾಟಿದಾರ್ ವಿರುದ್ಧ ಸಿಟ್ಟಾದ ಕೊಹ್ಲಿ
ದೇವದತ್ ಪಡಿಕ್ಕಲ್ ಔಟಾದ ಬಳಿಕ ನಾಯಕ ರಜತ್ ಪಟಿದಾರ್ ಬ್ಯಾಟಿಂಗ್ಗೆ ಬಂದರು. ರನ್ ಗಳಿಸಲು ಪಾಟಿದಾರ್ ಪರದಾಡುತ್ತಿದ್ದರೆ ಕೊಹ್ಲಿ ಸುಲಭವಾಗಿ ರನ್ ಗಳಿಸುತ್ತಿದ್ದರು. 15.4ನೇ ಓವರ್ ನಲ್ಲಿ ಕೊಹ್ಲಿ ಚೆಂಡನ್ನು ಹೊಡೆದ ಬಳಿಕ ಒಂದು ರನ್ ಓಡಿದರು, ಫೀಲ್ಡರ್ ಚೆಂಡನ್ನು ಸರಿಯಾಗಿ ಹಿಡಿಯಲು ವಿಫಲವಾದ ಬಳಿಕ ಕೊಹ್ಲಿ ಮತ್ತೊಂದು ರನ್ ಕದಿಯಲು ಓಡಿದರು.
ಆದರೆ ನಾಯಕ ರಜತ್ ಪಾಟಿದಾರ್ ಗೊಂದಲದಿಂದ ರನ್ ಓಡದೆ ಮಧ್ಯದಲ್ಲೇ ನಿಂತುಕೊಂಡರು. ಫೀಲ್ಡರ್ ಶ್ರೇಯಸ್ ಅಯ್ಯರ್ ಅವರಿಗೆ ಚೆಂಡನ್ನು ಎಸೆದರೂ ಅಯ್ಯರ್ ಅದನ್ನು ವಿಕೆಟ್ಗೆ ಹೊಡೆಯುವಲ್ಲಿ ವಿಫಲವಾದರು. ರಜತ್ ಪಟಿದಾರ್ ರನೌಟ್ನಿಂದ ಪಾರಾದರು ಬಳಿಕ ಕ್ರೀಸ್ ಒಳಗೆ ಬಂದರು. ಇದು ಕೊಹ್ಲಿಗೆ ಸಿಟ್ಟು ತರಿಸಿತು, ತಕ್ಷಣವೇ ಅವರು ನಾನು ಡೇಂಜರ್ ಬದಿಯಲ್ಲಿದ್ದೆ ನೀನು ಓಡಬೇಕು ಎಂದು ಜೋರಾಗಿ ಕಿರುಚಿದರು. ಬಳಿಕ ಮುಂದಿನ ಎಸೆತವನ್ನೇ ಬೌಂಡರಿ ಬಾರಿಸಿ ಕೈಗಳಿಂದ ಜೋರಾಗಿ ಬ್ಯಾಟ್ಗೆ ಗುದ್ದಿ ತಮ್ಮ ಸಿಟ್ಟನ್ನು ತೋರಿಸಿದರು.
ಪಂದ್ಯ ಮುಗಿದ ಬಳಿಕ ಬೆಂಗಳೂರಿನಲ್ಲಿ ಗೆಲುವಿನ ಬಳಿಕ ಅಣಕಿಸುವಂತೆ ಸಂಭ್ರಮಿಸಿದ್ದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಮತ್ತು ನೇಹಲ್ ವಧೇರಾ ಅವರಿಗೂ ತಮ್ಮ ಸೆಲೆಬ್ರೇಷನ್ ಮೂಲಕ ತಿರುಗೇಟು ಕೊಟ್ಟಿದ್ದಾರೆ.












Click it and Unblock the Notifications