Virat Kohli: ಭದ್ರತೆ ಉಲ್ಲಂಘಿಸಿ ಮೈದಾನಕ್ಕೆ ನುಗ್ಗಿದ ಅಭಿಮಾನಿಗೆ ವಿರಾಟ್ ಕೊಹ್ಲಿ ಹೇಳಿದ್ದೇನು?
ಭಾರತದ ಕ್ರಿಕೆಟ್ ಎಂದರೆ ಅದೊಂದು ಧರ್ಮ ಇದ್ದಂತೆ, ಕ್ರಿಕೆಟಿಗರನ್ನು ಅಭಿಮಾನಿಗಳು ದೇವರಂತೆ ಆರಾಧಿಸುವುದು ಹೊಸದೇನು ಅಲ್ಲ. ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಎಂಎಸ್ ಧೋನಿ, ರೋಹಿತ್ ಶರ್ಮಾ ಅವರಂತಹ ಕ್ರಿಕೆಟಿಗರಿಗೆ ಕೋಟಿ ಕೋಟಿ ಅಭಿಮಾನಿಗಳಿದ್ದಾರೆ. ಒಮ್ಮೆಯಾದರೂ ನೆಚ್ಚಿನ ಕ್ರಿಕೆಟಿಗನನ್ನು ನೋಡಬೇಕು, ಜೊತೆಯಲ್ಲಿ ಫೋಟೊ ತೆಗೆಸಿಕೊಳ್ಳಬೇಕು ಎಂದು ಬಯಸುತ್ತಾರೆ. ಇದೇ ಕಾರಣಕ್ಕೆ ಪಂದ್ಯ ನಡೆಯುವ ಸಂದರ್ಭದಲ್ಲೇ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಮೈದಾನಕ್ಕೆ ನುಗ್ಗುವುದನ್ನು ನೋಡುತ್ತೇವೆ.
ಐಪಿಎಲ್ 2025ರ ಉದ್ಘಾಟನಾ ಪಂದ್ಯದಲ್ಲಿ ಆರ್ ಸಿಬಿ ಕೆಕೆಆರ್ ವಿರುದ್ಧ ಸೆಣೆಸಿತ್ತು. ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ಈಡನ್ ಗಾರ್ಡನ್ಸ್ ಮೈದಾನದ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಮೈದಾನಕ್ಕೆ ನುಗ್ಗಿದ್ದ ಅಭಿಮಾನಿಯೊಬ್ಬ ವಿರಾಟ್ ಕೊಹ್ಲಿ ಬಳಿ ಓಡಿ ಬಂದು ಕಾಲಿಗೆ ಬಿದ್ದು ತನ್ನ ಬಹುಕಾಲದ ಕನಸು ನನಸು ಮಾಡಿಕೊಂಡ.

ಅಭಿಮಾನಿಯ ಸಂಭ್ರಮ
ವಿರಾಟ್ ಕೊಹ್ಲಿ ಕಾಲಿಗೆ ಬಿದ್ದು ಅಪ್ಪಿಕೊಂಡ ಅಭಿಮಾನಿಯನ್ನು ಬಳಿಕ ಭದ್ರತಾ ಸಿಬ್ಬಂದಿ ಹೊರಗೆ ಕರೆದೊಯ್ದರು. ಕಾಲಿಗೆ ಬಿದ್ದ ಅಭಿಮಾನಿಯನ್ನು 18 ವರ್ಷದ ರಿತುಪರ್ಣೋ ಪಖೀರಾ ಎಂದು ಗುರುತಿಸಲಾಗಿದೆ. ಬಾಲ್ಯದಿಂದಲೂ ಕೊಹ್ಲಿ ಅಭಿಮಾನಿಯಾಗಿದ್ದು ಭೇಟಿ ಮಾಡುವ ಕನಸು ನನಸು ಮಾಡಿಕೊಂಡರು. ಕೊಹ್ಲಿಯನ್ನು ಭೇಟಿ ಮಾಡುವ ಆಸೆ ಈಡೇರಿದೆ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಹೋಗಿದ್ದಕ್ಕೆ ನನಗೇನೂ ವಿಷಾದವಿಲ್ಲ ಎಂದು ಹೇಳಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಸೋಮವಾರ ಅಭಿಮಾನಿಗೆ ಜಾಮೀನು ಸಿಕ್ಕಿದೆ. ಕ್ರಿಮಿನಲ್ ಬಲಪ್ರಯೋಗ, ಕ್ರಿಮಿನಲ್ ಅತಿಕ್ರಮಣ ಮತ್ತು ಇತರರ ಜೀವ ಅಥವಾ ಸುರಕ್ಷತೆಯನ್ನು ಅಪಾಯಕ್ಕೆ ಸಿಲುಕಿಸುವ ಅಜಾಗರೂಕ ಕೃತ್ಯಗಳ ಆರೋಪದಡಿ ಅವರ ಮೇಲೆ ಬಿಎನ್ಎಸ್ನ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು. ಒಂದು ದಿನ ಪೊಲೀಸ್ ಕಸ್ಟಡಿಯಲ್ಲಿ ಇದ್ದ ಬಳಿಕ ಮ್ಯಾಜಿಸ್ಟ್ರೇಟ್ ಕೌಸ್ತವ್ ಮುಖೋಪಾಧ್ಯಾಯ ಅವರು ಕೋಲ್ಕತ್ತಾ ಪೊಲೀಸರ ಹೆಚ್ಚಿನ ಕಸ್ಟಡಿ ಮನವಿಯನ್ನು ತಿರಸ್ಕರಿಸಿದ್ದಲ್ಲದೆ, ಅಭಿಮಾನಿಗೆ ಕೊಹ್ಲಿಯಂತೆ ಇರಿ ಎಂದು ಸಲಹೆ ನೀಡಿದರು. ಜೀವನದಲ್ಲಿ ಭದ್ರತೆ ಉಲ್ಲಂಘಿಸಿ ಇತರರ ಜೀವಕ್ಕೆ ಅಪಾಯ ಉಂಟುಮಾಡಬೇಡಿ ಎಂದು ಬುದ್ದಿಮಾತು ಹೇಳಿದರು.

ವಿರಾಟ್ ಕೊಹ್ಲಿ ಹೇಳಿದ್ದೇನು?
ನಾನು ವಿರಾಟ್ ಕೊಹ್ಲಿ ಅವರ ಕಾಲಿಗೆ ಬಿದ್ದ ತಕ್ಷಣ ಅವರು ನನ್ನನ್ನು ಮೇಲಕ್ಕೆತ್ತಿದರು. ನನ್ನ ಹೆಸರನ್ನು ಕೇಳಿದ ಅವರು ಇಲ್ಲಿಂದ ಬೇಗ ಓಡಿಹೋಗು ಎಂದು ಹೇಳಿದರು. ನನ್ನನ್ನು ಹಿಡಿಯಲು ಬಂದ ಭದ್ರತಾ ಸಿಬ್ಬಂದಿಗೆ ನನಗೆ ಹೊಡೆಯದಂತೆ ಮನವಿ ಮಾಡಿದರು ಮತ್ತು ನಿಧಾನವಾಗಿ ಮೈದಾನದಿಂದ ಹೊರಗೆ ಕರೆದುಕೊಂಡು ಹೋಗಲು ಕೇಳಿದರು ಎಂದು ಜಾಮೀನು ಪಡೆದ ಬಳಿಕ ರಿತುಪರ್ಣೋ ಪಖೀರಾ ಹೇಳಿದ್ದಾರೆ.
"ನಾನು ಯಾವುದೇ ಸಂದರ್ಭದಲ್ಲೂ ಮೈದಾನಕ್ಕೆ ಹೋಗಲು ಯೋಜಿಸಿದ್ದೆ, ಅದಕ್ಕಾಗಿ ನಾನು ಸಜ್ಜಾಗಿದ್ದೆ. ನನಗೆ ಯಾವುದೇ ವಿಷಾದವೂ ಇಲ್ಲ, ನನ್ನ ದೇವರನ್ನು ಮುಟ್ಟಲು ನಾನು ಯಶಸ್ವಿಯಾಗಿದ್ದೇನೆ, ನನಗೆ ತುಂಬಾ ಸಂತೋಷವಾಗಿದೆ" ಎಂದು ಹೇಳಿದ್ದಾರೆ.












Click it and Unblock the Notifications