39 ವರ್ಷಗಳ ನಂತರ ವೆಸ್ಟ್ ಇಂಡೀಸ್ ನೆಲದಲ್ಲಿ ಟೀಂ ಇಂಡಿಯಾ ದಾಖಲೆ
ವೆಸ್ಟ್ ಇಂಡೀಸ್ ನೆಲದಲ್ಲಿ ಅಬ್ಬರಿಸುತ್ತಿರುವ ಭಾರತದ ಕ್ರಿಕೆಟ್ ಕಲಿಗಳು ಏಕದಿನ ಸರಣಿಯ ಕೊನೆಯ ಪಂದ್ಯವನ್ನು ಭರ್ಜರಿಯಾಗಿ ಗೆಲ್ಲುವ ಮೂಲಕ ಹೊಸದೊಂದು ದಾಖಲೆ ಬರೆದಿದ್ದಾರೆ. 1983ರಲ್ಲಿ ಕೆರಿಬಿಯನ್ನರ ನೆಲದಲ್ಲಿ ದ್ವಿಪಕ್ಷೀಯ ಏಕದಿನ ಸರಣಿಯನ್ನು ಆಡಲು ಪ್ರಾರಂಭಿಸಿದ ನಂತರ ಇದುವರೆಗೂ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಲು ಭಾರತ ತಂಡಕ್ಕೆ ಸಾಧ್ಯವಾಗಿರಲಿಲ್ಲ, ಆದರೆ ಈಗ ಧವನ್ ಪಡೆ ಅದನ್ನು ಸಾಧಿಸಿದೆ.
ಬರೋಬ್ಬರಿ 39 ವರ್ಷಗಳ ನಂತರ ವೆಸ್ಟ್ ಇಂಡೀಸ್ನಲ್ಲಿ ಚೊಚ್ಚಲ ಏಕದಿನ ಅಂತರರಾಷ್ಟ್ರೀಯ ಕ್ಲೀನ್ ಸ್ವೀಪ್ ಸಾಧಿಸಿದ ಭಾರತವು ಇತಿಹಾಸವನ್ನು ಬರೆದಿದೆ. ಮೂರು ಅಥವಾ ಅದಕ್ಕಿಂತ ಹೆಚ್ಚು ಏಕದಿನ ಪಂದ್ಯಗಳನ್ನು ಒಳಗೊಂಡಿರುವ ವಿದೇಶ ಸರಣಿಯಲ್ಲಿ ವೆಸ್ಟ್ ಇಂಡೀಸ್ ಅನ್ನು ವೈಟ್ವಾಶ್ ಮಾಡಲು ಭಾರತಕ್ಕೆ ಎಂದಿಗೂ ಸಾಧ್ಯವಾಗಲಿಲ್ಲ.
ಐಸಿಸಿ ಪುರುಷರ ಕ್ರಿಕೆಟ್ ಸಮಿತಿಗೆ ವಿವಿಎಸ್ ಲಕ್ಷ್ಮಣ್ ನೇಮಕ
ಜನವರಿಯಲ್ಲಿ ಭಾರತದಲ್ಲಿ ನಡೆದ ಸರಣಿಯಲ್ಲಿ ವೆಸ್ಟ್ ಇಂಡೀಸ್ ಅನ್ನು ಕ್ಲೀನ್ ಸ್ವೀಪ್ ಮಾಡಿದ್ದ ಟೀಂ ಇಂಡಿಯಾ ಬುಧವಾರ (ಜುಲೈ 27) ಕ್ವೀನ್ಸ್ ಪಾರ್ಕ್ ಓವಲ್ನಲ್ಲಿ ನಡೆದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯವನ್ನು ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿತು.
ಒಂದೇ ವರ್ಷದಲ್ಲಿ ಎರಡು ಸರಣಿ ಕ್ಲೀನ್ ಸ್ವೀಪ್
ಒಂದೇ ವರ್ಷದಲ್ಲಿ ಒಂದು ತಂಡವನ್ನು ಎರಡು ಬಾರಿ ವೈಟ್ವಾಷ್ ಮಾಡಿದ ಮೂರನೇ ತಂಡ ಎನ್ನುವ ಹೆಗ್ಗಳಿಕೆಗೆ ಭಾರತ ತಂಡ ಪಾತ್ರವಾಗಿದೆ. ಜಿಂಬಾಬ್ವೆ ಮತ್ತು ಬಾಂಗ್ಲಾ ಈ ಮೊದಲು ಈ ಸಾಧನೆ ಮಾಡಿದ ತಂಡಗಳಾಗಿದೆ. ಜಿಂಬಾಬ್ವೆ 2001 ರಲ್ಲಿ ಬಾಂಗ್ಲಾದೇಶದ ವಿರುದ್ಧ ಈ ಸಾಧನೆಯನ್ನು ಸಾಧಿಸಿತು, ತವರಿನಲ್ಲಿ 4-0 ಮತ್ತು ವಿದೇಶದಲ್ಲಿ 3-0 ಸರಣಿ ಜಯ ಸಾಧಿಸಿತ್ತು. 2006 ರಲ್ಲಿ, ಬಾಂಗ್ಲಾದೇಶವು ಕೀನ್ಯಾವನ್ನು 3-0 ಅಂತರದಿಂದ ಸ್ವದೇಶದಲ್ಲಿ ಮತ್ತು ವಿದೇಶದಲ್ಲಿ ಕ್ಲೀನ್ ಸ್ವೀಪ್ ಮಾಡಿತು.
ನೂತನ ನಾಯಕ ಶಿಖರ್ ಧವನ್ ದಾಖಲೆ
ಭಾರತ ತಂಡದ ನೂತನ ನಾಯಕ ಶಿಖರ್ ಧವನ್ ವೆಸ್ಟ್ ಇಂಡೀಸ್ನಲ್ಲಿ ಏಕದಿನ ಸರಣಿಯನ್ನು ಗೆದ್ದ ಐದನೇ ನಾಯಕ ಎನ್ನುವ ಖ್ಯಾತಿಗೆ ಭಾಜನರಾಗಿದ್ದಾರೆ. ಈ ಮೊದಲು ಸೌರವ್ ಗಂಗೂಲಿ, ಎಂಎಸ್ ಧೋನಿ, ಸುರೇಶ್ ರೈನಾ ಮತ್ತು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ನೆಲದಲ್ಲಿ ಸರಣಿ ಜಯ ಸಾಧಿಸಿದ್ದರು.
2002 ರಲ್ಲಿ ವೆಸ್ಟ್ ಇಂಡೀಸ್ನಲ್ಲಿ ನಡೆದ ಮೂರು ಪಂದ್ಯಗಳ ಸರಣಿಯಲ್ಲಿ ಗಂಗೂಲಿ ನೇತೃತ್ವದ ಭಾರತ ತಂಡವು ಆತಿಥೇಯರನ್ನು 2-1 ಅಂತರದಿಂದ ಸೋಲಿಸಿದಾಗ ಭಾರತವು ವೆಸ್ಟ್ ಇಂಡೀಸ್ನಲ್ಲಿ ತಮ್ಮ ಮೊದಲ ಏಕದಿನ ಸರಣಿಯನ್ನು ಗೆದ್ದುಕೊಂಡಿತು.
ಈವರೆಗೆ ಟೀಂ ಇಂಡಿಯಾ ನಾಯಕರ ದಾಖಲೆ
ಎಂ.ಎಸ್. ಧೋನಿ ನೇತೃತ್ವದ ಭಾರತ ತಂಡ 2009ರಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿತ್ತು. ಸುರೇಶ್ ರೈನಾ ನಾಯಕತ್ವದ ತಂಡವು 2011 ರಲ್ಲಿ ವೆಸ್ಟ್ ಇಂಡೀಸ್ ಅನ್ನು 3-2 ಅಂತರದಿಂದ ಸೋಲಿಸಿತು.
ನಂತರ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಮೂರು ಪಂದ್ಯಗಳ ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆ ಸಾಧಿಸಿ ವೈಟ್ ವಾಷ್ ಮಾಡುವ ಉತ್ಸಾಹದಲ್ಲಿರುವಾಗಲೇ ಸರಣಿಯ ಕೊನೆಯ ಪಂದ್ಯ ಮಳೆಯಿಂದ ರದ್ದಾಗಿತ್ತು. ಭಾರತಕ್ಕೆ ಸರಣಿ ಕ್ಲೀನ್ ಸ್ವೀಪ್ ಮಾಡುವ ಅವಕಾಶ ಕೈತಪ್ಪಿತ್ತು. ನಂತರ 2017ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ 4 ಪಂದ್ಯಗಳ ದ್ವಿಪಕ್ಷೀಯ ಸರಣಿಯನ್ನು 3-1 ರಿಂದ ಗೆದ್ದಿತ್ತು.
ಮಳೆ ಅಡ್ಡಿಯ ನಡುವೆಯೂ ಭರ್ಜರಿ ಜಯ
ವೆಸ್ಟ್ ಇಂಡೀಸ್ ವಿರುದ್ದದ ಕೊನೆಯ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು, ಮೊದಲು ಪಂದ್ಯವನ್ನು 40 ಓವರ್ ಗಳಿಗೆ ಸೀಮಿತಗೊಳಿಸಲಾಯಿತು ಭಾರತ 36 ಓವರ್ ಪೂರೈಸಿದ್ದಾಗ ಮತ್ತೆ ಮಳೆ ಬಂದ ಕಾರಣ ಅಷ್ಟಕ್ಕೇ ಪಂದ್ಯವನ್ನು ಸೀಮಿತಗೊಳಿಸಲಾಯಿತು. ಆಗ ಶುಭ್ಮನ್ ಗಿಲ್ 98 ರನ್ ಗಳಿಸಿದ್ದರು ಮಳೆಯಿಂದಾಗಿ ಶತಕ ಗಳಿಸುವ ಅವಕಾಶ ತಪ್ಪಿಸಿಕೊಂಡರು. ಗಿಲ್, ಧವನ್, ಶ್ರೇಯಸ್ ಅಯ್ಯರ್ ಉತ್ತಮ ಬ್ಯಾಟಿಂಗ್ ನೆರವಿನಿಂದ ಭಾರತ 36 ಓವರ್ ಗಳಲ್ಲಿ 225 ರನ್ ಗಳಿಸಿತ್ತು. ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ನಂತರ ಭಾರತದ ಇನ್ನಿಂಗ್ಸ್ ಅಷ್ಟಕ್ಕೆ ಅಂತ್ಯಗೊಂಡಿತು.
ಡಿಎಲ್ಎಸ್ ನಿಯಮದಂತೆ ವೆಸ್ಟ್ ಇಂಡೀಸ್ ತಂಡ ಗೆಲುವಿಗಾಗಿ 35 ಓವರ್ ಗಳಲ್ಲಿ 257 ರನ್ ಗಳಿಸಬೇಕಾಗಿತ್ತು. ಆದರೆ ಭಾರತದ ಬೌಲಿಂಗ್ ದಾಳಿಗೆ ಸಿಲುಕಿದ ವೆಸ್ಟ್ ಇಂಡೀಸ್ 137 ರನ್ ಗಳಿಸಿ ಆಲೌಟ್ ಆಯಿತು. ಯುಜುವೇಂದ್ರ ಚಾಹಲ್ ನಾಲ್ಕು ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ 2 ವಿಕೆಟ್ ಪಡೆದರು. ಸರಣಿಯ ಕೊನೆ ಪಂದ್ಯವನ್ನು 119 ರನ್ಗಳ ಭಾರಿ ಅಂತರದಿಂದ ಗೆದ್ದ ಟೀಂ ಇಂಡಿಯಾ ಹೊಸ ದಾಖಲೆ ಬರೆಯಿತು.