ಬಿಸಿಸಿಸಿ-ಗಂಗೂಲಿ ವಿವಾದ: ಟಿಎಂಸಿಯಿಂದ ಬಂಗಾಳಿ ಅಸ್ಮಿತೆಯ ಅಸ್ತ್ರ, ಬಿಜೆಪಿಗೆ ಧರ್ಮಸಂಕಟ
ಬೆಂಗಳೂರು, ಅಕ್ಟೋಬರ್ 20: ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಅವರನ್ನು ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಮರು ನೇಮಕ ಮಾಡದಿರುವ ವಿಚಾರವೀಗ ಪಶ್ಚಿಮ ಬಂಗಾಳ ರಾಜಕಾರಣದಲ್ಲಿ ಕಲ್ಲೋಲಗಳನ್ನೇ ಸೃಷ್ಟಿಸಿದೆ. ಗಂಗೂಲಿ ಅವರನ್ನು ಬಿಸಿಸಿಐನಿಂದ ಕೈಬಿಟ್ಟಿದ್ದಕ್ಕಾಗಿ ಬಂಗಾಳದ ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ದಾದಾ(ಹಿರಿಯ ಅಣ್ಣ) ಎಂದೇ ಖ್ಯಾತರಾಗಿರುವ ಗಂಗೂಲಿ, ಬಂಗಾಳದಲ್ಲಿ ಜನಪ್ರಿಯ ವ್ಯಕ್ತಿಯಾಗಿದ್ದಾರೆ. ಇದನ್ನೇ ಅಸ್ತ್ರ ಮಾಡಿಕೊಂಡಿರುವ ಟಿಎಂಸಿ ಬಂಗಾಳಿ ರಾಷ್ಟ್ರೀಯತೆ ಹಾಗೂ ಅಸ್ಮಿತೆಯ ವಿಚಾರಗಳನ್ನು ಮುನ್ನೆಲೆಗೆ ತಂದಿದೆ. ಇದು ಬಿಜೆಪಿಗೆ ಧರ್ಮಸಂಕಟವಾಗಿ ಪರಿಣಮಿಸಿದೆ.
ಗಂಗೂಲಿ ವಿಚಾರವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, 'ಸೌರವ್ ಗಂಗೂಲಿ ಅವರನ್ನು ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಮರು ನೇಮಕ ಮಾಡಿಲ್ಲ. ಆದರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರನ್ನು ಕಾರ್ಯದರ್ಶಿಯನ್ನಾಗಿ ಮುಂದುವರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದು ನನಗೆ ಅಚ್ಚರಿ ಉಂಟು ಮಾಡಿದೆ' ಎಂದು ಹೇಳಿದ್ದಾರೆ.
ಕೊನೆಗೂ ಕನ್ನಡಿಗನಿಗೆ ಬಿಸಿಸಿಐ ಅಧ್ಯಕ್ಷ ಪಟ್ಟ; ಬಿಸಿಸಿಐ ನೂತನ ಅಧ್ಯಕ್ಷ ರೋಜರ್ ಬಿನ್ನಿ ಯಾರು?
'ಸೌರವ್ ಗಂಗೂಲಿ ನಮ್ಮೆಲ್ಲರ ಹೆಮ್ಮೆ. ಅವರು ಭಾರತಕ್ಕಾಗಿ ಆಡಿದ್ದಾರೆ. ಬಂಗಾಳ ಹಾಗೂ ರಾಷ್ಟ್ರ ಮಟ್ಟದಲ್ಲಿ ಆಡಳಿತಾಧಿಕಾರಿಯಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಬಿಸಿಸಿಐ ಅಧ್ಯಕ್ಷರಾಗಿದ್ದ ಸಮಯದಲ್ಲಿ ಅವರು ತಮ್ಮ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ. ಈಗ ಅವರನ್ನು ತೆಗೆದುಹಾಕಲಾಗಿದೆ. ಆದರೆ, ಅಮಿತ್ ಶಾರ ಮಗನನ್ನು ಮುಂದುವರಿಸಲಾಗಿದೆ. ಏಕೆ ಹೀಗೆ ಮಾಡಲಾಗಿದೆ ಎಂಬುದನ್ನು ನಾವು ತಿಳಿಯಬಯಸುತ್ತೇವೆ. ಐಸಿಸಿಗೆ ನಾಮನಿರ್ದೇಶನ ಮಾಡುವ ಮೂಲಕ ಮಾತ್ರ ಗಂಗೂಲಿಯವರಿಗೆ ಪರಿಹಾರ ನೀಡಬಹುದು' ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಟಿಎಂಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕುನಾಲ್ ಘೋಷ್, 'ಬಿಸಿಸಿಐ ಕಾರ್ಯದರ್ಶಿಯಾಗಿ ಜಯ್ ಶಾ ಪುನರಾಯ್ಕೆಯಾಗಿದ್ದಾರೆ. ಗಂಗೂಲಿ ಅವರನ್ನು ತೆಗೆದುಹಾಕಲಾಗಿದೆ. ಪಶ್ಚಿಮ ಬಂಗಾಳ ಮತ್ತು ದೇಶದ ಜನರು ಈ ಬಗ್ಗೆ ತಿಳಿಯಲು ಬಯಸಿದ್ದಾರೆ. ಗಂಗೂಲಿಯನ್ನು ಅವಮಾನಿಸಲು ಬಿಜೆಪಿ ಯತ್ನಿಸುತ್ತಿದೆ. ಬಿಜೆಪಿಯು ಬಂಗಾಳದ ವಿರೋಧಿ ಎಂಬುದು ಇದರಿಂದ ಅರ್ಥವಾಗಿದೆ' ಎಂದು ಟೀಕಿಸಿದ್ದಾರೆ.
ಸೌರವ್ ಗಂಗೂಲಿಗೆ ಅನ್ಯಾಯವಾಗುವುದನ್ನು ರಾಜ್ಯವು ಎಂದಿಗೂ ಒಪ್ಪಿಕೊಳ್ಳುವುದಿಲ್ಲವೆಂದು ಬಂಗಾಳಿ ರಾಷ್ಟ್ರೀಯವಾದಿ ಸಂಘಟನೆ 'ಬಾಂಗ್ಲಾ ಪೊಕ್ಖೋ' ಹೇಳಿದೆ.
2021ರ ವಿಧಾನಸಭಾ ಚುನಾವಣೆ ಹತ್ತಿರವಿದ್ದಾಗ ಬಿಜೆಪಿಗೆ ಸೌರವ್ ಗಂಗೂಲಿ ಬೇಕಿತ್ತು. ಈಗ ಚುನಾವಣೆಗಳು ಮುಗಿದಿವೆ. ಬಿಜೆಪಿಯವರು ದಾದಾ ಅವರನ್ನು ಅವಮಾನಿಸಲು ಯತ್ನಿಸುತ್ತಿದ್ದಾರೆ. ಈ ಅವಮಾನವನ್ನು ಬಂಗಾಳವು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಇದು ಬಂಗಾಳಿ ಅಸ್ಮಿತೆಯ ಪ್ರಶ್ನೆಯಾಗಿದೆ' ಎಂದು ಬಾಂಗ್ಲಾ ಪೊಕ್ಖೋ ಹಿರಿಯ ನಾಯಕ ಕೌಶಿಕ್ ಮೈತಿ ಹೇಳಿದ್ದಾರೆ.
ಬಿಜೆಪಿಗೆ ಬಿಸಿತುಪ್ಪವಾದ ಗಂಗೂಲಿ ವಿವಾದ
ಸೌರವ್ ಗಂಗೂಲಿ ಹಾಗೂ ಬಿಸಿಸಿಐ ವಿವಾದವು ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಕಳೆದ ಬಾರಿಯ ವಿಧಾನಸಭೆ ಚುನಾವಣೆ ಸಮಯದಲ್ಲಿಯೂ ಬಂಗಾಳಿ ಅಸ್ಮಿತೆಯ ರಾಜಕಾರಣ ಬಿಜೆಪಿಗೆ ಹಿನ್ನೆಡೆ ಉಂಟುಮಾಡಿತ್ತು. 'ಮಮತಾ ಬಂಗಾಳದ ಮಗಳು' ಎಂಬ ಘೋಷಣೆಯನ್ನು ಟಿಎಂಸಿ ಹೊರಡಿಸಿತ್ತು. ಬಿಜೆಪಿಯವರು ಹೊರಗಿನವರು ಎಂಬ ವಾದವನ್ನು ಹರಿಬಿಡಲಾಗಿತ್ತು. ಈಗ ಮತ್ತೆ ಗಂಗೂಲಿ ವಿಚಾರವಾಗಿ ಬಿಜೆಪಿ ಧರ್ಮಸಂಕಟಕ್ಕೆ ಈಡಾಗಿದೆ. ಈ ಕುರಿತು ಮಾತನಾಡಿರುವ ಬಿಜೆಪಿ ನಾಯಕ ಸುವೇಂದು ಅಧಿಕಾರಿ, 'ಗಂಗೂಲಿ ವಿಚಾರದಲ್ಲಿ ಮಮತಾ ರಾಜಕೀಯ ಮಾಡುತ್ತಿದ್ದಾರೆ. ರಾಜಕಾರಣವನ್ನು ಕ್ರೀಡೆಯಿಂದ ದೂರವಿಡಿ' ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ, ಗಂಗೂಲಿ ವಿಚಾರವು ಟಿಎಂಸಿಗೆ ಪ್ರಮುಖ ಅಸ್ತ್ರವಾಗಿದೆ. ಈ ಎಲ್ಲ ಬೆಳವಣಿಗಗಳ ಬಗ್ಗೆ ಗಂಗೂಲಿ ಮೌನ ಮುರಿದಿಲ್ಲ. ಬಂಗಾಳ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿ ಮರಳಲಿದ್ದಾರಾ ಅಥವಾ ರಾಜಕೀಯಕ್ಕೆ ಸೇರಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.