IPL Final Match: ಶುಭ್ಮನ್ ಗಿಲ್ ಗರ್ಜನೆಗೆ ಮಣಿದ ರಾಜಸ್ಥಾನ್; ಫೈನಲ್ಗೆ ಗುಜರಾತ್ ಟೈಟನ್ಸ್ ಭರ್ಜರಿ ಎಂಟ್ರಿ
ಚಂಡೀಗಢ: ಐಪಿಎಲ್ 2026 ಸೀಸನ್ನ ಕ್ವಾಲಿಫೈಯರ್ 2 ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಿ ಗುಜರಾತ್ ಟೈಟನ್ಸ್ ಫೈನಲ್ಗೆ ಲಗ್ಗೆ ಇಟ್ಟಿದೆ. ನಾಯಕ ಶುಭ್ಮನ್ ಗಿಲ್, ರಾಜಸ್ಥಾನ ವಿರುದ್ಧ ಕೇವಲ 53 ಎಸೆತಗಳಲ್ಲಿ 15 ಬೌಂಡರಿ ಹಾಗೂ 3 ಸಿಕ್ಸರ್ಗಳ ನೆರವಿನಿಂದ ಅಜೇಯ 104 ರನ್ ಬಾರಿಸಿ ತಂಡದ ಗೆಲುವನ್ನು ಖಚಿತಪಡಿಸಿದರು.
ತಂಡ ಫೈನಲ್ ಪ್ರವೇಶಿಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ ಶುಭ್ಮನ್ ಗಿಲ್ ಅವರು ಪ್ರತಿಕ್ರಿಸಿದ್ದಾರೆ. ಟಾಸ್ ಸಮಯದಲ್ಲಿ ನಡೆದ ಘಟನೆಗಳನ್ನು ನೆನಪಿಸಿಕೊಂಡರು. ಟಾಸ್ ಮಾಡುವಾಗ ಗೊಂದಲವಿತ್ತು. ಮ್ಯಾಚ್ ರೆಫರಿಗೆ ರಿಯಾನ್ ಪರಾಗ್ ಕರೆಯು ಸ್ಪಷ್ಟವಾಗಿ ಕೇಳಿಸಲಿಲ್ಲ. ಏನೇ ಆಗಲಿ, ಈ ಪಂದ್ಯವನ್ನು ಗೆದ್ದಿದ್ದು ಸಂತೋಷ ತಂದಿದೆ ಎಂದು ಹೇಳಿದರು.

ನಮ್ಮ ಗ್ರಹಿಕೆ, ಸಂವಹನ ಚೆನ್ನಾಗಿದೆ
ಸಾಯಿ ಸುದರ್ಶನ್ ಜೊತೆಗಿನ ಪಾಲುದಾರಿಕೆಯ ಬಗ್ಗೆ ಗಿಲ್ ಮಾತನಾಡಿ, ನಾವಿಬ್ಬರೂ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇವೆ. ಮೈದಾನದಲ್ಲಿ ಒಬ್ಬರ ಆಟವನ್ನು ಇನ್ನೊಬ್ಬರು ಉತ್ತಮವಾಗಿ ಗ್ರಹಿಸಿದ್ದೇವೆ. ಒಟ್ಟಿಗೆ ಬ್ಯಾಟಿಂಗ್ ಮಾಡುವಾಗ ಪರಸ್ಪರ ಸಂವಹನ, ಸಂದರ್ಭ ಅರ್ಥಮಾಡಿಕೊಂಡು ಆಡುತ್ತೇವೆ. ಯಾವ ಬೌಲರ್ ವಿರುದ್ಧ ಯಾರು ಸೆಣಸಬಹದು ಎಂಬುದನ್ನು ಸೂಕ್ಷ್ಮವಾಗಿ ನಿರ್ಧರಿಸುತ್ತೇವೆ ಎಂದು ವಿವರಿಸಿದರು.
ಸತತ ಎರಡು ಪಂದ್ಯಗಳಲ್ಲಿ ಓರ್ವ ಆಟಗಾರ ಈ ರೀತಿ 'ಹಿಟ್ ವಿಕೆಟ್' ಆಗುವುದನ್ನು ನಾನು ಇದುವರೆಗೆ ನೋಡಿಲ್ಲ, ಯಾರೂ ನೋಡಿರುವುದಿಲ್ಲ ಎಂಬುದು ನನ್ನ ಭಾವನೆ. ಅವರು ಔಟಾದ ರೀತಿ ನಿಜಕ್ಕೂ ವಿಶಿಷ್ಟವಾಗಿತ್ತು! ಸಾಮಾಜಿಕ ಜಾಲತಾಣಗಳಲ್ಲಿ ಅವರ ಕೈಗೆ ಟೇಪ್ ಸುತ್ತುವ ವೀಡಿಯೊ ನೋಡಿದೆ. ಮುಂದಿನ ಪಂದ್ಯದಲ್ಲಿ ನಾನೂ ಅದನ್ನೇ ಮಾಡಬೇಕು ಎಂದುಕೊಂಡಿದ್ದೇನೆ ಎಂದು ಗಿಲ್ ಹಾಸ್ಯಚಟಾಕಿ ಹಾರಿಸಿದರು.
ಅದ್ಭುತ ಪ್ರದರ್ಶನದ ಗುಟ್ಟು ಹಂಚಿಕೊಂಡ ಗಿಲ್
ಪಂದ್ಯ ನಡೆಯುವಾಗ ಬೌಲರ್ಗಳು, ಮೈದಾನದಲ್ಲಿನ ಅಂತರಗಳು (Gaps) ಮತ್ತು ಚೆಂಡನ್ನು ಎಲ್ಲಿ ಹೊಡೆಯಬೇಕು ಎಂಬುದರ ಮೇಲೆ ನನ್ನ ಸಂಪೂರ್ಣ ಗಮನವಿರುತ್ತದೆ. ಬಲವಾಗಿ ಹೊಡೆಯುವ ಬದಲು, ಚೆಂಡು ಎಲ್ಲಿ ಬೀಳುತ್ತದೆ ಎಂಬುದನ್ನು ಗಮನಿಸಿ, ನನ್ನ ವ್ಯಾಪ್ತಿಗೆ ಬರುವ ಚೆಂಡುಗಳನ್ನು ನಿಖರವಾಗಿ ಆಡಲು ಪ್ರಯತ್ನಿಸುತ್ತೇನೆ ಎಂದು ತಮ್ಮ ಈ ಹಿಂದಿನ ಪಂದ್ಯದಲ್ಲಿ ಹೆಚ್ಚಿನ ಸ್ಕೂರ್ ತೆಗೆದಿದ್ದನ್ನು ವಿವರಿಸಿದರು.
ಆಟಗಾರ ಉತ್ತಮ ಫಾರ್ಮ್ನಲ್ಲಿರುವಾಗ ಕೇವಲ 'ಗ್ಯಾಪ್'ಗಳು ಮಾತ್ರ ಕಣ್ಣಿಗೆ ಕಾಣಿಸುತ್ತವೆ. ಬಹುತೇಕ ಎಸೆತ ಚೆಂಡುಗಳು ಬ್ಯಾಟ್ನ ಮಧ್ಯಭಾಗದಿಂದ ಹೊಡೆಯಲ್ಪಡುತ್ತವೆ ಎಂದು ತಮ್ಮ ಅದ್ಭುತ ಪ್ರದರ್ಶನದ ಹಿಂದಿನ ಗುಟ್ಟನ್ನು ಹಂಚಿಕೊಂಡರು. ನಾವು 220 ರನ್ಗಳ ಕಠಿಣ ಗುರಿಯನ್ನು ಬೆನ್ನಟ್ಟಿದೆವು. ಒಂದು ಹಂತದಲ್ಲಿ ಅವರನ್ನು 180-190 ರನ್ಗಳಿಗೆ ನಿಯಂತ್ರಿಸಬಹುದು ಎಂದುಕೊಂಡಿದ್ದೇವೆ. ಆದರೆ ಎದುರಾಳಿ ತಂಡ ದೊಡ್ಡ ಮೊತ್ತ ಕಲೆಹಾಕಿತು. ಉತ್ತಮ ಆರಂಭದ ನಂತರ, ನಾನೇ ಪಂದ್ಯವನ್ನು ಮುಗಿಸಬೇಕು ಎಂದು ಮಾತನಾಡಿಕೊಂಡಿದ್ದೆವು. ಆದರೆ ನಾನು ಔಟಾದ ರೀತಿ ನನಗೆ ಸ್ವಲ್ಪ ಬೇಸರ ತಂದಿದೆ" ಎಂದು ಗಿಲ್ ತಿಳಿಸಿದರು.
"ನಮ್ಮ ತಂಡದಲ್ಲಿ ಅತ್ಯುತ್ತಮ ಬೌಲರ್ಗಳು ಇರುವುದು ನಿಜಕ್ಕೂ ಅದೃಷ್ಟ. 6-7 ಬೌಲಿಂಗ್ ಆಯ್ಕೆಗಳಿದ್ದ ಕಾರಣ ಸಾಯಿ ಸುದರ್ಶನ್ಗೆ ಇಂದು ಒಂದು ಓವರ್ ಕೂಡ ಸಿಗಲಿಲ್ಲ. ನಮ್ಮ ತಂಡದಲ್ಲಿ ಅಂತಿಮ ಹಂತದವರೆಗೂ ಬ್ಯಾಟಿಂಗ್ ಮಾಡುವ ಸಾಮರ್ಥ್ಯವೂ ಇದೆ. ಈಗ ಫೈನಲ್ನಲ್ಲಿ ಎಲ್ಲರೂ ಒಗ್ಗೂಡಿ ಉತ್ತಮ ಪ್ರದರ್ಶನ ನೀಡುವುದು ಮುಖ್ಯ. ಅಂತಿಮ ಪಂದ್ಯದಲ್ಲೂ ನಮ್ಮ ತಂಡ ಹೀಗೆಯೇ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಗಿಲ್ ವಿಶ್ವಾಸ ವ್ಯಕ್ತಪಡಿಸಿದರು.













Click it and Unblock the Notifications