RCB: ಮೊಹಮ್ಮದ್ ಸಿರಾಜ್ ಬಗ್ಗೆ ಆರ್ಸಿಬಿ ಕೋಚ್ ಅಚ್ಚರಿ ಹೇಳಿಕೆ!
ಬುಧವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025ರ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ವಿರುದ್ಧ ಗುಜರಾತ್ ಟೈಟಾನ್ಸ್ 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಹೊರಗಡೆ ಎರಡು ಪಂದ್ಯಗಳನ್ನು ಗೆದ್ದು ತವರಿನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಆರ್ ಸಿಬಿ ಸೋಲು ಕಂಡಿದೆ.
ಅದರಲ್ಲೂ ಆರ್ ಸಿಬಿ ಮಾಜಿ ವೇಗಿ ಮೊಹಮ್ಮದ್ ಸಿರಾಜ್ ಮೊದಲ ಬಾರಿಗೆ ಗುಜರಾತ್ ಟೈಟಾನ್ಸ್ ಪರವಾಗಿ ಆಡುತ್ತಿದ್ದು, ಆರ್ ಸಿಬಿ ವಿರುದ್ಧ 3 ವಿಕೆಟ್ ಪಡೆಯುವ ಮೂಲಕ ಗುಜರಾತ್ ಗೆಲುವಿಗೆ ಪ್ರಮುಖ ಕಾರಣವಾದರು. ಪವರ್ ಪ್ಲೇನಲ್ಲಿ ದೇವದತ್ ಪಡಿಕ್ಕಲ್ ಮತ್ತು ಫಿಲ್ ಸಾಲ್ಟ್ ಪಡೆದು ತಂಡದ ರನ್ ಗಳಿಕೆಗೆ ಕಡಿವಾಣ ಹಾಕಿದರು.

ಸಿರಾಜ್ ಪ್ರದರ್ಶನಕ್ಕೆ ಫ್ಲವರ್ ಮೆಚ್ಚುಗೆ
ಪಂದ್ಯದ ಬಳಿಕ ಮಾತನಾಡಿದ ಆರ್ ಸಿಬಿ ತಂಡದ ಮುಖ್ಯ ಕೋಚ್ ಆಂಡಿ ಫ್ಲವರ್, ಮೊಹಮ್ಮದ್ ಸಿರಾಜ್ ಅವರ ಬೌಲಿಂಗ್ ಪ್ರದರ್ಶನವನ್ನು ಹೊಗಳಿದರು. ಆರ್ಸಿಬಿ ಬಿಡುಗಡೆ ಮಾಡಿದ ನಂತರ ಸಿರಾಜ್ ಮೊದಲ ಬಾರಿಗೆ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಿದರು ಮತ್ತು ಅತ್ಯುತ್ತಮ ಪ್ರದರ್ಶನ ನೀಡಿದರು. ಪಂದ್ಯದಲ್ಲಿ ಸಿರಾಜ್ ಅವರ ಲೈನ್ ಮತ್ತು ಲೆಂತ್ಗಳಿಗಾಗಿ ಫ್ಲವರ್ ಅವರನ್ನು ಶ್ಲಾಘಿಸಿದರು.
ಬಿಡುಗಡೆ ಮಾಡಿದ್ದಕ್ಕೆ ಬೇಸರವಿಲ್ಲ
ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರ್ಸಿಬಿ ಕೋಚ್ ಆಂಡಿ ಫ್ಲವರ್, ಮೊಹಮ್ಮದ್ ಸಿರಾಜ್ ಅವರನ್ನು ಬಿಡುಗಡೆ ಮಾಡಿದರೂ ತಂಡದ ಮೇಲೆ ಏನೂ ಪರಿಣಾಮ ಬೀರಿಲ್ಲ ಎಂದರು. ಆರ್ ಸಿಬಿ ಹರಾಜಿನಲ್ಲಿ ಉತ್ತಮ ಕೆಲಸ ಮಾಡಿದೆ. ತಂಡದಲ್ಲಿರುವ ಬೌಲಿಂಗ್ ಬಗ್ಗೆ ಸಂತೋಷವಾಗಿದೆ ಎಂದು ಹೇಳಿದರು.
ನಾವೆಲ್ಲರೂ ಸಿರಾಜ್ ಅವರನ್ನು ತುಂಬಾ ರೇಟಿಂಗ್ ಮಾಡಿದ್ದೇವೆ ಮತ್ತು ಅವರು ನಮಗೆ ತುಂಬಾ ಪ್ರಿಯರು. ಹರಾಜಿನಲ್ಲಿ ನಾವು ಉತ್ತಮ ಕೆಲಸ ಮಾಡಿದ್ದೇವೆ ಎಂದು ಭಾವಿಸುತ್ತೇವೆ. ಸಿರಾಜ್ಗೆ ಎಲ್ಲಾ ರೀತಿಯ ಯಶಸ್ಸು ಸಿಗಲಿ ಎಂದು ಬಯಸುತ್ತೇನೆ. ನಾವು ಈಗ ಹೊಂದಿರುವ ತಂಡದ ಬಗ್ಗೆ ಸಂತೋಷವಾಗಿದ್ದೇವೆ ಎಂದು ಹೇಳಿದರು.
ಆರ್ಸಿಬಿ ವಿರುದ್ಧ 4 ಓವರ್ ಗಳಲ್ಲಿ 19 ರನ್ ನೀಡಿದ 3 ವಿಕೆಟ್ ಪಡೆಯುವ ಮೂಲಕ ಯಶಸ್ವಿ ಬೌಲರ್ ಎನಿಸಿಕೊಂಡರು. ಫಿಲ್ ಸಾಲ್ಟ್, ಲಿವಿಂಗ್ಸ್ಟೋನ್ ಮತ್ತು ಪಡಿಕ್ಕಲ್ ಅವರ ದೊಡ್ಡ ವಿಕೆಟ್ಗಳನ್ನು ಪಡೆದರು.
ಮೊಹಮ್ಮದ್ ಸಿರಾಜ್ ತುಂಬಾ ಚೆನ್ನಾಗಿ ಬೌಲಿಂಗ್ ಮಾಡಿದರು. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದು ಉತ್ತಮ ಪ್ರದರ್ಶನ ನೀಡಿದ್ದು ಅದ್ಭುತವಾಗಿದೆ. ಹೊಸ ಚೆಂಡಿನೊಂದಿಗೆ ಅವರು ಅತ್ಯುತ್ತಮ ಬೌಲಿಂಗ್ ಮಾಡಿದ್ದಾರೆ. ಉತ್ತಮ ಲೈನ್ ಮತ್ತು ಲೆಂತ್ನಲ್ಲಿ ಬೌಲಿಂಗ್ ಮಾಡಿದರು ಎಂದು ಆಂಡಿ ಫ್ಲವರ್ ಹೇಳಿದರು.
ಭಾವುಕರಾದ ಮೊಹಮ್ಮದ್ ಸಿರಾಜ್
ಪಂದ್ಯದ ಬಳಿಕ ಮಾತನಾಡಿದ ಮೊಹಮ್ಮದ್ ಸಿರಾಜ್, ಪಂದ್ಯದ ಆರಂಭದಲ್ಲಿ ಭಾವುಕರಾಗಿದ್ದಾಗಿ ಹೇಳಿದರು. 7 ವರ್ಷಗಳ ಕಾಲ ಆರ್ ಸಿಬಿ ತಂಡಕ್ಕಾಗಿ ಆಡಿದ್ದು, ಫ್ರಾಂಚೈಸಿ ಜೊತೆ ಭಾವನಾತ್ಮಕ ಸಂಬಂಧ ಹೊಂದಿರುವುದಾಗಿ ತಿಳಿಸಿದರು. "ನಾನು ಸ್ವಲ್ಪ ಭಾವುಕನಾಗಿದ್ದೆ. ನಾನು 7 ವರ್ಷಗಳ ಕಾಲ ಇಲ್ಲಿದ್ದೆ, ಜೆರ್ಸಿಯನ್ನು ಕೆಂಪು ಬಣ್ಣದಿಂದ ನೀಲಿ ಬಣ್ಣಕ್ಕೆ ಬದಲಾಯಿಸಿದೆ, ಆದರೆ ಬೌಲಿಂಗ್ ಮಾಡಲು ಆರಂಭಿಸಿದ ಬಳಿಕ ಸಹಜ ಸ್ಥಿತಿಗ ಎಮರಳಿದೆ. ವಿರಾಮದ ಸಮಯದಲ್ಲಿ ನಾನು ನನ್ನ ತಪ್ಪುಗಳನ್ನು ಸರಿಪಡಿಸಿಕೊಂಡೆ ಮತ್ತು ನನ್ನ ಫಿಟ್ನೆಸ್ನಲ್ಲಿ ಕೆಲಸ ಮಾಡಿದೆ" ಎಂದು ಸಿರಾಜ್ ಹೇಳಿದರು.












Click it and Unblock the Notifications