ಕೊಹ್ಲಿ, ರೋಹಿತ್ ನಂತರ ಟಿ20 ಕ್ರಿಕೆಟ್ಗೆ ವಿದಾಯ ಹೇಳಿದ ರವೀಂದ್ರ ಜಡೇಜಾ
17 ವರ್ಷಗಳ ಬಳಿಕ ಭಾರತ ತಂಡ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದೆ. ಭಾರತ ತಂಡದ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ಇರುವಾಗಲೇ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ವಿದಾಯ ಹೇಳುವ ಮೂಲಕ ಶಾಕ್ ಕೊಟ್ಟಿದ್ದರು. ಈಗ ರವೀಂದ್ರ ಜಡೇಜಾ ಕೂಡ ವಿದಾಯ ಹೇಳಿದ್ದಾರೆ.
ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ರವೀಂದ್ರ ಜಡೇಜಾ ನಿವೃತ್ತಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಮೂರನೇ ದಿಗ್ಗಜ ಆಟಗಾರ ವಿದಾಯ ಹೇಳಿದಂತಾಗಿದೆ.

"ಹೃದಯ ತುಂಬಿದ ಕೃತಜ್ಞತೆಯೊಂದಿಗೆ, ನಾನು ಟಿ20 ಅಂತರಾಷ್ಟ್ರೀಯ ಪಂದ್ಯಗಳಿಗೆ ವಿದಾಯ ಹೇಳುತ್ತೇನೆ. ಹೆಮ್ಮೆಯಿಂದ ಓಡುವ ದೃಢವಾದ ಕುದುರೆಯಂತೆ, ನಾನು ಯಾವಾಗಲೂ ನನ್ನ ದೇಶಕ್ಕಾಗಿ ಅತ್ಯುತ್ತಮವಾದದ್ದನ್ನು ನೀಡಿದ್ದೇನೆ ಮತ್ತು ಇತರ ಸ್ವರೂಪಗಳಲ್ಲಿ ಅದನ್ನು ಮುಂದುವರಿಸುತ್ತೇನೆ.
ಟಿ 20 ವಿಶ್ವಕಪ್ ಗೆಲ್ಲುವುದು ನನ್ನ ಕನಸು ನನಸಾಗಿದೆ, ಇದು ನನ್ನ ಟಿ 20 ಅಂತರರಾಷ್ಟ್ರೀಯ ವೃತ್ತಿಜೀವನದ ಉತ್ತುಂಗವಾಗಿದೆ. ಬೆಂಬಲಕ್ಕಾಗಿ ಧನ್ಯವಾದಗಳು." ಎಂದು ರವೀಂದ್ರ ಜಡೇಜಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೇಳಿದ್ದಾರೆ.
35 ವರ್ಷದ ಜಡೇಜಾ ಈವರೆಗೂ 74 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ್ದಾರೆ. 41 ಇನ್ನಿಂಗ್ಸ್ಗಳಲ್ಲಿ 515 ರನ್ ಗಳಿಸಿದ್ದಾರೆ. 54 ವಿಕೆಟ್ ಪಡೆದಿರುವ ಅವರು ಭಾರತ ತಂಡದ ಪ್ರಮುಖ ಆಲ್ರೌಂಡರ್ ಗಳಲ್ಲಿ ಒಬ್ಬರಾಗಿದ್ದಾರೆ.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ಮಾತ್ರ ವಿದಾಯ ಹೇಳಿದ್ದು, ಐಪಿಎಲ್ನಲ್ಲಿ ಜಡೇಜಾ ಆಡಲಿದ್ದಾರೆ. ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ ಕೂಡ ಅವರ ಆಟ ಮುಂದುವರೆಯಲಿದೆ. ಟಿ20 ವಿಶ್ವಕಪ್ ಗೆದ್ದ ಖುಷಿಯಲ್ಲಿರುವ ಭಾರತ ತಂಡದ ಅಭಿಮಾನಿಗಳಿಗೆ ಪ್ರಮುಖ ಆಟಗಾರರು ವಿದಾಯ ಹೇಳುತ್ತಿರುವುದು ಬೇಸರ ತಂದಿದೆ.
ಪ್ರಧಾನಿ ನರೇಂದ್ರ ಮೋದಿ ಟ್ವಿಟ್
ರವೀಂದ್ರ ಜಡೇಜಾ ನಿವೃತ್ತಿ ಘೋಷಣೆ ಮಾಡುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಕೂಟ ಟ್ವೀಟ್ ಮಾಡಿದ್ದು ಶುಭಾಶಯ ಕೋರಿದ್ದಾರೆ. "ಪ್ರೀತಿಯ ರವೀಂದ್ರ ಜಡೇಜಾ, ನೀವು ಆಲ್ ರೌಂಡರ್ ಆಗಿ ಅಸಾಧಾರಣ ಪ್ರದರ್ಶನ ನೀಡಿದ್ದೀರಿ. ಕ್ರಿಕೆಟ್ ಪ್ರೇಮಿಗಳು ನಿಮ್ಮ ಸ್ಟೈಲಿಶ್ ಆಟ, ಸ್ಪಿನ್ ಮತ್ತು ಅತ್ಯುತ್ತಮ ಫೀಲ್ಡಿಂಗ್ ಅನ್ನು ಮೆಚ್ಚುತ್ತಾರೆ. ರೋಮಾಂಚನಕಾರಿ ಟಿ20 ಪ್ರದರ್ಶನಗಳಿಗೆ ಧನ್ಯವಾದಗಳು. ನಿಮ್ಮ ಮುಂದಿನ ಜೀವನಕ್ಕೆ ನನ್ನ ಶುಭಾಶಯಗಳು." ಎಂದು ಹೇಳಿದ್ದಾರೆ.












Click it and Unblock the Notifications