ರೈತ ದಸರಾ 2022: ಕೆಸರು ಗದ್ದೆಯಲ್ಲಿ ಬಿದ್ದರು, ಕಾಲುಕಟ್ಟಿಕೊಂಡು ಓಡಿ ಗೆದ್ದರು
ಮೈಸೂರು, ಅಕ್ಟೋಬರ್ 1: ಗೋಣಿ ಚೀಲದೊಳಗೆ ಕಾಲಿಟ್ಟು ಜಿಂಕೆಯಂತೆ ಎಗರಿ, ಎಗರಿ ಓಡುವ ಸ್ಪರ್ಧಿಗಳು ಒಂದೆಡೆಯಾದರೆ, ಇಬ್ಬರು ಜೊತೆಗಾರರು ತಮ್ಮ ಒಂದೊಂದು ಕಾಲಿಗೆ ಹಗ್ಗ ಕಟ್ಟಿಕೊಳ್ಳುವ ಮೂಲಕ ಜಿಗಿದು ಜೊತೆಗಾರನನ್ನು ಎಳೆದುಕೊಂಡು ಓಡುವ ಸ್ಪರ್ಧೆಯ ಮೂಲಕ ನೆರೆದಿದ್ದವರನ್ನು ಮೋಡಿ ಮಾಡಿತು.
ನಗರದ ಒವೆಲ್ ಮೈದಾನದಲ್ಲಿ ರೈತ ದಸರಾ ಅಂಗವಾಗಿ ಏರ್ಪಡಿಸಲಾಗಿದ್ದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಮಹಿಳೆಯರು ಮತ್ತು ಪುರುಷರಿಗಾಗಿ ನಾಲ್ಕು ಹಂತದಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಅದರಂತೆ ಜಿಲ್ಲಾ ಉಸ್ತುವಾರಿ ಮತ್ತು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಬಲೂನ್ ಹಾರಿ ಬಿಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮೈಸೂರು ಅರಮನೆ; ಇತಿಹಾಸ, ನಿರ್ಮಾಣ ಖರ್ಚು, ವಿನ್ಯಾಸ ಸೇರಿದಂತೆ ಸಂಪೂರ್ಣ ವಿವರ ಇಲ್ಲಿದೆ
ಮೊದಲಿಗೆ ಕೆಸರು ಗದ್ದೆ ಓಟ, ಗೊಬ್ಬರ ಮೂಟೆ ಹೊತ್ತು ಓಡುವ ಸ್ಪರ್ಧೆ, ಗೋಣಿ ಚೀಲದ ಒಳಗೆ ಕಾಲಿಟ್ಟು ಓಡುವುದು, ಮೂರು ಕಾಲಿನ ಓಟದ ಸ್ಪರ್ಧೆಯನ್ನು ಪುರುಷರಿಗಾಗಿ ಏರ್ಪಡಿಸಲಾಗಿದ್ದರೆ, ಇತ್ತ ಮಹಿಳಾ ಸ್ಪರ್ಧಿಗಳಿಗಾಗಿ ಕೆಸರು ಗದ್ದೆ ಓಟದ ಸ್ಪರ್ಧೆ, ಒಂಟಿ ಕಾಲಿನ ಓಟ, ನೀರಿನ ಬಿಂದಿಗೆ ಹೊತ್ತು ಓಡುವ ಸ್ಪರ್ಧೆ, ಗೋಣಿ ಚೀಲದ ಒಳಗೆ ಕಾಲಿಟ್ಟು ಓಡುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಸ್ಪರ್ಧೆಗಳಲ್ಲಿ ವಿಜೇತರ ಪಟ್ಟಿ ಇಂತಿದೆ
ಕೆಸರು ಗದ್ದೆ ಓಟದ ಮಹಿಳಾ ವಿಭಾಗದಲ್ಲಿ ಪಿರಿಯಾಪಟ್ಟಣ ತಾಲ್ಲೂಕಿನ ಶಿಲ್ಪಶ್ರೀ, ತಿ.ನರಸೀಪುರ ತಾಲ್ಲೂಕಿನ ಮಾಲಿನಿ ದ್ವಿತೀಯ, ಶೋಭಾ ಆರ್ ತೃತೀಯ ಸ್ಥಾನ ಗಳಿಸಿಕೊಂಡರೆ, ಪುರುಷ ವಿಭಾಗದ ಕೆಸರು ಗದ್ದೆ ಓಟದ ಸ್ಪರ್ಧೆಯಲ್ಲಿ ನಂಜನಗೂಡು ತಾಲ್ಲೂಕಿನ ಅಭಿಷೇಕ್ ಕೆ. ತಿ.ನರಸೀಪುರ ತಾಲ್ಲೂಕಿನ ಮನೋಜ್ ಕುಮಾರ್ ದ್ವಿತೀಯ, ಸುಹಾಸ್ ತೃತೀಯ ಸ್ಥಾನ ಪಡೆದುಕೊಂಡರು.
ಪುರುಷರ ವಿಭಾಗದ ಮೂರು ಕಾಲಿನ ಓಟದ ಸ್ಪರ್ಧೆಯಲ್ಲಿ ನಂಜನಗೂಡು ತಾಲ್ಲೂಕಿನ ಉಮೇಶ್ ಮತ್ತು ಮಹೇಶ್ ಜೋಡಿಗಳು ಪ್ರಥಮ, ತಿ.ನರಸೀಪುರ ತಾಲ್ಲೂಕಿನ ಮನೋಜ್ ಕುಮಾರ್ ಮತ್ತು ಲೋಹಿತ್ ಜೋಡಿ ದ್ವಿತೀಯ, ಮೈಸೂರು ತಾಲ್ಲೂಕಿನ ಕೆ.ಶಿವಶಂಕರ್ ಮತ್ತು ಚಂದ್ರಶೇಖರ್ ತೃತೀಯ ಸ್ಥಾನ ಪಡೆದುಕೊಂಡರೆ, ಗೋಣಿ ಚೀಲ ಓಟದ ಸ್ಪರ್ಧೆಯಲ್ಲಿ ತಿ.ನರಸೀಪುರ ತಾಲ್ಲೂಕಿನ ಮನೋಜ್ ಕುಮಾರ್ ಪ್ರಥಮ, ಹುಣಸೂರು ತಾಲ್ಲೂಕಿನ ಗುರುಮೂರ್ತಿ ದ್ವಿತೀಯ, ಆರ್. ಉಮೇಶ್ ತೃತೀಯ ಸ್ಥಾನಗಳನ್ನು ಗಿಟ್ಟಿಸಿಕೊಂಡರು.
ಗೊಬ್ಬರದ ಮೂಟೆ ಹೊತ್ತು ಓಡುವ ಸ್ಪರ್ಧೆಯಲ್ಲಿ ಹುಣಸೂರು ತಾಲ್ಲೂಕಿನ ಗುರುಮೂರ್ತಿ ಪ್ರಥಮ, ನಂಜನಗೂಡಿನ ಎನ್.ಮನು, ತಿ.ನರಸೀಪುರ ತಾಲ್ಲೂಕಿನ ಮನೋಜ್ ಕುಮಾರ್ ತೃತೀಯ ಸ್ಥಾನಕ್ಕೆ ತೃಪ್ತಿಕೊಂಡರು.
ಮಹಿಳಾ ಸ್ಪರ್ಧೆಗಳ ವಿಜೇತರು
ಮಹಿಳಾ ವಿಭಾಗದ ಗೋಣಿ ಚೀಲದೊಳಗೆ ಕಾಲಿಟ್ಟು ಓಡುವ ಸ್ಪರ್ಧೆಯಲ್ಲಿ ಸರಗೂರು ತಾಲ್ಲೂಕಿನ ಸುಚಿತ್ರ ಪ್ರಥಮ, ಪಿರಿಯಾಪಟ್ಟಣ ತಾಲ್ಲೂಕಿನ ಮಾಲಿನಿ ದ್ವಿತೀಯ, ನಂಜನಗೂಡು ತಾಲ್ಲೂಕಿನ ರಶ್ಮಿ ತೃತೀಯ ಸ್ಥಾನವನ್ನು ಗಳಿಸಿಕೊಂಡರು.
ಒಂಟಿ ಕಾಲಿನ ಓಟ ಸ್ಪರ್ಧೆಯಲ್ಲಿ ನಂಜನಗೂಡಿನ ರಶ್ಮಿ ಪ್ರಥಮ, ಪಿರಿಯಾಪಟ್ಟಣ ತಾಲ್ಲೂಕಿನ ಕಾವ್ಯ ದ್ವಿತೀಯ, ಪಿರಿಯಾಪಟ್ಟಣ ತಾಲ್ಲೂಕಿನ ಶೀಲಾ ತೃತೀಯ ಸ್ಥಾನ ಗಳಿಸಿಕೊಂಡರು. ನೀರಿನ ಬಿಂದಿಗೆ ಹೊತ್ತು ಓಡುವ ಸ್ಪರ್ಧೆಯಲ್ಲಿ ಸರಗೂರಿನ ಸುಚಿತ್ರ ಪ್ರಥಮ, ನಂಜನಗೂಡಿನ ರಶ್ಮಿ ದ್ವಿತೀಯ, ಪಿರಿಯಾಪಟ್ಟಣ ಮಾಲಿನಿ ತೃತೀಯ ಸ್ಥಾನ ಗಳಿಸಿಕೊಂಡರು.