Champions Trophy: ಪಾಕಿಸ್ತಾನದಲ್ಲಿ ಆಡಲು ಭಯಗೊಂಡ ಆಟಗಾರರು!
ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆ ಇನ್ನು ಕೆಲವೇ ದಿನಗಳ ಬಾಕಿ ಇದೆ. ಪಾಕಿಸ್ತಾನ ಈ ಬಾರಿ ಚಾಂಪಿಯನ್ಸ್ ಟ್ರೋಫಿ ಆಯೋಜನೆ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಲಾಹೋರ್, ಕರಾಚಿ ಮತ್ತು ರಾವಲ್ಪಿಂಡಿಯಲ್ಲಿ ಪಂದ್ಯಗಳು ನಡೆಯಲಿದ್ದು ಎಲ್ಲಾ ಕ್ರೀಡಾಂಗಣಗಳನ್ನು ನವೀಕರಣ ಮಾಡಿದೆ.
ಕ್ರೀಡಾಂಗಣ ಸಜ್ಜಾಗಿದೆ ಎಂದು ತೋರಿಸಲು ಚಾಂಪಿಯನ್ಸ್ ಟ್ರೋಫಿಗೆ ಮುನ್ನ ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ತ್ರಿಕೋನ ಸರಣಿ ಆಯೋಜಿಸಿದೆ. ಶನಿವಾರ ಸರಣಿಯ ಮೊದಲ ಪಂದ್ಯ ನಡೆದಿದ್ದು, ಇದೀಗ ಬೇರೆ ತಂಡಗಳಿಗೆ ಹೊಸ ತಲೆನೋವು ಶುರುವಾಗಿದೆ.

ಶನಿವಾರ ನಡೆದ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ರಚಿನ್ ರವೀಂದ್ರ ಗಾಯಗೊಂಡಿದ್ದಾರೆ. ಕ್ರೀಡಾಂಗಣದ ಅವ್ಯವಸ್ಥೆಯೇ ಅವರು ಗಾಯಗೊಳ್ಳಲು ಪ್ರಮುಖ ಕಾರಣ ಎನ್ನುವ ಆರೋಪ ಕೂಡ ಕೇಳಿಬಂದಿದೆ.
ಮುಖಕ್ಕೆ ತಗುಲಿದ ಚೆಂಡು
ಲಾಹೋರ್ ನ ಗಡಾಫಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಈ ದುರದೃಷ್ಟಕರ ಘಟನೆಯೊಂದು ನಡೆದಿದೆ. ಪಂದ್ಯ ಇನ್ನೇನು ಮುಗಿಯುವ ಹಂತದಲ್ಲಿತ್ತು, ಎರಡನೇ ಇನ್ನಿಂಗ್ಸ್ನ 38 ನೇ ಓವರ್ನಲ್ಲಿ, ಖುಷ್ದಿಲ್ ಶಾ ಮೈಕೆಲ್ ಬ್ರೇಸ್ವೆಲ್ ಅವರನ್ನು ಡೀಪ್ ಬ್ಯಾಕ್ವರ್ಡ್ ಸ್ಕ್ವೇರ್ ಲೆಗ್ ಕಡೆಗೆ ಸ್ವೀಪ್ ಮಾಡಿದರು. ಚೆಂಡು ರಚಿನ್ ರವೀಂದ್ರ ಕಡೆಗೆ ಸಾಗಿತು, ಅದು ಸುಲಭ ಕ್ಯಾಚ್ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ರಚಿನ್ ರವೀಂದ್ರಗೆ ಚೆಂಡು ಕಾಣಲೇ ಇಲ್ಲ, ಅದು ಸೀದಾ ಹೋಗಿ ಅವರ ಮುಖಕ್ಕೆ ಬಡಿಯಿತು.
ಚೆಂಡನ್ನು ಹಿಡಿಯುವ ಒಂದು ಸೆಕೆಂಡ್ ಮೊದಲು, ರಚಿನ್ ಅದನ್ನು ನೋಡಲು ತಡಕಾಡಿದರು. ಅವರಿಗೆ ಚೆಂಡು ಎಲ್ಲಿದೆ ಎಂದು ತಿಳಿಯುವ ಮುನ್ನವೇ ಹಣೆಗೆ ಪೆಟ್ಟು ಬಿದ್ದಿತು. ತಕ್ಷಣ ರಕ್ತ ಸುರಿಯಲು ಪ್ರಾರಂಭಿಸಿತು. ಮೈದಾನ ಮತ್ತು ಸ್ಟ್ಯಾಂಡ್ನಲ್ಲಿದ್ದ ಎಲ್ಲರೂ ಆಘಾತಕ್ಕೆ ಒಳಗಾದರು.ಪಿಸಿಬಿ ವಿರುದ್ಧ ಆರೋಪ
ರಚಿನ್ ರವೀಂದ್ರ ಅವರ ಅದೃಷ್ಟ ಚನ್ನಾಗಿದ್ದರಿಂದ ಚೆಂಡು ಅವರ ಕಣ್ಣಿಗೆ ತಾಗಲಿಲ್ಲ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯೇ ಈ ಘಟನೆಗೆ ಕಾರಣ ಎಂದು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೈದಾನ ನವೀಕರಣ ಮಾಡುವ ಸಮಯದಲ್ಲಿ ಹೊಸ ಫ್ಲಡ್ಲೈಟ್ಗಳನ್ನು ಅಳವಡಿಸಲಾಗಿದ್ದು ಇದರಿಂದಲೇ ರಚಿನ್ ರವೀಂದ್ರ ಅವರಿಗೆ ಚೆಂಡನ್ನು ನೋಡಲು ಆಗಿಲ್ಲ ಎಂದು ಹಲವರು ಆರೋಪಿಸಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಚಾಂಪಿಯನ್ಸ್ ಟ್ರೋಫಿ ಆಯೋಜನೆ ಮಾಡಲು ಗಡಾಫಿ ಕ್ರೀಡಾಂಗಣವನ್ನು ನವೀಕರಣ ಮಾಡಿದೆ. ಹೊಸ ಎಲ್ಇಡಿ ದೀಪಗಳನ್ನು ಅಳವಡಿಸಲಾಗಿದ್ದು, ನವೀಕರಣವಾದ ಬಳಿಕ ಇದು ಮೊದಲ ಪಂದ್ಯವಾಗಿದ್ದು, ಮೊದಲ ಪಂದ್ಯದಲ್ಲೇ ಇಂತಹ ಘಟನೆ ನಡೆದಿದೆ.
ಪಾಕಿಸ್ತಾನದ ಮಾಜಿ ನಾಯಕ ಲತೀಫ್ ಕ್ರೀಡಾಂಗಣದಲ್ಲಿ ಅಳವಡಿಸಿರುವ ಎಲ್ಇಡಿ ದೀಪಗಳೇ ಘಟನೆಗೆ ಕಾರಣವಾಗಿರಬಹುದು ಎಂದು ಹೇಳಿದ್ದಾರೆ. ಎಲ್ಇಡಿ ದೀಪಗಳು ಹೆಚ್ಚು ಹೊಳೆಯುತ್ತವೆ, ಆದ್ದರಿಂದ ಚೆಂಡು ಕಣ್ಣಿನ ನೇರಕ್ಕೆ ಬರುವಾಗ ನೋಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.
ಚಾಂಪಿಯನ್ಸ್ ಟ್ರೋಫಿಗಾಗಿ ತರಾತುರಿಯಲ್ಲಿ ಕ್ರೀಡಾಂಗಣವನ್ನು ನವೀಕರಣ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿತಾ ಎನ್ನುವ ಅನುಮಾನ ಶುರುವಾಗಿದ್ದು, ಮುಂದಿನ ಪಂದ್ಯದಲ್ಲಿ ಕೂಡ ಆಟಗಾರರು ಇದೇ ಸಮಸ್ಯೆಯನ್ನು ಎದುರಿಸಿದರೆ ಪಿಸಿಬಿಗೆ ಹೊಸ ತಲೆನೋವು ಶುರುವಾಗುವುದು ಖಂಡಿತ.












Click it and Unblock the Notifications