Breaking News: ಟಿ20 ವಿಶ್ವಕಪ್ 2022ಕ್ಕೆ ವೇಗಿ ಬೂಮ್ರಾ ಅಲಭ್ಯ
ಮುಂಬೈ, ಅ.3: ಅಕ್ಟೋಬರ್ 16ರಿಂದ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಜಸ್ಪ್ರೀತ್ ಬುಮ್ರಾ ಆಡಲು ಸಾಧ್ಯವಾಗುವುದಿಲ್ಲ ಎಂದು ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ಮಾಡಿದ್ದ ವರದಿ ಇದೀಗ ಅಧಿಕೃತವಾಗಿದೆ. ಸೋಮವಾರ (ಅ.3)ದಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ವೈದ್ಯಕೀಯ ತಂಡದ ವರದಿಯಂತೆ ಪ್ರಮುಖ ವೇಗಿ ಜಸ್ ಪ್ರೀತ್ ಬೂಮ್ರಾ ಅವರು 2022ರ ಟಿ20 ವಿಶ್ವಕಪ್ ಟೂರ್ನಮೆಂಟ್ ಗೆ ಅಲಭ್ಯರಾಗಿದ್ದಾರೆ.
ಜಸ್ಪ್ರೀತ್ ಬುಮ್ರಾ ಅವರಿಗೆ ಬ್ಯಾಕ್ ಸ್ಟ್ರೆಸ್ ಫ್ರಾಕ್ಚರ್ ಆಗಿದ್ದು, ಚೇತರಿಸಿಕೊಳ್ಳುತ್ತಿದ್ದರು. ವೈದ್ಯಕೀಯ ತಂಡದ ಪರೀಕ್ಷೆ ಬಳಿಕ ತನ್ನ ಅಂತಿಮ ವರದಿ ಸಲ್ಲಿಸಿದ್ದು, ಬೂಮ್ರಾ ತಮ್ಮ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳಲು ಕನಿಷ್ಠ ಆರು ತಿಂಗಳಾದರೂ ಬೇಕು ಎನ್ನಲಾಗಿದೆ. ಸದ್ಯ ಬೂಮ್ರಾ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಅವರು ಆಡಬೇಕಿದ್ದ ಬೂಮ್ರಾ ಅವರು ಗಾಯದ ಕಾರಣ ಅವರು ಹೊರಗುಳಿಯಬೇಕಾಯಿತು. ವೈದ್ಯರ ಸಲಹೆ ಮೇರೆಗೆ ಎನ್ಸಿಎ ಅಕಾಡೆಮಿಗೆ ಬಂದಿದ್ದಾರೆ. ಆದರೆ, ಒಂದೆರಡು ವಾರದಲ್ಲಿ ಅವರ ಚೇತರಿಕೆ ಸಾಧ್ಯವೇ ಇಲ್ಲ ಎಂದು ಎನ್ಸಿಎಯಲ್ಲಿರುವ ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಜಸ್ಪ್ರೀತ್ ಬುಮ್ರಾ ಟಿ20 ವಿಶ್ವಕಪ್ನಲ್ಲಿ ಆಡದೇ ಇರುವುದು ಭಾರತ ತಂಡಕ್ಕೆ ಹಿನ್ನಡೆ ಎಂಬುದೇನೋ ಹೌದು. ಆದರೆ, ಭಾರತದ ಬೌಲಿಂಗ್ ಬ್ಯಾಕಪ್ ಉತ್ತಮವಾಗಿದೆ. ಮೊಹಮ್ಮದ್ ಶಮಿ ಮತ್ತು ದೀಪಕ್ ಚಾಹರ್ ಅವರು ಸ್ಟ್ಯಾಂಡ್ಬೈ ಅಗಿ ಲಭ್ಯ ಇದ್ದಾರೆ. ಇಬ್ಬರಲ್ಲಿ ಒಬ್ಬರಿಗೆ ಅವಕಾಶ ಸಿಗಬಹುದು. ಬಿಸಿಸಿಐ ಮೂಲಗಳ ಪ್ರಕಾರ ಮೊಹಮ್ಮದ್ ಶಮಿ ಅವರಿಗೆ ಆಡುವ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ.
ಬ್ಯಾಕ್ ಸ್ಟ್ರೆಸ್ ಫ್ರ್ಯಾಕ್ಚರ್ ಏನು?:
ಜಸ್ಪ್ರೀತ್ ಬುಮ್ರಾ ಅವರಿಗೆ ಬ್ಯಾಕ್ ಸ್ಟ್ರೆಸ್ ಫ್ರ್ಯಾಕ್ಚರ್ ಆಗಿದೆ. ಬೆನ್ನು ಮೂಳೆ ಮುರಿತದ ಗಾಯ. ಸ್ಟ್ರೆಸ್ ಫ್ರ್ಯಾಕ್ಚರ್ ಎಂದರೆ ಮೂಳೆಯಲ್ಲಿ ಬಹಳ ಸೂಕ್ಷ್ಮ ಬಿರುಕು ಬಿಡುವುದು. ಅಥ್ಲೀಟ್ಗಳಲ್ಲಿ, ಅದರಲ್ಲೂ ದೂರದ ಓಟ ಓಡುವ ಅಥ್ಲೀಟ್ಗಳಲ್ಲಿ ಇಂಥ ಇಂಜುರಿ ಹೆಚ್ಚು. ಪಾದ, ಕುಂಡಿ, ಮುಂಗಾಲು, ಕೆಳಬೆನ್ನು ಇಲ್ಲಿ ಸ್ಟ್ರೆಸ್ ಇಂಜುರಿಗಳು ಹೆಚ್ಚು. ಇಂಥ ಗಾಯಗಳಾದಾಗ ಶೀಘ್ರ ಉಪಶಮನ ಅಸಾಧ್ಯ. ವಿಶ್ರಾಂತಿಯೇ ಇದಕ್ಕೆ ಪರಮ ಚಿಕಿತ್ಸೆ.
ಮೂಳೆ ತನ್ನಂತಾನೆ ಕೂಡಿಕೊಳ್ಳುವವರೆಗೂ ವಿಶ್ರಾಂತಿಯಲ್ಲಿರಬೇಕು. ಆ ಗಾಯಕ್ಕೆ ಒತ್ತಡ ಬೀಳದ ಚಟುವಟಿಕೆಗಳನ್ನು ನಡೆಸಬಹುದು. ಅಥವಾ ಬೆನ್ನುಮೂಳೆಯ ಜಾಗವನ್ನು ಶಕ್ತಿಯುತಗೊಳಿಸುವಂಥ ಚಟುವಟಿಕೆ ಮಾಡಬಹುದು. ಉದಾಹರಣೆಗೆ, ಸೈಕ್ಲಿಂಗ್, ಸ್ವಿಮ್ಮಿಂಗ್ ಮಾಡಬಹುದು. ಸ್ಟ್ರೆಂತ್ ಟ್ರೈನಿಂಗ್ನಲ್ಲಿ ತೊಡಗಬಹುದು. ಇದಲ್ಲದೇ ಕ್ರಿಕೆಟ್ ಆಟದ ವೇಳೆ ಸಾಮಾನ್ಯವಾಗಿ ಆಗುವ ಗಾಯ ಹಲವಿವೆ. ಅದರಲ್ಲಿ ಪ್ರಮುಖವಾದ ಕೆಲವು ಗಾಯಗಳಲ್ಲಿ ಹ್ಯಾಮ್ಸ್ಟ್ರಿಂಗ್, ಭುಜ ಗಾಯ, ಪಾದಗಂಟು ಮೊದಲಾದವು.
ಟಿ20 ವಿಶ್ವಕಪ್ 2022ಗಾಗಿ ಟೀಂ ಇಂಡಿಯಾ:
ರೋಹಿತ್ ಶರ್ಮ(ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಬ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಯಜುವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್ ಹಾಗೂ ಅರ್ಷ್ ದೀಪ್ ಸಿಂಗ್.
ಒಟ್ಟು 8 ತಂಡಗಳು ಈಗಾಗಲೇ ನೇರವಾಗಿ ಸೂಪರ್-12 ಹಂತದಲ್ಲಿವೆ. ಆಸ್ಟ್ರೇಲಿಯಾ, ಭಾರತ, ಪಾಕಿಸ್ತಾನ, ಸೌತ್ ಆಫ್ರಿಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಇಂಗ್ಲೆಂಡ್, ನ್ಯೂಜಿಲೆಂಡ್ ತಂಡಗಳ ಹಾಗೂ ಗ್ರೂಪ್ ಹಂತದಿಂದ ಬಂದ 4 ತಂಡಗಳು ಹೀಗೆ 12 ತಂಡಗಳು ಸೂಪರ್-12ನಲ್ಲಿ ಸೆಣಸಲಿವೆ.












Click it and Unblock the Notifications