ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಐಪಿಎಲ್ ತೊರೆಯಲು ಸಿದ್ಧರಿದ್ದಾರೆ; ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಅಚ್ಚರಿ ಹೇಳಿಕೆ
Kohli And Rohit: ಈಗಾಗಲೇ ಟೀಮ್ ಇಂಡಿಯಾ ಕ್ರಿಕೆಟ್ ದಿಗ್ಗಜರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರು ಅಂತಾರಾಷ್ಟ್ರೀಯ ಟಿ20 ಹಾಗೂ ಏಕದಿನ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಇವರು ಇದೀಗ ಐಪಿಎಲ್ಗೂ ನಿವೃತ್ತಿ ಘೋಷಿಸಲಿದ್ದಾರೆ ಎನ್ನುವ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿವೆ. ಈ ನಡುವೆವೇ ಈ ಇಬ್ಬರ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಮುನಾಫ್ ಪಟೇಲ್ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಭಾರತದ ಮಾಜಿ ಕ್ರಿಕೆಟಿಗ ಮುನಾಫ್ ಪಟೇಲ್ ಅವರು, ಹಿರಿಯ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ "ಭಾರತ ಮೊದಲು" ಎಂಬ ಮನೋಭಾವವನ್ನು ಶ್ಲಾಘಿಸಿದ್ದಾರೆ. ಈ ಇಬ್ಬರು ಆಟಗಾರರ ಭವಿಷ್ಯದ ಬಗ್ಗೆ ಹಲವಾರು ಚರ್ಚೆಗಳು ನಡೆಯುತ್ತಿರುವ ನಡುವೆಯೇ ಮುನಾಫ್ ಈ ಪ್ರತಿಕ್ರಿಯೆ ನೀಡಿದ್ದಾರೆ.

"ಐಪಿಎಲ್ ತೊರೆಯಲು ಸಿದ್ಧರಿದ್ದಾರೆ"
ವಿರಾಟ್ ಮತ್ತು ರೋಹಿತ್ ಅವರಿಗೆ ದೇಶಕ್ಕಾಗಿ ಆಡುವುದೇ ಮೊದಲ ಆದ್ಯತೆಯಾಗಿದೆ. ಇದಕ್ಕಾಗಿ ಅವರು ಐಪಿಎಲ್ ತೊರೆಯಲು ಕೂಡ ಸಿದ್ಧರಿದ್ದಾರೆ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ. ಈಗಾಗಲೇ ಟೆಸ್ಟ್ ಮತ್ತು ಟಿ20 ಕ್ರಿಕೆಟ್ನಿಂದ ನಿವೃತ್ತಿ ಪಡೆದಿದ್ದರೂ, ಏಕದಿನ ಕ್ರಿಕೆಟ್ನಲ್ಲಿ ಭಾರತವನ್ನು ಪ್ರತಿನಿಧಿಸಲು ಈ ಇಬ್ಬರೂ ಬದ್ಧರಾಗಿದ್ದಾರೆ.
ಮುಂದಿನ ವರ್ಷ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ಗೆ ಸಜ್ಜಾಗಲು, ಮ್ಯಾಚ್ ಫಿಟ್ನೆಸ್ ಕಾಪಾಡಿಕೊಳ್ಳಲು ಕಳೆದ ವರ್ಷ ಅವರು ವಿಜಯ್ ಹಜಾರೆ ಟ್ರೋಫಿಯಲ್ಲೂ ಭಾಗವಹಿಸಿದ್ದರು. ಅಲ್ಲದೆ, 2011ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಮುನಾಫ್ ಪಟೇಲ್, ಈ ಹಿರಿಯ ಆಟಗಾರರ ಬದ್ಧತೆಯು ಯುವ ಆಟಗಾರರಿಗೆ ಮಾದರಿ ಎಂದು ಹೇಳಿದ್ದಾರೆ.
"ದೇಶಕ್ಕೆ ಮೊದಲ ಆದ್ಯತೆ ನೀಡುತ್ತಾರೆ"
"ನಾನು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಹತ್ತಿರದಿಂದ ನೋಡಿದ್ದೇನೆ. ಅವರು ಯಾವಾಗಲೂ ದೇಶಕ್ಕೆ ಮೊದಲ ಆದ್ಯತೆ ನೀಡುತ್ತಾರೆ. ಅಗತ್ಯವಿದ್ದರೆ ಅವರು ಐಪಿಎಲ್ ಅನ್ನು ತೊರೆಯಬಹುದು. ಆದರೆ, ಅವರು ಎಂದಿಗೂ ಭಾರತೀಯ ತಂಡವನ್ನು ಬಿಡುವುದಿಲ್ಲ," ಎಂದು ಮುನಾಫ್ ಪಟೇಲ್ ಹೇಳಿದ್ದಾರೆ ಅಂತಾ ವರದಿಯಾಗಿದೆ. ಇನ್ನೂ ಈ ಹೇಳಿಕೆಯೂ ಟೀಮ್ ಇಂಡಿಯಾದ ಈ ಇಬ್ಬರು ದಿಗ್ಗಜ ಆಟಗಾರರಿಗೆ ದೇಶದ ಮೇಲಿರುವ ಅಪಾರ ಗೌರವ ಮತ್ತು ಕ್ರಿಕೆಟ್ ಮೇಲಿರುವ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.
ಆರ್ಸಿಬಿ ಪರ ಮಿಂಚುತ್ತಿರುವ ವಿರಾಟ್
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಪ್ರಸ್ತುತ ಐಪಿಎಲ್ನಲ್ಲಿ ಕ್ರಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ಪರವಾಗಿ ಆಡುತ್ತಿದ್ದಾರೆ. ಇನ್ನೂ ಬೆಂಗಳೂರಿನಲ್ಲಿ ಏಪ್ರಿಲ್ 15, 2026ರಂದು ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್ಸಿಬಿ ಭರ್ಜರಿ ಜಯ ಸಾಧಿಸಿದೆ.
ಕಾಲಿನ ನೋವಿನ ಸಮಸ್ಯೆಯಿಂದಾಗಿ ಲಕ್ನೋ ವಿರುದ್ಧ ಬ್ಯಾಟಿಂಗ್ ಮಾಡುವಾಗ ಕೊಹ್ಲಿ ಮೈದಾನದಿಂದ ಹೊರಗುಳಿದಿದ್ದರು. ಆದರೆ, ಚೇಸಿಂಗ್ ಸಮಯದಲ್ಲಿ ಅದ್ಭುತವಾಗಿ ಬ್ಯಾಟ್ ಮಾಡಿದ ಅವರು ಕೇವಲ 34 ಎಸೆತಗಳಲ್ಲಿ 49 ರನ್ ಸಿಡಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.
ಗಾಯದ ಸಮಸ್ಯೆಗೆ ಒಳಗಾದ ರೋಹಿತ್
ಮತ್ತೊಂದೆಡೆ, ರೋಹಿತ್ ಶರ್ಮಾ ಅವರು ಸ್ನಾಯು ಸೆಳೆತದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರು ವಾಂಖೆಡೆಯಲ್ಲಿ ನಡೆದ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ 13 ಎಸೆತಗಳಲ್ಲಿ 19 ರನ್ ಗಳಿಸಿದ್ದಾಗ 'ರಿಟೈರ್ಡ್ ಹರ್ಟ್' ಆಗಿ ಮೈದಾನ ತೊರೆದಿದ್ದರು. ಆ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 18 ರನ್ಗಳ ಸೋಲು ಅನುಭವಿಸಿತು. ಇದು ಈ ಸೀಸನ್ನಲ್ಲಿ ತಂಡಕ್ಕೆ ಎದುರಾದ ಸತತ ಮೂರನೇ ಸೋಲಾಗಿದೆ. ರೋಹಿತ್ ಅವರ ಗಾಯವು ಗಂಭೀರವಾಗಿದ್ದು, ಮುಂದಿನ ಪಂದ್ಯದಲ್ಲಿ ಅವರು ಹೊರಗುಳಿಯುವ ಸಾಧ್ಯತೆಯಿದೆ. ಒಟ್ಟಿನಲ್ಲಿ ವಿರಾಟ್ ಕೊಹ್ಲಿ ಅವರು ಆರ್ಸಿಬಿಗೆ ಆಧಾರ ಸ್ಥಂಭವಾಗಿದ್ದರೆ, ರೋಹಿತ್ ಮುಂಬೈ ಇಂಡಿಯನ್ಸ್ಗೆ ಕಳಸದಂತಿದ್ದಾರೆ. ಇವರು ಆಡಲಿ, ಬಿಡಲಿ, ಅಭಿಮಾನಿಗಳು ಇವರ ಮೇಲೆ ಇಟ್ಟಿರುವ ಪ್ರೀತಿ ಮಾತ್ರ ಎಂದು ಕಡಿಮೆಯಾಗುವುದಿಲ್ಲ.












Click it and Unblock the Notifications