ಮುಂಬರುವ ಕಾಮನ್ ವೆಲ್ತ್ ಗೇಮ್ಸ್ನಿಂದ ಮೇರಿ ಕೋಂ ಹೊರಕ್ಕೆ
ನವದೆಹಲಿ, ಜೂನ್ 10: ಬರ್ಮಿಂಗ್ಹ್ಯಾಂನಲ್ಲಿ ನಡೆಯಲಿರುವ ಕಾಮನ್ವೆಲ್ತ್ ಗೇಮ್ಸ್ನಿಂದ ಹಿರಿಯ ಬಾಕ್ಸರ್ ಮೇರಿ ಕೋಂ ಹೊರ ನಡೆದಿದ್ದಾರೆ. ಮೊಣಕಾಲು ನೋವಿನಿಂದ ಬಳಲುತ್ತಿರುವ ಎಂಸಿ ಮೇರಿ ಕೋಮ್ ಅವರು ಟೂರ್ನಮೆಂಟ್ ನಿಂದ ಅನಿವಾರ್ಯವಾಗಿ ಹೊರ ಬೀಳಬೇಕಾಗಿದೆ.
ಹರಿಯಾಣದ ನಿತು ವಿರುದ್ಧ 48 ಕೆಜಿ ಸೆಮಿಫೈನಲ್ನ ಆರಂಭಿಕ ಸುತ್ತಿನಲ್ಲಿ ಸೆಣಸುವಾಗ ಆರು ಬಾರಿಯ ವಿಶ್ವ ಚಾಂಪಿಯನ್ ಕೋಮ್ ಅವರು ಗಾಯಗೊಂಡರು. ಮೊದಲ ಕೆಲವು ನಿಮಿಷಗಳಲ್ಲೇ ಎಡ ಮೊಣಕಾಲು ತಿರುಚಿ, ನೋವು ಅನುಭವಿಸಿದರು.
ಈ ಮೂಲಕ ಮೇರಿ ಕೋಮ್ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಪ್ರಮುಖ ಪಂದ್ಯಾವಳಿಯಲ್ಲಿ ಆಡುವ ಅವಕಾಶ ಕಳೆದುಕೊಳ್ಳುತ್ತಿದ್ದಾರೆ. 2018ರ ಕಾಮನ್ ವೆಲ್ತ್ ಗೇಮ್ಸ್ ಆವೃತ್ತಿಯಲ್ಲಿ ಚಿನ್ನದ ಪದಕವನ್ನು ಪಡೆದ ಮೊದಲ ಭಾರತೀಯ ಮಹಿಳಾ ಬಾಕ್ಸರ್ ಆಗಿದ್ದಾರೆ.
ಆಯ್ಕೆ ಟ್ರಯಲ್ಸ್ ವೇಳೆಯಲ್ಲಿ ಗಾಯಗೊಂಡ ಬಗ್ಗೆ ಪ್ರತಿಕ್ರಿಯಿಸಿರುವ ಮೇರಿ ಕೋಂ, "ಇದಕ್ಕಾಗಿ ನಾನು ತುಂಬಾ ಕಠಿಣ ತರಬೇತಿಯಲ್ಲಿದ್ದೆ. ಇದು ಕೇವಲ ದುರಾದೃಷ್ಟ, ನನಗೆ ಹಿಂದೆಂದೂ ಮೊಣಕಾಲು ಗಾಯವಾಗಿರಲಿಲ್ಲ,'' ಎಂದಿದ್ದಾರೆ. ಈ ಪ್ರತಿಕ್ರಿಯೆ ನೀಡಿದ ಮೇರಿ ಕೋಮ್ ಅವರು ಆಸ್ಪತ್ರೆಗೆ ಹೋಗಲು ತನ್ನ ಕಾರಿನ ಕಡೆಗೆ ಕುಂಟುತ್ತಾ ಸಾಗಿದರು.
ಪಂದ್ಯದ ಮೊದಲ ಸುತ್ತಿನಲ್ಲೇ ಪಂಚ್ನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಮೇರಿ ಕೋಮ್ ಕ್ಯಾನ್ವಾಸ್ ಮೇಲೆ ಬಿದ್ದರು. 39 ವರ್ಷ ವಯಸ್ಸಿನ ಹಿರಿಯ ಬಾಕ್ಸರ್ ವೈದ್ಯಕೀಯ ನೆರವು ಪಡೆದ ನಂತರ ಮತ್ತೆ ಬಾಕ್ಸಿಂಗ್ ಕಣಕ್ಕಿಳಿದು ಮುಂದುವರಿಯಲು ಪ್ರಯತ್ನಿಸಿದರು ಆದರೆ ಒಂದೆರಡು ಪಂಚ್ಗಳ ನಂತರ, ತಮ್ಮ ಎಡ ಮೊಣಕಾಲು ಹಿಡಿದುಕೊಂಡು ಸಾಕಷ್ಟು ನೋವಿನಿಂದ ಬಳಲುತ್ತಿದ್ದಾಗ ಸಮತೋಲನವನ್ನು ಕಾಯ್ದುಕೊಳ್ಳಲು ಹೆಣಗಾಡಿದರು.
"ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ ಅವರು ಶುಕ್ರವಾರ ಅನುಭವಿಸಿದ ಗಾಯದಿಂದಾಗಿ 2022 ರ ಕಾಮನ್ವೆಲ್ತ್ ಗೇಮ್ಸ್ಗಾಗಿ ನಡೆಯುತ್ತಿರುವ ಮಹಿಳಾ ಬಾಕ್ಸಿಂಗ್ ಟ್ರಯಲ್ಸ್ನಿಂದ ಹಿಂದೆ ಸರಿದಿದ್ದಾರೆ" ಎಂದು ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ (ಬಿಎಫ್ಐ) ಹೇಳಿಕೆಯಲ್ಲಿ ತಿಳಿಸಿದೆ.
ಮಣಿಪುರಿ ಬಾಕ್ಸರ್ ಪಂದ್ಯದ ನಡುವೆ ಗಾಯಗೊಂಡು ಆಸ್ಪತ್ರೆಗೆ ತೆರಳಿದ್ದರಿಂದ Referee Stops Contest due to injury(ಆರ್ಎಸ್ಸಿಐ) ಮೂಲಕ ನಿತುರನ್ನು ವಿಜೇತೆ ಎಂದು ರೆಫ್ರಿ ಘೋಷಿಸಿದರು.
ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ, ಹಲವು ಬಾರಿ ಏಷ್ಯನ್ ಚಿನ್ನದ ಪದಕ ಗೆದ್ದಿರುವ ಮೇರಿ ಕೋಂ ಅವರು ಟೋಕಿಯೋ ಒಲಿಂಪಿಕ್ಸ್ ಪಂದ್ಯಾವಳಿಯಲ್ಲಿ ಪ್ರೀ ಕ್ವಾರ್ಟರ್ ಹಂತ ತಲುಪಿದ್ದರು.
''ನಡೆದಿರುವ ಘಟನೆ ನಿಜವಾಗಿಯೂ ದುರದೃಷ್ಟಕರ. ಆದರೆ ಅಂತಹ ವಿಷಯಗಳನ್ನು ಊಹಿಸಲು ಸಾಧ್ಯವಿಲ್ಲ. ಇದಕ್ಕಾಗಿ ಮೇರಿ ಕಠಿಣ ಅಭ್ಯಾಸ ನಡೆಸುತ್ತಿದ್ದರು ಎಂದು ರಾಷ್ಟ್ರೀಯ ಕೋಚ್ ಭಾಸ್ಕರ್ ಭಟ್ ಪಿಟಿಐಗೆ ತಿಳಿಸಿದ್ದಾರೆ.
Recommended Video
ಎರಡು ಬಾರಿ ಮಾಜಿ ಯುವ ವಿಶ್ವ ಚಾಂಪಿಯನ್ ಆಗಿರುವ ನಿತು, ಇಂದಿರಾಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಕನಿಷ್ಠ ತೂಕ ವಿಭಾಗದಲ್ಲಿ CWG ಟ್ರಯಲ್ಸ್ನ ಫೈನಲ್ಗೆ ಲಗ್ಗೆ ಇಟ್ಟರು. ಈ ವರ್ಷದ ಆರಂಭದಲ್ಲಿ ನಡೆದ ಪ್ರತಿಷ್ಠಿತ ಸ್ಟ್ರಾಡ್ಜಾ ಸ್ಮಾರಕ ಪಂದ್ಯಾವಳಿಯಲ್ಲಿ ಚಿನ್ನ ಗೆದ್ದಿರುವ ಹರಿಯಾಣ ಬಾಕ್ಸರ್, ಈಗ ಕಾಮನ್ ವೆಲ್ತ್ ಗೇಮ್ಸ್ ಆಯ್ಕೆಯಾಗಿ ಮಂಜು ರಾಣಿ ವಿರುದ್ಧ ಸ್ಪರ್ಧಿಸಲಿದ್ದಾರೆ.