ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಗಂಗೂಲಿಗೆ ಅವಕಾಶ ನೀಡಿ: ಮೋದಿಗೆ ಮಮತಾ ಬ್ಯಾನರ್ಜಿ ಮನವಿ
ಕೋಲ್ಕತ್ತಾ, ಅಕ್ಟೋಬರ್ 17: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಮರು ಆಯ್ಕೆ ಮಾಡದಿರುವುದಕ್ಕೆ ಹಾಗೂ ಜಯ್ ಶಾರನ್ನು 2ನೇ ಬಾರಿಗೆ ಆಯ್ಕೆ ಮಾಡಿದ್ದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಶ್ಚರ್ಯ ವ್ಯಕ್ತಪಡಿಸಿದ್ದು, ಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಮನವಿ ಮಾಡಿಕೊಂಡಿದ್ದಾರೆ.
ಸೋಮವಾರ ಉತ್ತರ ಬಂಗಾಳದ ಪ್ರವಾಸಕ್ಕೆ ತೆರಳಿದ್ದ ವೇಳೆ ಬಾಗ್ದೋಗ್ರ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ದೀದಿ, "ಸೌರವ್ ಗಂಗೂಲಿ ನಮ್ಮ ಹೆಮ್ಮೆ, ಅವರು ದೇಶದಕ್ಕಾಗಿ ಆಡಿದ್ದಾರೆ ಹಾಗೂ ಆಡಳಿತಾಧಿಕಾರಿಯಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಅವರಿಗೆ ಮೂರು ವರ್ಷ ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ನೀಡಲಾಗಿದ್ದು, ಈ ವೇಳೆ ಅವರು ಆ ಜವಾಬ್ದಾರಿಯನ್ನು ತುಂಬಾ ಚೆನ್ನಾಗಿ ನಿರ್ವಹಿಸಿದ್ದಾರೆ. ಅವಧಿ ಮುಗಿದ ನಂತರ ಅವರನ್ನು ಏಕೆ ತೆಗೆದುಹಾಕಲಾಗಿದೆ ಮತ್ತು ಅಮಿತ್ ಶಾ ಮಗ, ಜಯ್ ಶಾ ಅಲ್ಲಿಯೇ ಹೇಗೆ ಉಳಿದಿದ್ದಾರೆ ಎಂಬುದು ನಮಗೆ ತಿಳಿದಿಲ್ಲ. ಅವರು ಬಿಸಿಸಿಐನ ಕಾರ್ಯದರ್ಶಿಯಾಗಿ ಉಳಿದಿರುವುದರಲ್ಲಿ ನಮಗೆ ಯಾವುದೇ ಸಮಸ್ಯೆ ಇಲ್ಲ ಆದರೆ ಸೌರವ್ ಅವರನ್ನು ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಏಕೆ ತೆಗೆದುಹಾಕಲಾಗಿದೆ ಎಂಬುದನ್ನು ನಾವು ತಿಳಿದುಕೊಳ್ಳಲು ಬಯಸುತ್ತೇವೆ" ತಿಳಿಸಿದ್ದಾರೆ.
ಮುಂದುವರೆದು, ಬೋರ್ಡ್ನಿಂದ ಹೊರಹಾಕಿದ ನಂತರ ಮಾಜಿ ನಾಯಕ ಗಂಗೂಲಿಗೆ ಐಸಿಸಿ ನಾಮನಿರ್ದೇಶನದ ಮೂಲಕ ಮಾತ್ರ ಪರಿಹಾರ ನೀಡಬಹುದು. ಸೌರವ್ ಮೈದಾನದಲ್ಲಿ ಮತ್ತು ಹೊರಗೆ ಎರಡೂ ಕಡೆ ದಕ್ಷತೆಯನ್ನು ತೋರಿಸಿದ್ದಾರೆ. ಅವರು ಸಮರ್ಥ ಆಡಳಿತಗಾರ. ಹಾಗಾಗಿ ಪ್ರಧಾನಿ ಅವರಿಗೆ ಗಂಗೂಲಿ ಐಸಿಸಿಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ವಿನಂತಿಸುತ್ತೇನೆ ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಗಂಗೂಲಿಯನ್ನು ಬಿಸಿಸಿಐನಿಂದ ತೆಗೆದುಹಾಕಿದ್ದಕ್ಕೆ ಬಂಗಾಳದ ಟಿಎಂಸಿ, ಕಾಂಗ್ರೆಸ್ ಮತ್ತು ಸಿಪಿಐ(ಎಂ) ನಾಯಕರು ಮಂಡಳಿಯ ನಿರ್ಧಾರದ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದ್ದರು. ಬಿಜೆಪಿಗೆ ಸೇರಲು ಬಯಸದ್ದರಿಂದ ಗಂಗೂಲಿಯವರ ಮೇಲೆ ಸಂಚು ರೂಪಿಸಿ ತೆಗೆದು ಹಾಕಲಾಗಿದೆ ಎಂದು ಆರೋಪಿಸಿದ್ದಾರೆ.
ಆದರೆ ಇದಕ್ಕೆ ತಿರುಗೇಟು ನೀಡಿದ್ದ ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿ, ಟಿಎಂಸಿ ಮುಖ್ಯಸ್ಥರು ಪಶ್ಚಿಮ ಬಂಗಾಳದ ಬ್ರಾಂಡ್ ಅಂಬಾಸಿಡರ್ ಆಗಿರುವ ಶಾರುಖ್ ಖಾನ್ರನ್ನು ತೆಗೆದುಹಾಕಿ ಸೌರವ್ ಗಂಗೂಲಿಯನ್ನು ನೇಮಕ ಮಾಡಲಿ ಎಂದು ಹೇಳಿದ್ದರು.
ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಅಕ್ಟೋಬರ್ 20 ರಂದು ನಾಮಪತ್ರ ಸಲ್ಲಿಸಬೇಕು. ಹಾಲಿ ಬಿಸಿಸಿಐ ಅದ್ಯಕ್ಷರಾಗಿರುವ ಗಂಗೂಲಿ ಅವರ ಅವಧಿ ಮುಕ್ತಾಯವಾಗುತ್ತಿದ್ದು, ಅವರ ನಂತರ ರೋಜರ್ ಬಿನ್ನಿ ಅವರು ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.