ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿ ಘೋಷಿಸಿದ KSCA, ಏನಿದರ ವಿಶೇಷ?
ಬೆಂಗಳೂರು, ಜುಲೈ 17: ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ(ಕೆಎಸ್ಸಿಎ)ಯು ಮತ್ತೊಮ್ಮೆ ಚುಟುಕು ಕ್ರಿಕೆಟ್ ಕೂಟ ಆಯೋಜನೆಗೆ ಮುಂದಾಗಿದೆ. ಮಹಾರಾಜ ಟ್ರೋಫಿ ಟಿ20 ಅನಾವರಣಗೊಳಿಸಲಾಗಿದೆ. ಮೈಸೂರಿನ ಮಹಾರಾಜ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸ್ಮರಣಾರ್ಥ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲಾಗುತ್ತಿದೆ. ಈ ಟೂರ್ನಿಯು ಆಗಸ್ಟ್ 7 ರಿಂದ ಆಗಸ್ಟ್ 26ರ ವರೆಗೆ ನಡೆಯಲಿದೆ ಎಂದು ಅಧಿಕೃತವಾಗಿ ಪ್ರಕಟಣೆ ಹೊರಡಿಸಲಾಗಿದೆ.
''ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಮಾದರಿಯಲ್ಲೇ ಯುವ ಹಾಗೂ ಅರ್ಹ ಪ್ರತಿಭೆಗಳಿಗೆ ಅವಕಾಶ ನೀಡಲು ಈ ಪಂದ್ಯಾವಳಿ ಆಯೋಜಿಸಲಾಗುತ್ತಿದೆ'' ಎಂದು ಕೆಎಸ್ಸಿಎ ಅಧ್ಯಕ್ಷ ರೋಜರ್ ಬಿನ್ನಿ ಹೇಳಿದರು.
''ನಮ್ಮ ಕ್ರಿಕೆಟಿಗರಿಗೆ ನಿರಂತರ ಅವಕಾಶ ನೀಡುವುದು ಮತ್ತು ಅವರ ಕ್ರಿಕೆಟ್ ಬದುಕಿನಲ್ಲಿ ಉನ್ನತ ಹಂತಕ್ಕೆ ಸಜ್ಜಾಗಲು ವೇದಿಕೆ ನೀಡುವ ಉದ್ದೇಶದಿಂದ ನಾವು ಈ ಬಾರಿ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಆಯೋಜಿಸುತ್ತಿದ್ದೇವೆ'' ಎಂದರು.

ಕೆಎಸ್ಸಿಎ ಆವರಣದಲ್ಲಿ ಜುಲೈ 16ರಂದು ನಡೆದ ಟ್ರೋಫಿ ಹಾಗೂ ಲಾಂಚನ ಅನಾವರಣ ಕಾರ್ಯಕ್ರಮದಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಸಂತೋಷ್ ಮೆನನ್ ಹಾಗೂ ಖಜಾಂಚಿ ವಿನಯ್ ಮೃತ್ಯುಂಜಯ ಪಾಲ್ಗೊಂಡಿದ್ದರು.
ಚುಟುಕು ಕ್ರಿಕೆಟ್ ಆಯೋಜನೆ ಹಾಗೂ ಕೆಎಸ್ಸಿಎ
2009ರಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್ ಆರಂಭಿಸಿ ಎಂಟು ಯಶಸ್ವಿ ವರ್ಷಗಳ ಕಾಲ ಯಶಸ್ವಿಯಾಗಿ ಆಯೋಜನೆ ಮಾಡಲಾಗಿದೆ. ಹಲವಾರು ಪ್ರತಿಭಾವಂತ ಯುವ ಕ್ರಿಕೆಟಿಗರು ಮಿಂಚಿದ್ದಾರೆ. 2005ರಲ್ಲಿ ಬ್ರಾಡ್ಮನ್ ಕಪ್ ಹೆಸರಿನಲ್ಲಿ ನಡೆದ ದೇಶದ ಮೊಟ್ಟ ಮೊದಲ ಟಿ20 ಟೂರ್ನಮೆಂಟ್ ಬಗ್ಗೆ ಬಿನ್ನಿ ಸ್ಮರಿಸಿಕೊಂಡರು. 1983ರ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಬಿನ್ನಿ, ಮಹಾರಾಜ ಥೀಮ್ ಟ್ರೋಫಿ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ಟ್ರೋಫಿ: 11 ಗಟ್ಟಿಯಾದ ಲೋಹದ ವಿಂಗ್ಸ್ ಹೊಂದಿರುವ ಈ ಟ್ರೋಫಿ, 11 ಆಟಗಾರರನ್ನು ಪ್ರತಿನಿಧಿಸಲಿದೆ.
ಎಷ್ಟು ತಂಡಗಳು?: ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ, ರಾಯಚೂರು ಮತ್ತು ಮಂಗಳೂರು ಸೇರಿದಂತೆ ಒಟ್ಟು ಆರು ತಂಡಗಳು ಪ್ರತಿಷ್ಠಿತ ಮಹಾರಾಜ ಟ್ರೋಫಿಗಾಗಿ ಹೋರಾಟ ನಡೆಸಲಿವೆ.

ಪಂದ್ಯಾವಳಿ ಆರಂಭ ದಿನಾಂಕ: ಆಗಸ್ಟ್ 7 ರಂದು ಮೈಸೂರಿನಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣ
ಎಲ್ಲೆಲ್ಲಿ ಎಷ್ಟು ಪಂದ್ಯ: ಮೈಸೂರಲ್ಲಿ 18 ಪಂದ್ಯ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 16 ಪಂದ್ಯ
ಫೈನಲ್ ಪಂದ್ಯ: ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು
ವಯೋಮಿತಿ: ಗರಿಷ್ಠ 35 ವರ್ಷ
ಆಟಗಾರರ ಆಯ್ಕೆ?: ಕೆಎಸ್ಸಿಎ ವತಿಯಿಂದ ನಾಯಕ ಹಾಗೂ ಉಪ ನಾಯಕರನ್ನು ಆಯ್ಕೆ ಮಾಡಲಾಗುತ್ತದೆ. ಜೊತೆಗೆ ಸಹಾಯಕ ಸಿಬ್ಬಂದಿ ಆಯ್ಕೆಗೂ ಸಂಸ್ಥೆ ಸಹಕರಿಸಲಿದೆ. ಮಿಕ್ಕಂತೆ ಆಟಗಾರರನ್ನು ಡ್ರಾಫ್ಟ್ ಮೂಲಕ ಆಯ್ಕೆ ಮಾಡಲಾಗುತ್ತದೆ.
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 2 ಮತ್ತು ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲಿ ನೇರ ಪ್ರಸಾರವಾಗೊಳ್ಳಲಿದೆ. ಫ್ಯಾನ್ಕೋಡ್ ಆಪ್ನಲ್ಲಿಯೂ ಪ್ರಸಾರವಾಗಲಿದೆ.
ಯಾರೆಲ್ಲ ಆಡುವ ನಿರೀಕ್ಷೆ: ದೇವದತ್ತ ಪಡಿಕ್ಕಲ್, ಶ್ರೇಯಸ್ ಗೋಪಾಲ್, ಕೆ. ಗೌತಮ್, ಮನೀಶ್ ಪಾಂಡೆ, ಜೆ. ಸುಚಿತ್, ಕರುಣ್ ನಾಯರ್, ಮಯಾಂಕ್ ಅಗರ್ವಾಲ್, ಅಭಿನವ್ ಮನೋಹರ್, ಕೆ.ಸಿ. ಕಾರಿಯಪ್ಪ, ಪ್ರವೀಣ್ ದುಬೆ ಮತ್ತು ಅಭಿಮನ್ಯು ಮಿಥುನ್.
ಪ್ರಯೋಜಕರು: ಕೆಎಸ್ಸಿಎ ವತಿಯಿಂದಲೇ ಎಲ್ಲವೂ ನಿರ್ಧರಿಸಲಾಗುತ್ತಿದ್ದು, ಸೈಕಲ್ ಅಗರಬತ್ತಿಸ್, ಕಲ್ಯಾಣಿ ಮೋಟರ್ಸ್, ಫಿಜಾ ಡೆವಲಪರ್ಸ್ ಅಂಡ್ ಇನ್ಫ್ರಾಸ್ಟ್ರಕ್ಚರ್ಸ್ ಪ್ರೈ ಲಿ, ಗುಲ್ಬರ್ಗಾ ಮೆಗಾಸ್ಪೀಡ್ ಹಾಗೂ ಮೈಕಾನ್ ಇಂಜಿನಿಯರ್ಸ್ (ಹುಬ್ಬಳ್ಳಿ) ಕ್ರಮವಾಗಿ ಮೈಸೂರು,ಬೆಂಗಳೂರು, ಹುಬ್ಳಿ, ಮಂಗಳೂರು ಹಾಗೂ ರಾಯಚೂರು ತಂಡಕ್ಕೆ ಪ್ರಾಯೋಜಕರಾಗಿದ್ದಾರೆ. ಶಿವಮೊಗ್ಗ ತಂಡಕ್ಕೆ ಪ್ರಾಯೋಜಕರನ್ನು ಶೀಘ್ರದಲ್ಲೇ ಘೋಷಿಸಲಾಗುವುದು.
''ಆಡುವ 11 ಆಯ್ಕೆಯಲ್ಲಿ ಅಥವಾ ಆಟಕ್ಕೆ ಸಂಬಂಧಿಸಿದ ಇನ್ನಾವುದೇ ವಿಷಯದಲ್ಲಿ ತಂಡದ ಪ್ರಾಯೋಜಕರ ಹಸ್ತಕ್ಷೇಪ ಇರುವುದಿಲ್ಲ. ಎಲ್ಲ ವ್ಯಾವಹಾರಿಕ ಮತ್ತು ಕ್ರಿಕೆಟಿಗೆ ಸಂಬಂಧಿತ ಹಕ್ಕುಗಳು ಕೇವಲ ಕೆಎಸ್ಸಿಎಗೆ ಸೇರಿರುತ್ತದೆ,'' ಎಂದು ಕೆಎಸ್ಸಿಎ ವಕ್ತಾರರಾದ ವಿನಯ್ ಮೃತ್ಯುಂಜಯ ತಿಳಿಸಿದರು.












Click it and Unblock the Notifications