ಜಿಲ್ಲಾ ಕ್ರೀಡಾಂಗಣ ಬಳಕೆಗೆ ಬಂತು ಸರ್ಕಾರದಿಂದ ಖಡಕ್ ಮಾರ್ಗಸೂಚಿ
ಬೆಂಗಳೂರು, ಮಾರ್ಚ್ 10: ಕರ್ನಾಟಕ ಸರ್ಕಾರ ಜಿಲ್ಲಾ ಕ್ರೀಡಾಂಗಣಗಳ ಬಳಕೆಯ ಕುರಿತು ಸುತ್ತೋಲೆಯೊಂದನ್ನು ಹೊರಡಿಸಿದೆ. ಇನ್ನು ಮುಂದೆ ಸರ್ಕಾರದ ಅನುಮತಿ ಇಲ್ಲದೇ ಕ್ರೀಡಾಂಗಣವನ್ನು ದೀರ್ಘಾವಧಿಗೆ ಬಾಡಿಗೆಗೆ ಕೊಡುವಂತಿಲ್ಲ ಮತ್ತು ಇತರ ರೀತಿಯಲ್ಲಿ ಪರಭಾರೆ ಮಾಡುವಂತಿಲ್ಲ. ಕ್ರೀಡಾಂಗಣಗಳನ್ನು ಹೇಗೆ ನಿರ್ವಹಣೆ ಮಾಡಬೇಕು? ಎಂದು ಸಹ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಈ ಕುರಿತು ಆಯುಕ್ತರ ಕಾರ್ಯಾಲಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸುತ್ತೋಲೆಯನ್ನು ಹೊರಡಿಸಿದೆ. ಆಯುಕ್ತರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆದೇಶವನ್ನು ಹೊರಡಿಸಿದ್ದು, ಎಲ್ಲಾ ಜಿಲ್ಲಾ ಉಪ/ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾಧಿಕಾರಿಗಳಿಗೆ ಈ ಕುರಿತು ಸೂಚನೆ ನೀಡಲಾಗಿದೆ.

ಈ ಸುತ್ತೋಲೆ ಕ್ರೀಡಾಂಗಣ ನಿರ್ವಹಣೆಯಲ್ಲಿ ಸರ್ಕಾರದ ಆದೇಶದ ಪಾಲನೆ ಕುರಿತು ಎಂಬ ವಿಷಯವನ್ನು ಒಳಗೊಂಡಿದ್ದು, ಸರ್ಕಾರದ ಆದೇಶ ದಿನಾಂಕ 23-07-2021, ಸರ್ಕಾರದ ಆದೇಶ 4-3-2023 ಉಲ್ಲೇಖಿಸಲಾಗಿದೆ.
ಸುತ್ತೋಲೆಯ ವಿವರಗಳು: ಸರ್ಕಾರದ ಆದೇಶದನ್ವಯ ಕ್ರೀಡಾಂಗಣ ಬಳಕೆ ನೀತಿಯನ್ನು ಜಾರಿಗೊಳಿಸಿ ಆದೇಶಿಸಲಾಗಿದ್ದು, ಪ್ರಮುಖ ನಿಬಂಧನೆಗಳ ಕುರಿತು ಗಮನ ಸೆಳೆಯಲಾಗಿದೆ ಎಂದು ಸುತ್ತೋಲೆಯಲ್ಲಿ ವಿವರಣೆ ನೀಡಲಾಗಿದೆ.
ಕ್ರೀಡಾಂಗಣಗಳನ್ನು ಸರ್ಕಾರದ ಅನುಮತಿ ಇಲ್ಲದೇ ದೀರ್ಘಾವಧಿಗೆ ಬಾಡಿಗೆ ನೀಡುವಂತಿಲ್ಲ ಅಥವಾ ಇತರೆ ರೀತಿಯಲ್ಲಿ ಪರಭಾರೆ ಮಾಡುವಂತಿಲ್ಲ. ಸರ್ಕಾರದ ಆದೇಶದನ್ವಯ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕ್ರೀಡಾಂಗಣ ಉಸ್ತುವಾರಿ ಸಮಿತಿ ಹಾಗೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಕ್ರೀಡಾಂಗಣಗಳ ದೈನಂದಿನ ನಿರ್ವಹಣೆಗೆ ಜಿಲ್ಲಾ ಕ್ರೀಡಾಂಗಣಗಳ ನಿರ್ವಹಣಾ ಸಮಿತಿಗಳನ್ನು ರಚಿಸಿ ಆದೇಶಿಸಲಾಗಿದ್ದು, ಸಾಮಾನ್ಯ ಮಾರ್ಗಸೂಚಿಗಳ ಕುರಿತು ಗಮನ ಸೆಳೆಯಲಾಗಿದೆ ಎಂದು ತಿಳಿಸಿದೆ.
* ಜಿಲ್ಲಾ ಕ್ರೀಡಾಂಗಣ ಉಸ್ತುವಾರಿ ಸಮಿತಿ ಹಾಗೂ ಜಿಲ್ಲಾ ಕ್ರೀಡಾಂಗಣ ನಿರ್ವಹಣಾ ಸಮಿತಿಗಳು ಸರ್ಕಾರದ ಪೂರ್ವಾನುಮತಿ ಇಲ್ಲದೇ ಗುತ್ತಿಗೆ/ ಹೊರಗುತ್ತಿಗೆ ಸೇರಿದಂತೆ ಯಾವುದೇ ನೇಮಕಾತಿಗಳನ್ನು ಮಾಡುವಂತಿಲ್ಲ.
* ಜಿಲ್ಲೆಯ ಯಾವುದೇ ಇಲಾಖಾ ಕ್ರೀಡಾಂಗಣದಲ್ಲಿ ರೂ 50 ಲಕ್ಷ ವೆಚ್ಚ ಮೀರಿದ ಯಾವುದೇ ಒಂದು ಅಭಿವೃದ್ಧಿ ಕಾರ್ಯವನ್ನು ಅಥವಾ ವಾರ್ಷಿಕ ಒಟ್ಟು ರೂ 10 ಲಕ್ಷ ಮಿತಿ ಮೇಲ್ಪಟ್ಟ ಕಾಮಗಾರಿ/ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೊದಲು ಇಲಾಖೆಯ ಪೂರ್ವಾನುಮತಿ ಪಡೆಯುವುದು ಕಡ್ಡಾಯ.
* ಕ್ರೀಡಾಂಗಣದ ಆಸ್ತಿಗಳನ್ನು ವಾರ್ಷಿಕ ಬಾಡಿಗೆಗೆ ನೀಡುವ ಅಥವಾ ಹೊರಗುತ್ತಿಗೆ ನೀಡುವ ಸಂದರ್ಭದಲ್ಲಿ ಇಲಾಖೆಯ ಪೂರ್ವಾನುಮತಿ ಪಡೆಯತಕ್ಕದ್ದು.
* ಇಲಾಖೆಯ ಕ್ರೀಡಾಂಗಣಗಳನ್ನು ಹಾಗೂ ಇಲಾಖಾ ಆಸ್ತಿಗಳನ್ನು ಇಲಾಖೆಯ ಪೂರ್ವಾನುಮತಿ ಇಲ್ಲದೇ ಇತರೆ ಇಲಾಖೆಗಳಿಗೆ ಹಾಗೂ ಖಾಸಗಿ ಸಂಸ್ಥೆಗಳಿಗೆ ತಾತ್ಕಾಲಿಕವಾಗಿಯಾಗಲೀ ಅಥವಾ ಶಾಶ್ವತವಾಗಿಯಾಗಲೀ ಪರಭಾರೆ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.
* ಈ ಆದೇಶಗಳು ಜಾರಿಗೆ ಬಂದ ನಂತರ ಸದರಿ ನಿಯಮಗಳ ಉಲ್ಲಂಘನೆಯಾಗಿದ್ದಲ್ಲಿ, ಸಂಬಂಧಪಟ್ಟ ಜಿಲ್ಲೆಯ ಉಪ/ ಸಹಾಯಕ ನಿರ್ದೇಶಕರು ನಿಯಮಗಳನ್ನು ಉಲ್ಲಂಘಿಸಿರುವ ಅಧಿಕಾರಿಗಳ ವಿವರಗಳನ್ನು ದಿನಾಂಕ 15-03-2025 ರೊಳಗೆ ಒದಗಿಸತಕ್ಕದ್ದು.
ಇಲಾಖಾ ಆಸ್ತಿಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿ, ಯಾವುದೇ ಚಟುವಟಿಕೆಗಳು ನಡೆದಲ್ಲಿ ಅಥವಾ ಇಲಾಖಾ ಆಸ್ತಿಗಳನ್ನು ಇತರರು ಅತಿಕ್ರಮಿಸಿದಲ್ಲಿ, ದುರ್ಬಳಕೆ ಮಾಡಿಕೊಂಡಲ್ಲಿ, ಅವುಗಳನ್ನು ತಡೆಯುವುದು ಹಾಗೂ ತಕ್ಷಣ ಇಲಾಖಾ ಮುಖ್ಯಸ್ಥರ ಗಮನಕ್ಕೆ ತರುವುದು ಪ್ರತಿಯೊಬ್ಬ ಜಿಲ್ಲಾ ಮಟ್ಟದ ಅಧಿಕಾರಿಯ ಜವಾಬ್ದಾರಿಯಾಗಿರುತ್ತದೆ. ಸರ್ಕಾರದ ಆದೇಶಗಳನ್ನು ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.












Click it and Unblock the Notifications