CCL 2025: ತೆಲುಗು ವಾರಿಯರ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಕರ್ನಾಟಕ ಬುಲ್ಡೋಜರ್ಸ್
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸಿಸಿಎಲ್ 2025 ಪಂದ್ಯಾವಳಿಯ ಎರಡನೇ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತೆಲುಗು ವಾರಿಯರ್ಸ್ ವಿರುದ್ಧ 46 ರನ್ಗಳ ಭರ್ಜರಿ ಗೆಲುವು ಸಾಧಿಸಿತು. ಕಿಚ್ಚ ಸುದೀಪ್ ತಂಡದ ಆಟ ನೋಡಲು ಮೈದಾನದಲ್ಲಿ ಕಿಕ್ಕಿರಿದು ಅಭಿಮಾನಿಗಳು ಸೇರಿದ್ದರು. ಅಭಿಮಾನಿಗಳಿಗೆ ನಿರಾಸೆ ಮಾಡದ ಕರ್ನಾಟಕ ಬುಲ್ಡೋಜರ್ಸ್ ಗೆಲುವಿನ ಉಡುಗೊರೆ ಕೊಟ್ಟಿದೆ.
ಟಾಸ್ ಗೆದ್ದ ತೆಲುಗು ವಾರಿಯರ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ಬುಲ್ಡೋಜರ್ಸ್ 10 ಓವರ್ ಗಳ ಮೊದಲ ಇನ್ನಿಂಗ್ಸ್ನಲ್ಲಿ 3 ವಿಕೆಟ್ ಕಳೆದುಕೊಂಡು 113 ರನ್ ಗಳಿಸಿತು. ಡಾರ್ಲಿಂಗ್ ಕೃಷ್ಣ 39 ಎಸೆತಗಳಲ್ಲಿ 5 ಬೌಂಡರಿ 5 ಸಿಕ್ಸರ್ ಸಹಿತ ಅಜೇಯ 80 ರನ್ ಗಳಿಸಿ ಮಿಂಚಿದರು.

ಬಳಿಕ ಬ್ಯಾಟಿಂಗ್ ಮಾಡಿದ ತೆಲುಗು ವಾರಿಯರ್ಸ್ 10 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 99 ರನ್ ಗಳಿಸಿತು. ನಾಯಕ ಅಖಿಲ್ 31 ಎಸೆತಗಳಲ್ಲಿ 51 ರನ್ ಗಳಿಸಿದರೆ ಉಳಿದ ಬ್ಯಾಟರ್ ಗಳು ರನ್ ಗಳಿಸುವಲ್ಲಿ ವಿಫಲವಾದರು. ಮಂಜುನಾಥ್ ಗೌಡ ಮತ್ತು ಚಂದನ್ ಕುಮಾರ್ ತಲಾ ಎರಡು ವಿಕೆಟ್ ಪಡೆದು ತೆಲುಗ ವಾರಿಯರ್ಸ್ ರನ್ ಗಳಿಕೆಗೆ ಕಡಿವಾಣ ಹಾಕಿದರು.
ಕರಣ್, ರಾಜೀವ್ ಅಬ್ಬರ
14 ರನ್ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಕರ್ನಾಟಕ 10 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 123 ರನ್ ಗಳಿಸುವ ಮೂಲಕ 137 ರನ್ಗಳ ಬೃಹತ್ ಗುರಿ ನೀಡಿತು. ಚಂದನ್ ಕುಮಾರ್ ಮತ್ತು ಮಂಜುನಾಥ್ ಗೌಡ ತಲಾ 12 ರನ್ ಗಳಿಸಿದರೆ, ನಾಯಕ ಸುದೀಪ್ 9 ಎಸೆತಗಳಲ್ಲಿ 14 ರನ್ ಗಳಿಸಿದರು.
ಡಾರ್ಲಿಂಗ್ ಕೃಷ್ಣ 13 ಎಸೆತಗಳಲ್ಲಿ 16 ರನ್ ಗಳಿಸಿದರೆ, ರಾಜೀವ್ ಹನು 16 ಎಸೆತಗಳಲ್ಲಿ 1 ಬೌಂಡರಿ 2 ಸಿಕ್ಸರ್ ಸಹಿತ ಅಜೇಯ 26 ರನ್ ಗಳಿಸಿದರು. ಕರಣ್ ಆರ್ಯನ್ 13 ಎಸೆತಗಳಲ್ಲಿ 3 ಬೌಂಡರಿ 2 ಸಿಕ್ಸರ್ ಸಹಿತ ಅಜೇಯ 34 ರನ್ ಗಳಿಸಿದರು.
ಸೋಲೊಪ್ಪಿಕೊಂಡ ತೆಲುಗು ವಾರಿಯರ್ಸ್
137 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ತೆಲುಗು ವಾರಿಯರ್ಸ್ ಸ್ಫೋಟಕ ಆರಂಭ ಪಡೆಯಿತು. ತಮನ್ 19 ಎಸೆತಗಳಲ್ಲಿ 37 ರನ್ ಗಳಿಸುವ ಮೂಲಕ ಕರ್ನಾಟಕ ಬುಲ್ಡೋಜರ್ಸ್ ಚಿಂತೆ ಹೆಚ್ಚಿಸಿದ್ದರು. ಆದರೆ ಚಂದನ್ ಕುಮಾರ್ ಅವರನ್ನು ಎಲ್ಬಿಎಬ್ಲ್ಯೂ ಬಲೆಗೆ ಕೆಡವುವ ಮೂಲಕ ಆತಂಕ ದೂರ ಮಾಡಿದರು. ತಮನ್ ಔಟಾಗುತ್ತಿದ್ದಂತೆ ತೆಲುಗು ವಾರಿಯರ್ಸ್ ಪತನ ಆರಂಭವಾಯಿತು. ಅಶ್ವಿನ್ ಬಾಬು 15 ರನ್ ಗಳಿಸಿದರೆ ಉಳಿದ ಆಟಗಾರರು ಒಂದಂಕಿ ರನ್ ಗಳಿಸಿದರು. 10 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 91 ರನ್ ಗಳಿಸಿದ ತೆಲುಗು ವಾರಿಯರ್ಸ್ ಸೋಲೊಪ್ಪಿಕೊಂಡಿತು.
ಗೋಲ್ಡನ್ ಸ್ಟಾರ್ ಗಣೇಶ್ 2 ಓವರ್ ಗಳಲ್ಲಿ ಕೇವಲ 5 ರನ್ ಬಿಟ್ಟುಕೊಟ್ಟು 4 ವಿಕೆಟ್ ಪಡೆದರು. ಚಂದನ್ ಕುಮಾರ್ ಮತ್ತು ಅನೂಪ್ ಭಂಡಾರಿ 2 ವಿಕೆಟ್ ಪಡೆದು ತೆಲುಗು ವಾರಿಯರ್ಸ್ ತಂಡಕ್ಕೆ ಆಘಾತ ನೀಡಿದರು.












Click it and Unblock the Notifications