KL Rahul: ಕನ್ನಡಿಗ ಕೆಎಲ್ ರಾಹುಲ್ರನ್ನು ಭಾರತ ತಂಡದಿಂದ ಹೊರಗಿಡಲು ಒಳಸಂಚು?
ಕೆಎಲ್ ರಾಹುಲ್ ಭಾರತ ಕ್ರಿಕೆಟ್ ತಂಡದಲ್ಲಿರುವ ಪ್ರತಿಭಾವಂತ ಆಟಗಾರ. ಅದರಲ್ಲೂ ಏಕದಿನ ಮಾದರಿ ಕ್ರಿಕೆಟ್ನಲ್ಲಿ ಕೆಎಲ್ ರಾಹುಲ್ ಭಾರತ ತಂಡದ ಮಧ್ಯಮ ಕ್ರಮಾಂಕದ ದೊಡ್ಡ ಶಕ್ತಿ. ಅವರು ಮಧ್ಯಮ ಕ್ರಮಾಂಕದಲ್ಲಿ ಆಡಿರುವ ಸಂದರ್ಭದಲ್ಲಿ ಗಳಿಸಿರುವ ರನ್, ಸರಾಸರಿ ನೋಡಿದರೆ ಸಾಕು ಅವರ ಕೊಡುಗೆ ಏನೆಂದು ತಿಳಿಯುತ್ತದೆ. ಕೆಎಲ್ ರಾಹುಲ್ ಒಬ್ಬ ಕ್ಲಾಸ್ ಪ್ಲೇಯರ್, ಅದೇ ಕಾರಣಕ್ಕೆ ಅವರ ಆಟ ತುಂಬಾ ಜನರಿಗೆ ಇಷ್ಟ, ಇಂತಹ ಆಟಗಾರನ ಕ್ರಿಕೆಟ್ ಭವಿಷ್ಯವನ್ನೇ ಮುಗಿಸಲು ಸಂಚು ನಡೆಯುತ್ತಿದೆಯಾ ಎನ್ನುವ ಅನುಮಾನ ಶುರುವಾಗಿದೆ.
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ತಕ್ಕ ಮಟ್ಟಿಗೆ ಪ್ರದರ್ಶನ ನೀಡಿದ್ದ ಕೆಎಲ್ ರಾಹುಲ್ ರಣಜಿ ಟ್ರೋಫಿಯಲ್ಲಿ ಕರ್ನಾಟಕ ತಂಡದ ಪರ ಒಂದು ಪಂದ್ಯ ಆಡಿದ್ದರು. ಅದಾದ ಬಳಿಕ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಎರಡೂ ಪಂದ್ಯಗಳಲ್ಲಿ ಆಡಿದ್ದರೂ ಅವರಿಂದ ದೊಡ್ಡ ಸ್ಕೋರ್ ಬಂದಿಲ್ಲ.

ಆದರೆ ಕೆಎಲ್ ರಾಹುಲ್ರನ್ನು ಕಡೆಗಣಿಸಲಾಗುತ್ತಿದ್ದು, ಆತನ ಮೇಲೆ ಸುಮ್ಮನೆ ಒತ್ತಡ ಹೇರುವಂತೆ ನಡೆದುಕೊಳ್ಳಲಾಗುತ್ತಿದೆಯಾ ಅನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ. ಐದನೇ ಕ್ರಮಾಂಕದಲ್ಲಿ ಅದ್ಭುತ ಅಂಕಿ ಸಂಖ್ಯೆಗಳನ್ನು ಹೊಂದಿದ್ದರು ಅವರನ್ನು ಆರನೇ ಕ್ರಮಾಂಕದಲ್ಲಿ ಆಡುವಂತೆ ಮಾಡಲಾಗಿದೆ.
ಅಕ್ಷರ್ ಪಟೇಲ್ಗೆ ಪ್ರಮೋಷನ್ ಕೊಟ್ಟಿದ್ದು ಕೆಎಲ್ ರಾಹುಲ್ರನ್ನು 6ನೇ ಕ್ರಮಾಂಕದಲ್ಲಿ ಆಡಿಸುತ್ತಿರುವುದು ಸಾಕಷ್ಟು ಟೀಕೆಗೆ ಕಾರಣವಾಗಿದೆ. ಇದಕ್ಕೆ ಕೋಚ್ ಗೌತಮ್ ಗಂಭೀರ್ ಕೊಟ್ಟಿರುವ ಕಾರಣ ಎಡಗೈ ಮತ್ತು ಬಲಗೈ ಆಟಗಾರರ ಕಾಂಬಿನೇಷನ್ ಎಂದು. ಟಾಪ್ ಆರ್ಡರ್ ನಲ್ಲಿ ಆಡುತ್ತಿದ್ದ ಜೈಸ್ವಾಲ್ರನ್ನು ಕೈಬಿಟ್ಟು ಶುಭಮನ್ ಗಿಲ್ರನ್ನು ಉಳಿಸಿಕೊಂಡಾಗ ಕಾಂಬಿನೇಷನ್ ಬೇಕಿರಲಿಲ್ವಾ ಅಲ್ಲಿ ಇಲ್ಲದ ನಿಯಮ ಕೆಎಲ್ ರಾಹುಲ್ ವಿಚಾರದಲ್ಲಿ ಮಾತ್ರ ಯಾಕೆ ಎನ್ನುವ ಅನುಮಾನ ಶುರುವಾಗಿದೆ.
ಒಂದು ಕಾಲದಲ್ಲಿ ಕನ್ನಡಿಗರೇ ಪ್ರಾಬಲ್ಯ ಹೊಂದಿದ್ದ ಟೀಂ ಇಂಡಿಯಾದಲ್ಲಿ ಇಂದು ಸ್ಥಾನ ಪಡೆಯುವುದು ಕೂಡ ಕಷ್ಟವಾಗಿದೆ. ರಣಜಿಯಲ್ಲಿ ಉತ್ತಮವಾಗಿ ಆಡಿದರೆ ಭಾರತ ತಂಡದಲ್ಲಿ ಅವಕಾಶ ಎನ್ನುತ್ತಾರೆ, ಆದರೆ ಅದೇ ರಣಜಿಯಲ್ಲಿ 7 ಶತಕ ಸಿಡಿಸಿ ಮಿಂಚಿರುವ ಕರುಣ್ ನಾಯರ್ ಗೆ ಭಾರತ ತಂಡದಲ್ಲಿ ಅವಕಾಶ ಇಲ್ಲ ಎನ್ನುತ್ತಾರೆ. ಇದು ಕೇವಲ ಕರ್ನಾಟಕ ಆಟಗಾರರಿಗೆ ಮಾತ್ರ ಆಗುತ್ತಿರುವ ಅನ್ಯಾಯವಲ್ಲ, ಬಹುತೇಕ ದಕ್ಷಿಣ ಭಾರತದ ರಾಜ್ಯಗಳ ಆಟಗಾರರ ಪರಿಸ್ಥಿತಿ ಇದೇ ಎನ್ನುವ ಆರೋಪ ಕೂಡ ಇದೆ.
ಎರಡು ಪಂದ್ಯಗಳಲ್ಲಿ ರನ್ ಗಳಿಸಿಲ್ಲ ಎನ್ನುವ ಕಾರಣಕ್ಕೆ ಮೂರನೇ ಪಂದ್ಯದಲ್ಲಿ ಕೆಎಲ್ ರಾಹುಲ್ರನ್ನು ಕೈಬಿಟ್ಟರೂ ಅಚ್ಚರಿ ಪಡಬೇಕಿಲ್ಲ. ಕೆಎಲ್ ರಾಹುಲ್ಗೆ ಈ ರೀತಿ ಮಾಡುತ್ತಿರುವುದು ಇದೇ ಮೊದಲೇನಲ್ಲ.












Click it and Unblock the Notifications