IPL 2023: ಬಿಸಿಸಿಐನಿಂದ ಕಡೆಗಣನೆ: ಐಪಿಎಲ್ಗೆ ಸಿದ್ಧತೆ ನಡೆಸಲು ರಾಜಸ್ಥಾನ ರಾಯಲ್ಸ್ ಕ್ಯಾಂಪ್ ಸೇರಿದ ಸಂಜು ಸ್ಯಾಮ್ಸನ್
ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲಿ ಆಯ್ಕೆಯಾಗದೆ ನಿರಾಸೆ ಅನುಭವಿಸಿದ ಸಂಜು ಸ್ಯಾಮ್ಸನ್ ಐಪಿಎಲ್ಗೆ ಸಿದ್ಧತೆ ಆರಂಭಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲಿ ಆಯ್ಕೆಯಾಗದೆ ನಿರಾಸೆ ಅನುಭವಿಸಿದ ಸಂಜು ಸ್ಯಾಮ್ಸನ್ ಐಪಿಎಲ್ಗೆ ಸಿದ್ಧತೆ ಆರಂಭಿಸಿದ್ದಾರೆ. ರಾಜಸ್ಥಾನ ರಾಯಲ್ಸ್ ಕ್ಯಾಂಪ್ ಸೇರಿರುವ ಕೇರಳ ಬ್ಯಾಟರ್ ನೆಟ್ಸ್ನಲ್ಲಿ ಬೆವರು ಹರಿಸುತ್ತಿದ್ದಾರೆ.
ಜನವರಿಯಲ್ಲಿ ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಮೊದಲನೇ ಪಂದ್ಯದಲ್ಲಿ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದ ಸಂಜು ಸ್ಯಾಮ್ಸನ್ ನಂತರ ಚೇತರಿಸಿಕೊಂಡಿದ್ದರು. ಸಂಪೂರ್ಣವಾಗಿ ಫಿಟ್ ಆದ ಬಳಿಕ ಎನ್ಸಿಎ ನಲ್ಲಿ ನಡೆದ ಫಿಟ್ನೆಸ್ ಪರೀಕ್ಷೆಯನ್ನು ಪಾಸು ಮಾಡಿದ್ದರು.

ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾದ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ತಂಡಕ್ಕೆ ಆಯ್ಕೆಯಾಗುವ ನಿರೀಕ್ಷೆ ಮಾಡಿದ್ದರು. ಆದರೆ, ಬಿಸಿಸಿಐ ಮತ್ತೆ ಸಂಜು ಸ್ಯಾಮ್ಸನ್ರನ್ನು ಕಡೆಗಣಿಸಿದೆ. ಸತತವಾಗಿ ವಿಫಲವಾದರೂ ಸೂರ್ಯಕುಮಾರ್ ಯಾದವ್ಗೆ ಮಣೆ ಹಾಕಿದೆ. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಮೂರನೇ ಏಕದಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ರನ್ನು ಆಡಿಸುವಂತೆ ಅಭಿಮಾನಿಗಳು, ಮಾಜಿ ಕ್ರಿಕೆಟಿಗರು ಒತ್ತಾಯಿಸಿದರೂ ಅದನ್ನು ಬಿಸಿಸಿಐ ಪರಿಗಣಿಸುವ ಸಾಧ್ಯತೆ ಕಡಿಮೆ ಇದೆ. ಈ ಬೆನ್ನಲ್ಲೇ ಸಂಜು ಸ್ಯಾಮ್ಸನ್ ಐಪಿಎಲ್ಗಾಗಿ ಅಭ್ಯಾಸ ಆರಂಭಿಸಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡವನ್ನು ಸೇರಿಕೊಂಡಿರುವ ಅವರು ನೆಟ್ಸ್ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡಿದರು. ಈ ವೇಳೆ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ.
ಶ್ರೇಯಸ್ ಅಯ್ಯರ್ ಬದಲಾಗಿಯೂ ಆಯ್ಕೆಗೆ ಪರಿಗಣಿಸಿಲ್ಲ
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಮೊದಲು ಶ್ರೇಯಸ್ ಅಯ್ಯರ್ ಆಯ್ಕೆಯಾಗಿದ್ದರು. ಆದರೆ ಬೆನ್ನು ನೋವಿನ ಕಾರಣದಿಂದ ಅವರು ಏಕದಿನ ಸರಣಿಯಿಂದ ಹೊರಗುಳಿದ ಬಳಿಕ ನಾಲ್ಕನೇ ಕ್ರಮಾಂಕದ ಬ್ಯಾಟರ್ ಸ್ಥಾನ ಖಾಲಿಯಾಗಿತ್ತು, ಸಂಜು ಸ್ಯಾಮ್ಸನ್ರನ್ನು ಪರಿಗಣಿಸುವ ಬಗ್ಗೆ ನಿರೀಕ್ಷೆ ಮಾಡಿತ್ತಾದರೂ, ತಂಡದ ಆಡಳಿತ ಮಂಡಳಿ ಸೂರ್ಯಕುಮಾರ್ ಯಾದವ್ರನ್ನು ಪರಿಗಣಿಸಿ ಬದಲೀ ಆಟಗಾರನನ್ನು ಆಯ್ಕೆ ಮಾಡದೆ ಸುಮ್ಮನಾಯಿತು. ಇದರೊಂದಿಗೆ ಸಂಜು ಸ್ಯಾಮ್ಸನ್ ಭಾರತ ತಂಡಕ್ಕೆ ಆಡಲೂ ಇನ್ನೂ ಕಾಯುವಂತೆ ಮಾಡಿದೆ.

ಗಾಯದಿಂದ ಚೇತರಿಸಿಕೊಂಡಿರುವ ಸಂಜು ಸ್ಯಾಮ್ಸನ್ ಸದ್ಯ ಜೋಧ್ಪುರದಲ್ಲಿದ್ದಾರೆ. ಅಲ್ಲಿ ರಾಜಸ್ಥಾನ ರಾಯಲ್ಸ್ ಶಿಬಿರವನ್ನು ಸೇರಿಕೊಂಡಿದ್ದರು, ಅಭ್ಯಾಸ ಆರಂಭಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದಿ ವಿಡಿಯೋದಲ್ಲಿ, ಸಂಜು ಸ್ಯಾಮ್ಸನ್ ಸಿಕ್ಸರ್ ಹೊಡೆಯುತ್ತಿರುವುದನ್ನು ನೋಡಬಹುದಾಗಿದೆ.
ಕಳೆದ ಸೀಸನ್ನಲ್ಲಿ ರನ್ನರ್ ಅಪ್ ಆಗಿದ್ದ ರಾಜಸ್ಥಾನ ರಾಯಲ್ಸ್
ಕಳೆದ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡ ಫೈನಲ್ ತಲುಪಿತ್ತು. ಫೈನಲ್ನಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಸೋಲನುಭವಿಸುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಈ ಬಾರಿಯ ಆವೃತ್ತಿಯಲ್ಲಿ ಕೂಡ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಕಪ್ ಗೆಲ್ಲುವ ಉತ್ಸಾಹದಲ್ಲಿದೆ ರಾಜಸ್ಥಾನ್ ರಾಯಲ್ಸ್ ತಂಡ.

ರಾಜಸ್ಥಾನ ರಾಯಲ್ಸ್ ತಂಡ: ಸಂಜು ಸ್ಯಾಮ್ಸನ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಶಿಮ್ರಾನ್ ಹೆಟ್ಮೆಯರ್, ದೇವದತ್ ಪಡಿಕ್ಕಲ್, ರಿಯಾನ್ ಪರಾಗ್, ಕೆಸಿ ಕಾರಿಯಪ್ಪ, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಾಹಲ್, ನವದೀಪ್ ಸೈನಿ, ಒಬೆದ್ ಮೆಕಾಯ್, ಕುಲದೀಪ್ ಸೇನ್, ಕುಲದೀಪ್ ಯಾದವ್, ಧ್ರುವ್ ಜುರೆಲ್, ಜೇಸನ್ ಹೋಲ್ಡರ್, ಡೊನಾವೊನ್ ಫೆರೇರಾ, ಕುನಾಲ್ ರಾಥೋರ್, ಆ್ಯಡಮ್ ಝಂಪಾ, ಕೆಎಂ ಆಸಿಫ್, ಮುರುಗನ್ ಅಶ್ವಿನ್, ಆಕಾಶ್ ವಸಿಸ್ಟ್, ಅಬ್ದುಲ್ ಪಿಎ, ಜೋ ರೂಟ್.












Click it and Unblock the Notifications