Ind vs SA: ಸ್ಮೃತಿ ಮಂಧಾನ ಭರ್ಜರಿ ಬ್ಯಾಟಿಂಗ್; ಸರಣಿ ಗೆದ್ದ ಭಾರತ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ 6 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ.
ಈ ಗೆಲುವಿನ ಮೂಲಕ ಮೂರು ಏಕದಿನ ಪಂದ್ಯಗಳ ಸರಣಿಯನ್ನು ಭಾರತ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಮತ್ತೊಮ್ಮೆ ಸ್ಮೃತಿ ಮಂಧಾನ ಅದ್ಭುತ ಬ್ಯಾಟಿಂಗ್ ಮೂಲಕ ಭಾರತ ಸುಲಭ ಗೆಲುವು ಸಾಧಿಸಲು ಕಾರಣವಾದರು.

ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 215 ರನ್ ಮಾತ್ರ ಗಳಿಸಿತು. ನಾಯಕಿ ಲೌರಾ ವೋಲ್ವಾರ್ಟ್ 57 ಎಸೆತಗಳಲ್ಲಿ 61 ರನ್ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು.
ನಾಯಕಿಯನ್ನು ಹೊರತುಪಡಿಸಿ ಉಳಿದ ಬ್ಯಾಟರ್ ಗಳಿಂದ ಉತ್ತಮ ಪ್ರದರ್ಶನ ಬರಲಿಲ್ಲ. ತಜೀಮ್ ಬಿಟ್ಸ್ 38 ರನ್, ನಾಡಿನೆ ಡಿ ಕ್ಲರ್ಕ್ 26 ರನ್ ಮತ್ತು ಮೈಕ್ ಡಿ ರಿಡ್ಡರ್ ಕೂಡ 26 ರನ್ ಗಳಿಸಿದರು. ದೀಪ್ತಿ ಶರ್ಮಾ ಮತ್ತು ಅರುಂಧತಿ ರೆಡ್ಡಿ ತಲಾ 2 ವಿಕೆಟ್ ಪಡೆದರು. ಶ್ರೇಯಾಂಕಾ ಪಾಟೀಲ್ ಮತ್ತು ಪುಜಾ ವಸ್ತ್ರಾಕರ್ ತಲಾ ಒಂದು ವಿಕೆಟ್ ಪಡೆದರು.
ಸ್ಮೃತಿ ಮಂಧಾನ ಭರ್ಜರಿ ಬ್ಯಾಟಿಂಗ್
ಈ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಭಾರತಕ್ಕೆ ಮತ್ತೊಮ್ಮೆ ಸ್ಮೃತಿ ಮಂಧಾನ ಆಸರೆಯಾದರು. ಸರಣಿಯ ಮೊದಲ ಎರಡೂ ಪಂದ್ಯಗಳಲ್ಲಿ ಶತಕ ಸಿಡಿಸಿದ್ದ ಸ್ಮೃತಿ ಮಂಧಾನ ಸತತ ಮೂರನೇ ಶತಕ ಗಳಿಸುವ ಅವಕಾಶ ತಪ್ಪಿಸಿಕೊಂಡರು. 83 ಎಸೆತಗಳಲ್ಲಿ 11 ಬೌಂಡರಿ ಸಹಿತ 90 ರನ್ ಗಳಿಸಿ ಔಟಾದರು.
ಸತತ ಮೂರನೇ ಶತಕ ಗಳಿಸುವ ಅವಕಾಶ ತಪ್ಪಿಸಿಕೊಂಡರೂ, ಮೂರು ಪಂದ್ಯಗಳಲ್ಲಿ 343 ರನ್ ಗಳಿಸಿದ ಅವರು, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎನ್ನುವ ದಾಖಲೆ ಬರೆದರು.
ಶೆಫಾಲಿ ವರ್ಮಾ 25 ರನ್, ಪ್ರಿಯಾ ಪುನಿಯಾ 28 ರನ್, ಹರ್ಮನ್ಪ್ರೀತ್ ಕೌರ್ 42 ರನ್ ಗಳಿಸಿದರು. ಜೆಮಿಮಾ ರೋಡ್ರಿಗಸ್ ಅಜೇಯ 19 ರನ್ ಗಳಿಸಿದರೆ, ರಿಚಾ ಘೋಷ್ ಅಜೇಯ 6 ರನ್ ಗಳಿಸಿದರು. 40.4 ಓವರ್ ಗಳಲ್ಲಿ 220 ರನ್ ಗಳಿಸಿದ ಭಾರತ 6 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು.
ಏಕದಿನ ಸರಣಿ ಮುಕ್ತಾಯವಾಗಿದ್ದು, ಜೂನ್ 28ರಂದು ಏಕೈಕ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಬಳಿಕ ಮೂರು ಪಂದ್ಯಗಳ ಟಿ20 ಸರಣಿ ಆಡಲಿವೆ.












Click it and Unblock the Notifications