India vs England: ವಿರಾಟ್ ಕೊಹ್ಲಿ ವಾಪಸ್; ಹರ್ಷಿತ್ ರಾಣಾಗೆ ಇಲ್ಲ ಚಾನ್ಸ್?
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 4-1 ಅಂತರದಲ್ಲಿ ಗೆಲುವು ಸಾಧಿಸಿರುವ ಭಾರತ ಏಕದಿನ ಸರಣಿಯ ಮೊದಲ ಪಂದ್ಯವನ್ನು ಗೆದ್ದಿದ್ದು ಇದೀಗ ಎರಡನೇ ಪಂದ್ಯವನ್ನು ಗೆದ್ದು ಏಕದಿನ ಸರಣಿಯನ್ನು ಗೆಲ್ಲುವ ವಿಶ್ವಾಸದಲ್ಲಿದೆ. ಭಾನುವಾರ ಕಟಕ್ನಲ್ಲಿ ಎರಡನೇ ಪಂದ್ಯ ನಡೆಯಲಿದ್ದು ಮೊದಲನೇ ಪಂದ್ಯದಲ್ಲಿ ತಂಡದಿಂದ ಹೊರಗುಳಿದಿದ್ದ ವಿರಾಟ್ ಕೊಹ್ಲಿ ಎರಡನೇ ಪಂದ್ಯದಲ್ಲಿ ಆಡಲು ಸಜ್ಜಾಗಿದ್ದಾರೆ.
ನಾಗ್ಪುರದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಮೊದಲ ಪಂದ್ಯ ಆಡಿದ ಹರ್ಷಿತ್ ರಾಣಾ ಮೂರು ವಿಕೆಟ್ ಪಡೆದು ಮಿಂಚಿದ್ದರು, ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ಎರಡನೇ ಪಂದ್ಯದಲ್ಲಿ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಕಟಕ್ನಲ್ಲಿ ಭಾರತ ತಂಡದಲ್ಲಿ ಎರಡು ಬದಲಾವಣೆ ಮಾಡುವ ಸಾಧ್ಯತೆ ಇದೆ. ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಗಾಯಗೊಂಡಿದ್ದರಿಂದ ಶ್ರೇಯಸ್ ಅಯ್ಯರ್ ಅವಕಾಶ ಪಡೆದಿದ್ದರು. ಮೊದಲ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಅಯ್ಯರ್ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿದ್ದು ಎರಡನೇ ಪಂದ್ಯದಲ್ಲಿ ಜೈಸ್ವಾಲ್ರನ್ನು ತಂಡದಿಂದ ಕೈಬಿಡುವ ಸಾಧ್ಯತೆ ಇದೆ.
ಯಶಸ್ವಿ ಜೈಸ್ವಾಲ್ ಮೊದಲ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶ ನೀಡಲಿಲ್ಲ. ಜೈಸ್ವಾಲ್ ವಿರಾಟ್ ಕೊಹ್ಲಿಗೆ ಜಾಗ ಮಾಡಿಕೊಡಬೇಕಾಬಹುದು. ಒಂದು ವೇಳೆ ಜೈಸ್ವಾಲ್ ಹೊರಗುಳಿದರೆ ರೋಹಿತ್ ಶರ್ಮಾ ಜೊತೆ ಶುಭಮನ್ ಗಿಲ್ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ.
ಮೊದಲ ಪಂದ್ಯಕ್ಕೆ ಮುನ್ನ ವಿರಾಟ್ ಕೊಹ್ಲಿ ಬಲ ಮೊಣಕಾಲು ಊದಿಕೊಂಡಿದ್ದರಿಂದ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳುವುದು ಬೇಡವೆಂದು ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ಗೌತಮ್ ಗಂಭೀರ್ ಎಂದು ನಿರ್ಧರಿಸಿದ ಕಾರಣ ಕೊಹ್ಲಿ ಪಂದ್ಯದಿಂದ ಹೊರಗುಳಿದರು.
ರಾಣಾ ಬದಲಿಗೆ ಅರ್ಶದೀಪ್ ಸಿಂಗ್
ಎರಡನೇ ಪಂದ್ಯದಲ್ಲಿ ಮತ್ತೊಂದು ಬದಲಾವನೆ ಮಾಡುವ ಸಾಧ್ಯತೆ ಇದೆ. ಹರ್ಷಿತ್ ರಾಣಾ ಬದಲಾಗಿ ಅರ್ಶದೀಪ್ ಸಿಂಗ್ ಆಡುವ ಸಾಧ್ಯತೆ ಇದೆ. ನಾಗ್ಪುರದಲ್ಲಿ ಮೊದಲ ಏಕದಿನ ಪಂದ್ಯ ಆಡಿದ್ದ ರಾಣಾ ಉತ್ತಮ ಪ್ರದರ್ಶನ ನೀಡಿದರು.
ಅರ್ಷದೀಪ್ ಸಿಂಗ್ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಆಡಬೇಕಾಗಿರುವ ಕಾರಣ ಅವರನ್ನು ಆಡಿಸಲೇಬೇಕಾದ ಅನಿವಾರ್ಯತೆ ಇದೆ. ಅರ್ಷದೀಪ್ ಸಿಂಗ್ ಕಳೆದ ವರ್ಷ ಆಗಸ್ಟ್ನಿಂದ ಏಕದಿನ ಪಂದ್ಯ ಆಡಿಲ್ಲ, ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಿದ್ದರೂ, ಜಸ್ಪ್ರೀತ್ ಬುಮ್ರಾ ಅವರ ಫಿಟ್ನೆಸ್ ಬಗ್ಗೆ ಇನ್ನೂ ಅನುಮಾನ ಇರುವ ಕಾರಣ ಚಾಂಪಿಯನ್ಸ್ ಟ್ರೋಫಿಯಲ್ಲಿ ಪ್ರಮುಖ ಬೌಲರ್ ಆಗಿ ಆಡಬೇಕಾಗುತ್ತದೆ. ಮೊಹಮ್ಮದ್ ಶಮಿ ಫಿಟ್ನೆಸ್ ಕೂಡ 100% ಖಚಿತವಾಗಿಲ್ಲ.
2ನೇ ಏಕದಿನ ಪಂದ್ಯಕ್ಕೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಅರ್ಶದೀಪ್ ಸಿಂಗ್.












Click it and Unblock the Notifications